ಪದ್ಯ ೧೦: ಅರ್ಜುನನು ಇಂದ್ರನಿಗೆ ಏನು ಹೇಳಿದ?

ಹೈ ಹಸಾದವು ನಿಮ್ಮ ಕೃಪೆಯವ
ಗಾಹಿಸುವೊಡರಿದೇನು ದೈತ್ಯರು
ಸಾಹಸಿಗರೇ ಸದೆವೆನೀ ಸುರಜನಕೆ ಹಿತವಹರೆ
ಆ ಹರಾಸ್ತ್ರದೊಳಮರ ವೈರಿ
ವ್ಯೂಹ ಭಂಜನವಹುದು ನಿಷ್ಪ್ರ
ತ್ಯೂಹ ನಿಶ್ಚಯವೆಂದು ಬಿನ್ನವಿಸಿದೆನು ಸುರಪತಿಗೆ (ಅರಣ್ಯ ಪರ್ವ, ೧೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ದೇವತೆಗಳ ಪಾಡನ್ನು ಇಂದ್ರನಿಂದ ಕೇಳಿದ ಅರ್ಜುನನು, ಓಹೋ ಮಹಾ ಪ್ರಸಾದ, ನಿಮ್ಮ ಕೃಪಾದೃಷ್ಟಿಯಿದ್ದರೆ ಏನು ತಾನೇ ಅಸಾಧ್ಯ! ನಿವಾತ ಕವಚರು ಸಾಹಸಿಗಳೇನು? ಆಗಲಿ, ದೇವತೆಗಳಿಗೆ ಹಿತವಾಗುವುದಾದರೆ ಅವರನ್ನು ಬಡಿದು ಹಾಕುತ್ತೇನೆ, ಪಾಶುಪತಾಸ್ತ್ರದಿಂದ ರಾಕ್ಷಸರ ವ್ಯೂಹವನ್ನು ಮುರಿದು ನಿಮಗೆ ಯಾವ ತೊಂದರೆಯೂ ಇಲ್ಲದಂತೆ ಮಾಡುತ್ತೇನೆ ಎಂದು ಅರ್ಜುನನು ದೇವೇಂದ್ರನಿಗೆ ಹೇಳಿದನು.

ಅರ್ಥ:
ಹಸಾದ: ಮಹಾ ಪ್ರಸಾದ; ಕೃಪೆ: ದಯೆ; ಅವಗಾಹಿಸು: ಮಗ್ನವಾಗಿರುವಿಕೆ; ಅರಿ: ಕತ್ತರಿಸು; ದೈತ್ಯ: ರಾಕ್ಷಸ; ಸಾಹಸಿ: ಬಲಶಾಲಿ; ಸದೆ: ಹೊಡಿ; ಸುರಜನ: ದೇವತೆ; ಹಿತ: ಒಳ್ಳೆಯದು; ಹರ: ಶಂಕರ; ಅಸ್ತ್ರ; ಶಸ್ತ್ರ; ಅಮರ: ದೇವತೆ; ವೈರಿ: ರಿಪು, ಶತ್ರು; ವ್ಯೂಹ: ಜಾಲ; ಭಂಜನ: ನಾಶಕಾರಿ; ಪ್ರತ್ಯೂಹ: ಅಡ್ಡಿ, ಅಡಚಣೆ; ನಿಶ್ಚಯ: ನಿರ್ಣಯ; ಬಿನ್ನವಿಸು: ವಿಜ್ಞಾಪಿಸು; ಸುರಪತಿ: ಇಂದ್ರ;

ಪದವಿಂಗಡಣೆ:
ಹೈ+ ಹಸಾದವು+ ನಿಮ್ಮ +ಕೃಪೆ+ಅವ
ಗಾಹಿಸುವೊಡ್+ಅರಿದೇನು+ ದೈತ್ಯರು
ಸಾಹಸಿಗರೇ+ ಸದೆವೆನ್+ಈ+ ಸುರಜನಕೆ +ಹಿತವಹರೆ
ಆ +ಹರಾಸ್ತ್ರದೊಳ್+ಅಮರ +ವೈರಿ
ವ್ಯೂಹ +ಭಂಜನವ್+ಅಹುದು +ನಿಷ್ಪ್ರ
ತ್ಯೂಹ +ನಿಶ್ಚಯವೆಂದು +ಬಿನ್ನವಿಸಿದೆನು +ಸುರಪತಿಗೆ

ಅಚ್ಚರಿ:
(೧) ಅರ್ಜುನನು ಅಭಯವನ್ನು ನೀಡುವ ಪರಿ – ದೈತ್ಯರು ಸಾಹಸಿಗರೇ ಸದೆವೆನೀ ಸುರಜನಕೆ ಹಿತವಹರೆ

ನಿಮ್ಮ ಟಿಪ್ಪಣಿ ಬರೆಯಿರಿ