ಪದ್ಯ ೧೪: ಪಾಂಡವರನ್ನು ಗಂಧಮಾದನದಲ್ಲಿ ಯಾರು ಸ್ವಾಗತಿಸಿದರು?

ಕೊಂದನವನನು ವಿಗತಶಾಪನು
ನಿಂದನಿದಿರಲಿ ಯಕ್ಷರೂಪಿನ
ಲಂದಗಸ್ತ್ಯನ ಶಾಪ ವೃತ್ತಾಂತವನು ವಿವರಿಸಿದ
ಬಂದನಲ್ಲಿಗೆ ಯಕ್ಷಪತಿ ನಲ
ವಿಂದಲಿವರನು ವಿವಿಧ ವಸ್ತುಗ
ಳಿಂದ ಸತ್ಕರಿಸಿದನು ಕೊಂಡಾಡಿದನು ಪಾಂಡವರ (ಅರಣ್ಯ ಪರ್ವ, ೧೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭೀಮನು ಮಣಿಮಂತನನ್ನು ಸಂಹರಿಸಿದನು. ಆಗ ಅವನು ತನ್ನ ಶಾಪವನ್ನು ಕಳೆದುಕೊಂಡು ಯಕ್ಷರೂಪಿನಿಂದ ನಿಂತು ತನ್ನ ವೃತ್ತಾಂತವನ್ನು ಹೇಳಿಕೊಂಡನು. ಆ ವೇಳೆಗೆ ಯಕ್ಷರೊಡೆಯನಾದ ಕುಬೇರನು ಅಲ್ಲಿಗೆ ಬಂದು ಪಾಂಡವರನ್ನು ಹೊಗಳಿ ಅವರಿಗೆ ಅನೇಕ ಉತ್ತಮ ವಸ್ತುಗಳನ್ನು ಕೊಟ್ಟು ಸತ್ಕರಿಸಿದನು.

ಅರ್ಥ:
ಕೊಂದು: ಸಾಯಿಸು; ವಿಗತ: ಕಳೆದುಹೋದ; ಶಾಪ: ನಿಷ್ಠುರದ ನುಡಿ; ನಿಂದು: ನಿಲ್ಲು; ಇದಿರು: ಎದುರು; ಯಕ್ಷ: ದೇವತೆಗಳ ವರ್ಗ; ರೂಪ: ಆಕಾರ; ಅಂದು: ಹೇಳು; ವೃತ್ತಾಂತ: ಘಟನೆ, ಸಂಗತಿ; ವಿವರ: ವಿಸ್ತಾರ; ಬಂದು: ಆಗಮಿಸು; ಯಕ್ಷಪತಿ: ಕುಬೇರ; ನಲವು: ಸಂತೋಷ; ವಿವಿಧ: ಹಲವಾರು; ವಸ್ತು: ಪದಾರ್ಥ; ಸತ್ಕರಿಸು: ಗೌರವಿಸು; ಕೊಂಡಾಡು: ಹೊಗಳು;

ಪದವಿಂಗಡಣೆ:
ಕೊಂದನ್+ಅವನನು +ವಿಗತ+ಶಾಪನು
ನಿಂದನ್+ಇದಿರಲಿ +ಯಕ್ಷರೂಪಿನಲ್
ಅಂದ್+ಅಗಸ್ತ್ಯನ +ಶಾಪ +ವೃತ್ತಾಂತವನು +ವಿವರಿಸಿದ
ಬಂದನಲ್ಲಿಗೆ +ಯಕ್ಷಪತಿ +ನಲ
ವಿಂದಲ್+ಇವರನು +ವಿವಿಧ +ವಸ್ತುಗ
ಳಿಂದ +ಸತ್ಕರಿಸಿದನು +ಕೊಂಡಾಡಿದನು +ಪಾಂಡವರ

ಅಚ್ಚರಿ:
(೧) ಅಗಸ್ತ್ಯ ಶಾಪದ ಕಥೆ: ಹಿಂದೆ ಕುಬೇರನು ತನ್ನ ಸೈನ್ಯದೊಡನೆ ಯುದ್ಧಕ್ಕೆ ಹೋಗುತ್ತಿರುವಾಗ ಮಣಿಮಂತನು ಅಗಸ್ತ್ಯ ಋಷಿಗಳ ಮೇಲೆ ಉಗುಳಲು ಅವನು ನಿನ್ನ ಸೈನ್ಯವನ್ನು ಒಬ್ಬ ಮನುಷ್ಯನು ಸಂಹರಿಸುವವರೆಗೆ ನೀನು ರಾಕ್ಷಸನಾಗಿರು ಎಂದು ಶಪಿಸಿದ್ದನು.

ನಿಮ್ಮ ಟಿಪ್ಪಣಿ ಬರೆಯಿರಿ