ಪದ್ಯ ೪೭: ಯಕ್ಷರು ಭೀಮನಲ್ಲಿ ಏನು ಕೇಳಿದರು?

ಎದ್ದರವರಿದಿರಾಗಿ ಭೀಮನ
ಹೊದ್ದಿದರು ನೀನಾರು ಹದ್ದಿಗೆ
ಬಿದ್ದಿನನೊ ಮೇಣ್ ಮಿತ್ರಭಾವದಲೆಮಗೆ ಬಿದ್ದಿನನೊ
ಉದ್ದುರುಟುತನ ನಿನ್ನ ಮೋರೆಯ
ಲುದ್ದುದೈ ನೀನಾರು ನಿನಗೇ
ನಿದ್ದುದಿಲ್ಲಿಯೆನುತ್ತ ನುಡಿದರು ಯಕ್ಷರನಿಲಜನ (ಅರಣ್ಯ ಪರ್ವ, ೧೧ ಸಂಧಿ, ೪೭ ಪದ್ಯ)

ತಾತ್ಪರ್ಯ:
ಭೀಮನ ಆಗಮನವನ್ನು ಕಂಡ ಯಕ್ಷರು ಅವನಿಗೆ ಎದುರಾಗಿ ಬಂದು, ನೀನಾರು, ನಮ್ಮ ವೈರಿಯಾಗಿ ಹದ್ದಿಗೆ ಊಟವಾಗಲು ಬಂದಿರುವೆಯೋ ಸ್ನೇಹ ಭಾವದಿಂದ ನಮ್ಮ ಅತಿಥಿಯಾಗಿ ಬಂದಿರುವೆಯೋ? ನಿನ್ನ ಮುಖದ ಮೇಲೆ ಬಹಳ ದಿಟ್ಟತನವೆದ್ದು ಕಾಣಿಸುತ್ತಿದೆ, ನಿನಗೆ ಇಲ್ಲಿರುವ ಕೆಲಸವಾದರು ಏನು ಎಂದು ಯಕ್ಷರು ಭೀಮನನ್ನು ಕೇಳಿದರು.

ಅರ್ಥ:
ಎದ್ದು: ಮೇಲೇಳು; ಇದಿರಾಗು: ಎದುರಾಗು; ಹೊದ್ದು: ಆವರಿಸು; ಹದ್ದು: ಪಕ್ಷಿಯ ಜಾತಿ; ಬಿದ್ದು: ಬೀಳು; ಮೇಣ್: ಅಥವಾ; ಮಿತ್ರ: ಸ್ನೇಹ; ಉದ್ದುರುಟುತನ: ಒರಟುತನ, ಕಠೋರ; ಮೋರೆ: ಮುಖ; ನುಡಿ: ಮಾತಾಡು; ಅನಿಲಜ: ವಾಯು ಪುತ್ರ (ಭೀಮ);

ಪದವಿಂಗಡಣೆ:
ಎದ್ದರ್+ಅವರ್+ಇದಿರಾಗಿ+ ಭೀಮನ
ಹೊದ್ದಿದರು +ನೀನಾರು +ಹದ್ದಿಗೆ
ಬಿದ್ದಿನನೊ+ ಮೇಣ್+ ಮಿತ್ರಭಾವದಲ್+ಎಮಗೆ +ಬಿದ್ದಿನನೊ
ಉದ್ದುರುಟುತನ +ನಿನ್ನ +ಮೋರೆಯಲ್
ಉದ್ದುದೈ +ನೀನಾರು +ನಿನಗೇನ್
ಇದ್ದುದ್+ಇಲ್ಲಿ+ಎನುತ್ತ +ನುಡಿದರು +ಯಕ್ಷರ್+ಅನಿಲಜನ

ಅಚ್ಚರಿ:
(೧) ಬಿದ್ದಿನನೊ – ೩ ಸಾಲಿನ ಮೊದಲ ಹಾಗು ಕೊನೆ ಪದ
(೨) ನೀನಾರು – ೨, ೫ ಸಾಲಿನೆ ೨ನೇ ಪದ

ನಿಮ್ಮ ಟಿಪ್ಪಣಿ ಬರೆಯಿರಿ