ಪದ್ಯ ೪೩: ಭೀಮನು ಸಂತೋಷ ಪಡಲು ಕಾರಣವೇನು?

ಧರಣಿಪತಿ ಕೇಳ್ ಬಹಳ ವಿಪಿನಾಂ
ತರವನಂತವ ಕಳೆದು ಬರೆಬರೆ
ಸರಸಿಜದ ಮೋಹರದ ಮುಂದೈತಪ್ಪ ಪರಿಮಳದ
ಮೊರೆವ ತುಂಬಿಯ ಥಟ್ಟುಗಳ ತನಿ
ವರಿವ ತಂಪಿನ ತುರಗಲಿನ ತ
ತ್ಸರಸಿಯನು ದೂರದಲಿ ಕಂಡುಬ್ಬಿದನು ಕಲಿಭೀಮ (ಅರಣ್ಯ ಪರ್ವ, ೧೧ ಸಂಧಿ, ೪೩ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಭೀಮನು ಅನೇಕ ವನಗಳನ್ನು ದಾಟಿ ಮುನ್ನಡೆದು ಬರುತ್ತಿರಲು, ದೂರದಲ್ಲಿ ಕಮಲ ಪುಷ್ಪಗಳ ಸಮೂಹದ ಮೇಲೆ ಹಾದು ಬರುವ ಸುಗಂಧ, ಹೂಗಳಿಗೆ ಮುತ್ತುವ ದುಂಬಿಗಳ ದಂಡು ಮತ್ತು ತಂಪು ತುಂಬಿದ ಸೌಗಂಧಿಕ ಕುಸುಮ ಸರೋವರವನ್ನು ಕಂಡು ಸಂತೋಷದಿಂದ ಹಿಗ್ಗಿದನು.

ಅರ್ಥ:
ಧರಣಿಪತಿ: ರಾಜ; ಧರಣಿ: ಭೂಮಿ; ಪತಿ: ಒಡೆಯ; ಕೇಳ್: ಆಲಿಸು; ಬಹಳ: ತುಂಬ; ವಿಪಿನ: ಕಾಡು; ಅಂತರ: ದೂರ; ಅಂತ: ಕೊನೆ; ಕಳೆದು: ತೊರೆ, ನಿವಾರಣೆ; ಬರೆ: ಆಗಮಿಸು; ಸರಸಿಜ: ಕಮಲ ಮೋಹರ: ಗುಂಪು, ಸಮೂಹ; ತುಂಬು: ಭರ್ತಿ; ಥಟ್ಟು: ಗುಂಪು; ತನಿ: ಚೆನ್ನಾಗಿ ಬೆಳೆದುದು; ತಂಪು: ತಣಿವು, ಶೈತ್ಯ; ತುರಗ: ವೇಗವಾಗಿ ಚಲಿಸುವುದುತ; ಸರಸಿ: ಸರೋವರ; ದೂರ: ಬಹಳ ಅಂತರ; ಕಂಡು: ನೋಡಿ; ಉಬ್ಬು: ಹಿಗ್ಗು; ಕಲಿ: ಶೂರ; ಐತಪ್ಪ: ಬರುತ್ತಿರುವ;

ಪದವಿಂಗಡಣೆ:
ಧರಣಿಪತಿ +ಕೇಳ್ +ಬಹಳ+ ವಿಪಿನಾಂ
ತರವನ್+ಅಂತವ +ಕಳೆದು +ಬರೆಬರೆ
ಸರಸಿಜದ+ ಮೋಹರದ+ ಮುಂದ್+ಐತಪ್ಪ+ ಪರಿಮಳದ
ಮೊರೆವ+ ತುಂಬಿಯ +ಥಟ್ಟುಗಳ+ ತನಿ
ವರಿವ+ ತಂಪಿನ +ತುರಗಲಿನ +ತ
ತ್ಸರಸಿಯನು +ದೂರದಲಿ +ಕಂಡುಬ್ಬಿದನು+ ಕಲಿ+ಭೀಮ

ಅಚ್ಚರಿ:
(೧) ತ ಕಾರದ ಸಾಲು ಪದ – ತುಂಬಿಯ ಥಟ್ಟುಗಳ ತನಿವರಿವ ತಂಪಿನ ತುರಗಲಿನ ತತ್ಸರಸಿಯನು

ನಿಮ್ಮ ಟಿಪ್ಪಣಿ ಬರೆಯಿರಿ