ಪದ್ಯ ೧೯: ಸುರವಿಮಾನದಲ್ಲಿ ಯಾರು ಬಂದರು?

ಅರಸ ಕೇಳೈ ಹಿಮದ ಹೊಯ್ಲಿನ
ಸರಸಿಜಕೆ ರವಿಯಂತೆ ಶಿಶಿರದ
ಸರಿದಲೆಯ ವನದಲಿ ವಸಂತನ ಬರವಿನಂದದಲಿ
ಸುರವಿಮಾನ ಶ್ರೇಣಿಗಳ ನವ
ಪರಿಮಳದ ಪೂರದಲಿ ಭಾರತ
ವರುಷಕಿಳಿದನು ಪಾರ್ಥ ಬಂದನು ಧರ್ಮಜನ ಹೊರೆಗೆ (ಅರಣ್ಯ ಪರ್ವ, ೧೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಹಿಮವರ್ಷದಿಂದ ನಲುಗಿದ ಕಮಲಕ್ಕೆ ಸೂರ್ಯನು ಗೋಚರವಾದಮ್ತೆ, ಶಿಶಿರದ ಚಳಿಯಿಂದ ನಲುಗಿದ ವನಕ್ಕೆ ವಸಂತ ಋತುವು ಬಂದಂತೆ, ದೇವತೆಗಳ ವಿಮಾನದ ಸುಗಂಧವು ಎಲ್ಲೆಡೆ ವ್ಯಾಪಿಸುತ್ತಿರಲು, ಅರ್ಜುನನು ಭಾರತ ವರ್ಷಕ್ಕಿಳಿದು ಧರ್ಮಜನ ಬಳಿಗೆ ಬಂದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಹಿಮ: ಮಂಜಿನ ಹನಿ; ಹೊಯ್ಲು: ಹೊಡೆತ; ಸರಸಿಜ: ಕಮಲ; ರವಿ: ಭಾನು; ಶಿಶಿರ: ಹಿಮ, ಮಂಜು, ಚಳಿಗಾಲ; ಸರಿ: ಹೋಗು, ಗಮಿಸು; ವನ: ಕಾಡು; ಬರವು: ಆಗಮನ; ಸುರ: ದೇವತೆ; ವಿಮಾನ: ಆಗಸದಲ್ಲಿ ಹಾರುವ ವಾಹನ; ಶ್ರೇಣಿ: ಪಂಕ್ತಿ, ಸಾಲು; ನವ: ಹೊಸ; ಪರಿಮಳ: ಸುಗಂಧ; ಪೂರ: ಪೂರ್ಣ, ತುಂಬ; ವರುಷ: ಭೂ ಮಂಡಲದ ಒಂಭತ್ತು ವಿಭಾಗಗಳಲ್ಲಿ ಒಂದು; ಇಳಿ: ಕೆಳಕ್ಕೆ ಬಾ; ಬಂದನು: ಆಗಮಿಸು; ಹೊರೆ: ಸಮೀಪ;

ಪದವಿಂಗಡಣೆ:
ಅರಸ +ಕೇಳೈ + ಹಿಮದ +ಹೊಯ್ಲಿನ
ಸರಸಿಜಕೆ+ ರವಿಯಂತೆ +ಶಿಶಿರದ
ಸರಿದಲೆಯ +ವನದಲಿ+ ವಸಂತನ+ ಬರವಿನಂದದಲಿ
ಸುರ+ವಿಮಾನ +ಶ್ರೇಣಿಗಳ +ನವ
ಪರಿಮಳದ +ಪೂರದಲಿ +ಭಾರತ
ವರುಷಕಿಳಿದನು +ಪಾರ್ಥ +ಬಂದನು +ಧರ್ಮಜನ +ಹೊರೆಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಿಮದ ಹೊಯ್ಲಿನ ಸರಸಿಜಕೆ ರವಿಯಂತೆ; ಶಿಶಿರದ
ಸರಿದಲೆಯ ವನದಲಿ ವಸಂತನ ಬರವಿನಂದದಲಿ

ನಿಮ್ಮ ಟಿಪ್ಪಣಿ ಬರೆಯಿರಿ