ಪದ್ಯ ೧೧: ಅರ್ಜುನನ ಜೊತೆ ಯಾರು ಬಂದರು?

ಈ ರಥವನೇ ಹೂಡಿಸಿದೆ ನೀ
ಸಾರಥಿಯ ಬೆಸಸಿದೆನುಸುರ ಪರಿ
ವಾರ ನೆರೆದುದನೆಣಿಸಲಳವೇ ಕೋಟಿ ಜಿಹ್ವೆಯಲಿ
ವಾರಣದ ಹಯ ರಥ ಪದಾತಿಯ
ಭಾರಣೆಗೆ ದೆಸೆ ನೆರೆಯದಿಂದ್ರನ
ವೀರ ಭಟರೆನ್ನೊಡನೆ ನೆರೆದುದು ರಾಯ ಕೇಳೆಂದ (ಅರಣ್ಯ ಪರ್ವ, ೧೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅಣ್ಣ ಕೇಳು, ಈ ರಥವನ್ನು ಇದೇ ಸಾರಥಿಯಿಂದ ಅಣಿಗೊಳಿಸಿದೆನು, ಎಷ್ಟು ಜನ ದೇವತೆಗಳು ಬಂದರೋ ಏನೋ ತಿಳಿಯದು, ಕೋಟಿ ನಾಲಿಗೆಗಳು ಎಣಿಸಲಾರದಷ್ಟು ಮಂದಿ ಬಂದರು, ಚತುರಂಗ ಸೈನ್ಯಕ್ಕೆ ದಿಕ್ಕುಗಳು ಸಾಲಲಿಲ್ಲ ಇಂದ್ರನ ವೀರಭಟರು ನನ್ನ ಜೊತೆ ಬಂದರು ಎಂದು ಅರ್ಜುನನು ವಿವರಿಸಿದನು.

ಅರ್ಥ:
ರಥ: ಬಂಡಿ; ಹೂಡಿಸು: ಅಣಿಗೊಳಿಸು; ಸಾರಥಿ: ರಥವನ್ನು ಓಡಿಸುವವ; ಬೆಸ: ಕೆಲಸ, ಕಾರ್ಯ; ಸುರ: ದೇವತೆ; ಪರಿವಾರ: ಪರಿಜನ, ಸಂಬಂಧಿಕರು; ನೆರೆ: ಸೇರು, ಜೊತೆಗೂಡು; ಎಣಿಸು: ಲೆಕ್ಕ ಮಾಡು; ಕೋಟಿ: ಲೆಕ್ಕವಿಲ್ಲದಷ್ಟು; ಜಿಹ್ವೆ: ನಾಲಗೆ; ವಾರಣ: ಆನೆ; ಹಯ: ಕುದುರೆ; ಪದಾತಿ: ಕಾಲಾಳು, ಸೈನಿಕರು; ಭಾರಣೆ: ಮಹಿಮೆ, ಗೌರವ; ದೆಸೆ: ದಿಕ್ಕು; ಇಂದ್ರ: ಸುರಪತಿ; ವೀರ: ಶೂರ; ಭಟ: ಸೈನಿಕ; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಈ +ರಥವನೇ +ಹೂಡಿಸಿದೆನ್+ಈ
ಸಾರಥಿಯ+ ಬೆಸಸಿದೆನು +ಸುರ +ಪರಿ
ವಾರ +ನೆರೆದುದನ್+ಎಣಿಸಲಳವೇ+ ಕೋಟಿ +ಜಿಹ್ವೆಯಲಿ
ವಾರಣದ+ ಹಯ +ರಥ+ ಪದಾತಿಯ
ಭಾರಣೆಗೆ+ ದೆಸೆ+ ನೆರೆಯದ್+ಇಂದ್ರನ
ವೀರ +ಭಟರ್+ಎನ್ನೊಡನೆ +ನೆರೆದುದು +ರಾಯ +ಕೇಳೆಂದ

ಅಚ್ಚರಿ:
(೧) ಪರಿವಾರ, ವಾರಣ – ವಾರ ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ