ಪದ್ಯ ೯: ದೇವೇಂದ್ರನು ಅರ್ಜುನನಲ್ಲಿ ಏನು ಬೇಡಿದನು?

ಅವರುಪೇಕ್ಷೆಯ ಉಳಿವಿನಲಿ ನ
ಮ್ಮವರ ಬೇಹಿನ ಸುಳಿವಿನಲಿ ಮೇ
ಣವರನಳುಕಿಸುವಾಧಿದೈವಿಕ ಕರ್ಮಗತಿಗಳಲಿ
ದಿವಿಜರಿಮ್ದವರುಳಿದರಾ ದಾ
ನವರ ಮರ್ದಿಸಿ ದೇವಲೋಕವ
ನೆವಗೆ ನಿರುಪದ್ರವದಲಿಡೆ ಮಾಡೆಂದನಮರೇಂದ್ರ (ಅರಣ್ಯ ಪರ್ವ, ೧೩ ಸಂಧಿ, ೯ ಪದ್ಯ)

ತಾತ್ಪರ್ಯ:
ದೇವತೆಗಳನ್ನು ದಾನವರು ಉಪೇಕ್ಷಿಸುವುದು ಮುಂದುವರೆದಿದೆ, ನಮ್ಮ ಬೇಹುಗಾರಿಕೆಯೂ ಅವರ ನಾಶಕ್ಕಾಗಿ ಮಾಡಿದ ದೈವಿಕ ಕರ್ಮಗಳೂ ಅವರನ್ನು ಏನೂ ಮಾಡಲಿಲ್ಲ. ಅವರು ನಾಶವಾಗಲಿಲ್ಲ. ಅವರನ್ನು ಮರ್ದಿಸಿ, ಸ್ವರ್ಗ ಲೋಕಕ್ಕೆ ಯಾವ ಉಪದ್ರವವೂ ಇಲ್ಲದಂತೆ ಮಾಡು ಎಂದು ಇಂದ್ರನು ನನಗೆ ಹೇಳಿದನು.

ಅರ್ಥ:
ಉಪೇಕ್ಷೆ: ಅಲಕ್ಷ್ಯ, ಕಡೆಗಣಿಸುವಿಕೆ; ಉಳಿವು: ಬದುಕುವಿಕೆ, ಜೀವನ; ಬೇಹು: ಗುಪ್ತಚಾರನ ಕೆಲಸ, ಗೂಢಚರ್ಯೆ; ಸುಳಿವು: ಗುರುತು, ಕುರುಹು; ಮೇಣ್: ಮತ್ತು, ಅಥವ; ಅಳುಕಿಸು: ಅಳಿಸು, ಇಲ್ಲವಾಗಿಸು; ಅಧಿದೈವ: ಮುಖ್ಯ ಅಥವ ಪ್ರಮುಖವಾದ ದೇವ; ಕರ್ಮ:ಕೆಲಸ, ಕಾರ್ಯ; ಗತಿ: ಗಮನ, ಸಂಚಾರ; ದಿವಿಜ: ದೇವತೆ; ದಾನವ: ರಾಕ್ಷಸ; ಮರ್ದಿಸು: ಸಾಯಿಸು; ದೇವಲೋಕ: ಸ್ವರ್ಗ; ಉಪದ್ರವ: ಕಾಟ; ಅಮರೇಂದ್ರ: ಇಂದ್ರ;

ಪದವಿಂಗಡಣೆ:
ಅವರ್+ಉಪೇಕ್ಷೆಯ +ಉಳಿವಿನಲಿ +ನ
ಮ್ಮವರ +ಬೇಹಿನ+ ಸುಳಿವಿನಲಿ+ ಮೇಣ್
ಅವರನ್+ಅಳುಕಿಸುವ+ಅಧಿದೈವಿಕ+ ಕರ್ಮ+ಗತಿಗಳಲಿ
ದಿವಿಜರಿಂದ್+ಅವರ್+ಉಳಿದರಾ+ ದಾ
ನವರ +ಮರ್ದಿಸಿ +ದೇವಲೋಕವನ್
ಎವಗೆ+ ನಿರುಪದ್ರವದಲಿಡೆ+ ಮಾಡೆಂದನ್+ಅಮರೇಂದ್ರ

ಅಚ್ಚರಿ:
(೧) ಉಳಿವಿನಲಿ, ಸುಳಿವಿನಲಿ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ