ಪದ್ಯ ೧೩: ದೇವತೆಗಳು ಯಾವ ನಗರಕ್ಕೆ ಮುತ್ತಿಗೆ ಹಾಕಿದರು?

ಆಳು ನಡೆದುದು ಮುಂಗುಡಿಯ ಹರಿ
ಧಾಳಿ ನೂಕಿ ಹಿರಣ್ಯ ನಗರಿಯ
ಮೂಲೆಗೈದಿತು ಹೊಯ್ದರಲ್ಲಿಯ ಬಿನುಗು ಬಿಚ್ಚಟೆಯ
ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳ ದನುಜ ಪುರೋಪಕಂಠದ
ಕೂಲವತಿಗಳ ತೀರದಲಿ ಬಿಡಿಸಿದೆನು ಪಾಳೆಯವ (ಅರಣ್ಯ ಪರ್ವ, ೧೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ದೇವತೆಗಳ ಮುಂಭಾಗದಲ್ಲಿದ್ದ ಸೈನಿಕರು ಹಿರಣ್ಯಕ ಪುರದ ಹೊರವಲಯವನ್ನು ಸೇರಿ ಅಲ್ಲಿದ್ದ ದುರ್ಬಲ ದೈತ್ಯರನ್ನೆಲ್ಲಾ ಹೊಡೆದರ್. ಕಹಳೆಗಳ ಧ್ವನಿಯ ಘೋಷದ ನಡುವೆ ಆ ನಗರದ ಪಕ್ಕದ ನದಿಗಳ ತೀರದಲ್ಲಿ ದೇವ ಸೈನ್ಯವು ಬೀಡು ಬಿಟ್ಟಿತು.

ಅರ್ಥ:
ಆಳು: ಸೈನ್ಯ; ನಡೆ: ಚಲಿಸು; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ಹರಿ: ಕುದುರೆ; ಧಾಳಿ: ಆಕ್ರಮಣ; ನೂಕು: ತಳ್ಳು; ನಗರಿ: ಊರು; ಮೂಲೆ: ಕೊನೆ; ಐದು: ಸೇರು; ಹೊಯ್ದು: ಹೊಡೆ; ಬಿನುಗು: ಅಲ್ಪ; ಬಿಚ್ಚಟೆ: ವಿಸ್ತಾರ; ಸೂಳವಿಸು: ಧ್ವನಿಮಾಡು; ಸನ್ನೆ: ಗುರುತು; ನಿಸ್ಸಾಳ: ಚರ್ಮವಾದ್ಯ; ದನುಜ: ರಾಕ್ಷಸ; ಪುರ: ಊರು; ಪುರೋಪಕಂಠ: ಊರಿನ ಹತ್ತಿರ; ಕೂಲವತಿ: ನದಿ; ತೀರ: ದಡ; ಬಿಡಿಸು: ಕಳಚು, ಸಡಿಲಿಸು; ಪಾಳೆ: ಸೀಮೆ;

ದವಿಂಗಡಣೆ:
ಆಳು+ ನಡೆದುದು +ಮುಂಗುಡಿಯ +ಹರಿ
ಧಾಳಿ +ನೂಕಿ +ಹಿರಣ್ಯ +ನಗರಿಯ
ಮೂಲೆಗೈದಿತು +ಹೊಯ್ದರ್+ಅಲ್ಲಿಯ +ಬಿನುಗು +ಬಿಚ್ಚಟೆಯ
ಸೂಳವಿಸಿದವು+ ಸನ್ನೆಯಲಿ +ನಿ
ಸ್ಸಾಳ +ದನುಜ+ ಪುರೋಪಕಂಠದ
ಕೂಲವತಿಗಳ+ ತೀರದಲಿ+ ಬಿಡಿಸಿದೆನು +ಪಾಳೆಯವ

ಅಚ್ಚರಿ:
(೧) ಪುರೋಪಕಂಠ, ಕೂಲವತಿ, ಹರಿಧಾಳಿ, ಬಿಚ್ಚಟೆ – ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ