ಪದ್ಯ ೫೭: ಭೀಮನು ತನ್ನ ಆಯಾಸವನ್ನು ಹೇಗೆ ಕಳೆದನು?

ತೊಳೆದು ಚರಣಾನನವ ನಡುಗೊಳ
ದೊಳಗೆ ಹೊಕ್ಕಡಿಗಡಿಗೆ ಮಿಗೆ ಮು
ಕ್ಕುಳಿಸಿ ತೀರದಲುಗುಳಿ ದಿವ್ಯಾಂಭೋಜ ಪರಿಮಳವ
ತಳುವದಲೆ ತನಿಹೊರೆದ ಶೀತಳ
ಜಲವ ಕೊಂಡಾಪ್ಯಾಯಿತಾಂತ
ರ್ಲಲಿತ ಹೃದಯನು ನಿಮಿರ್ದುಹಿಡಿದನು ಕಮಲ ಪಂಕ್ತಿಗಳ (ಅರಣ್ಯ ಪರ್ವ, ೧೧ ಸಂಧಿ, ೫೭ ಪದ್ಯ)

ತಾತ್ಪರ್ಯ:
ಸರೋವರದ ಮಧ್ಯೆ ಹೆಜ್ಜೆಯಿಟ್ಟು ನಡೆದು ಭೀಮನು ಕಾಲು, ಮುಖಗಳನ್ನು ತೊಳೆದು, ಕೊಳದ ನೀರಿನಿಂದ ಬಾಯಿಯನ್ನು ಮುಕ್ಕುಳಿಸಿ ದಡದ ಮೇಲುಗುಳಿದನು. ದಿವ್ಯ ಪರಿಮಳದ ಕಮಲ ಗಂಧವನ್ನು ಹೊತ್ತ ತಣ್ಣನೆಯ ನೀರನ್ನು ಕುಡಿದು ಮನಸ್ಸು ಆಪ್ಯಾಯನಗೊಳ್ಳಲು, ಕಮಲಪುಷ್ಪಗಳನ್ನು ಕೈಯಲ್ಲಿ ಹಿಡಿದನು.

ಅರ್ಥ:
ತೊಳೆದು: ಸ್ವಚ್ಛಮಾಡು, ಶುದ್ಧಗೊಳಿಸು; ಚರಣ: ಪಾದ; ಆನನ: ಮುಖ; ನಡುಕೊಳ: ಕೊಳದ ಮಧ್ಯೆ; ಹೊಕ್ಕು: ಸೇರು; ಆಡಿಗಡಿ: ಹೆಜ್ಜೆ ಹೆಜ್ಜೆ; ಮಿಗೆ: ಮತ್ತು, ಅಧಿಕ; ಮುಕ್ಕುಳಿಸು: ಬಾಯಿಂದ ನೀರನ್ನು ಹೊರಹಾಕು; ತೀರ: ದಡ; ಉಗುಳು: ಹೊರಹಾಕು; ದಿವ್ಯ: ಶ್ರೇಷ್ಠ; ಅಂಭೋಜ: ಕಮಲ; ಪರಿಮಳ: ಸುಗಂಧ; ತಳುವು: ನಿಧಾನಿಸು; ತನಿ: ಹಿತಕರವಾದ, ಸವಿಯಾದ; ಶೀತಳ: ತಂಪಾದ; ಜಲ: ನೀರು; ಕೊಂಡು: ಪಡೆದು; ಆಪ್ಯಾಯ: ಸಂತೋಷ, ಹಿತ; ಅಂತರ್ಲಲಿತ: ಅಂತರಂಗದಲ್ಲಿ ಚೆಲುವಾದ; ಹೃದಯ: ಎದೆ, ವಕ್ಷ; ನಿಮಿರ್ದು: ನೆಟ್ಟಗಾದ; ಕಮಲ: ಪದ್ಮ; ಪಂಕ್ತಿ: ಸಾಲು;

ಪದವಿಂಗಡಣೆ:
ತೊಳೆದು +ಚರಣ+ಆನನವ +ನಡು+ಕೊಳ
ದೊಳಗೆ +ಹೊಕ್ಕ್+ಅಡಿಗಡಿಗೆ +ಮಿಗೆ +ಮು
ಕ್ಕುಳಿಸಿ+ ತೀರದಲ್+ಉಗುಳಿ +ದಿವ್ಯಾಂಭೋಜ +ಪರಿಮಳವ
ತಳುವದ್+ಅಲೆ+ ತನಿಹೊರೆದ+ ಶೀತಳ
ಜಲವ +ಕೊಂಡ್+ಆಪ್ಯಾಯಿತ್+ಅಂತ
ರ್ಲಲಿತ +ಹೃದಯನು +ನಿಮಿರ್ದು+ಹಿಡಿದನು+ ಕಮಲ +ಪಂಕ್ತಿಗಳ

ಅಚ್ಚರಿ:
(೧) ಭೀಮನು ಕಮಲವನ್ನು ಹಿಡಿದ ಪರಿ – ತಳುವದಲೆ ತನಿಹೊರೆದ ಶೀತಳ
ಜಲವ ಕೊಂಡಾಪ್ಯಾಯಿತಾಂತರ್ಲಲಿತ ಹೃದಯನು ನಿಮಿರ್ದುಹಿಡಿದನು ಕಮಲ ಪಂಕ್ತಿಗಳ

ನಿಮ್ಮ ಟಿಪ್ಪಣಿ ಬರೆಯಿರಿ