ತೊಳೆದು ಚರಣಾನನವ ನಡುಗೊಳ
ದೊಳಗೆ ಹೊಕ್ಕಡಿಗಡಿಗೆ ಮಿಗೆ ಮು
ಕ್ಕುಳಿಸಿ ತೀರದಲುಗುಳಿ ದಿವ್ಯಾಂಭೋಜ ಪರಿಮಳವ
ತಳುವದಲೆ ತನಿಹೊರೆದ ಶೀತಳ
ಜಲವ ಕೊಂಡಾಪ್ಯಾಯಿತಾಂತ
ರ್ಲಲಿತ ಹೃದಯನು ನಿಮಿರ್ದುಹಿಡಿದನು ಕಮಲ ಪಂಕ್ತಿಗಳ (ಅರಣ್ಯ ಪರ್ವ, ೧೧ ಸಂಧಿ, ೫೭ ಪದ್ಯ)
ತಾತ್ಪರ್ಯ:
ಸರೋವರದ ಮಧ್ಯೆ ಹೆಜ್ಜೆಯಿಟ್ಟು ನಡೆದು ಭೀಮನು ಕಾಲು, ಮುಖಗಳನ್ನು ತೊಳೆದು, ಕೊಳದ ನೀರಿನಿಂದ ಬಾಯಿಯನ್ನು ಮುಕ್ಕುಳಿಸಿ ದಡದ ಮೇಲುಗುಳಿದನು. ದಿವ್ಯ ಪರಿಮಳದ ಕಮಲ ಗಂಧವನ್ನು ಹೊತ್ತ ತಣ್ಣನೆಯ ನೀರನ್ನು ಕುಡಿದು ಮನಸ್ಸು ಆಪ್ಯಾಯನಗೊಳ್ಳಲು, ಕಮಲಪುಷ್ಪಗಳನ್ನು ಕೈಯಲ್ಲಿ ಹಿಡಿದನು.
ಅರ್ಥ:
ತೊಳೆದು: ಸ್ವಚ್ಛಮಾಡು, ಶುದ್ಧಗೊಳಿಸು; ಚರಣ: ಪಾದ; ಆನನ: ಮುಖ; ನಡುಕೊಳ: ಕೊಳದ ಮಧ್ಯೆ; ಹೊಕ್ಕು: ಸೇರು; ಆಡಿಗಡಿ: ಹೆಜ್ಜೆ ಹೆಜ್ಜೆ; ಮಿಗೆ: ಮತ್ತು, ಅಧಿಕ; ಮುಕ್ಕುಳಿಸು: ಬಾಯಿಂದ ನೀರನ್ನು ಹೊರಹಾಕು; ತೀರ: ದಡ; ಉಗುಳು: ಹೊರಹಾಕು; ದಿವ್ಯ: ಶ್ರೇಷ್ಠ; ಅಂಭೋಜ: ಕಮಲ; ಪರಿಮಳ: ಸುಗಂಧ; ತಳುವು: ನಿಧಾನಿಸು; ತನಿ: ಹಿತಕರವಾದ, ಸವಿಯಾದ; ಶೀತಳ: ತಂಪಾದ; ಜಲ: ನೀರು; ಕೊಂಡು: ಪಡೆದು; ಆಪ್ಯಾಯ: ಸಂತೋಷ, ಹಿತ; ಅಂತರ್ಲಲಿತ: ಅಂತರಂಗದಲ್ಲಿ ಚೆಲುವಾದ; ಹೃದಯ: ಎದೆ, ವಕ್ಷ; ನಿಮಿರ್ದು: ನೆಟ್ಟಗಾದ; ಕಮಲ: ಪದ್ಮ; ಪಂಕ್ತಿ: ಸಾಲು;
ಪದವಿಂಗಡಣೆ:
ತೊಳೆದು +ಚರಣ+ಆನನವ +ನಡು+ಕೊಳ
ದೊಳಗೆ +ಹೊಕ್ಕ್+ಅಡಿಗಡಿಗೆ +ಮಿಗೆ +ಮು
ಕ್ಕುಳಿಸಿ+ ತೀರದಲ್+ಉಗುಳಿ +ದಿವ್ಯಾಂಭೋಜ +ಪರಿಮಳವ
ತಳುವದ್+ಅಲೆ+ ತನಿಹೊರೆದ+ ಶೀತಳ
ಜಲವ +ಕೊಂಡ್+ಆಪ್ಯಾಯಿತ್+ಅಂತ
ರ್ಲಲಿತ +ಹೃದಯನು +ನಿಮಿರ್ದು+ಹಿಡಿದನು+ ಕಮಲ +ಪಂಕ್ತಿಗಳ
ಅಚ್ಚರಿ:
(೧) ಭೀಮನು ಕಮಲವನ್ನು ಹಿಡಿದ ಪರಿ – ತಳುವದಲೆ ತನಿಹೊರೆದ ಶೀತಳ
ಜಲವ ಕೊಂಡಾಪ್ಯಾಯಿತಾಂತರ್ಲಲಿತ ಹೃದಯನು ನಿಮಿರ್ದುಹಿಡಿದನು ಕಮಲ ಪಂಕ್ತಿಗಳ