ಪದ್ಯ ೩೬: ಭೀಮನು ಮತ್ತೆ ಹನುಮನ ಬಳೆ ಏನು ಬೇಡಿದನು?

ಅದರಿನೀ ದ್ವಾಪರದ ಕಡೆಯ
ಲ್ಲುದಿತ ಮಾನುಷ ಧರ್ಮ ಸಂಶಯ
ವಿದರೊಳೆಮ್ಮಯ ರೂಪು ಗೋಚರವಲ್ಲ ಮರ್ತ್ಯರಿಗೆ
ಇದು ನಿಧಾನವು ಭೀಮಯೆನೆ ತ
ತ್ಪದಯುಗಕೆ ಮಗುಳೆರಗಿ ನಿರ್ಬಂ
ಧದಲಿ ಬಿನ್ನಹ ಮಾಡಲಮ್ಮೆನು ತೋರಬೇಕೆಂದ (ಅರಣ್ಯ ಪರ್ವ, ೧೧ ಸಂಧಿ, ೩೬ ಪದ್ಯ)

ತಾತ್ಪರ್ಯ:
ದ್ವಾಪರಯುಗದ ಕೊನೆಯಲ್ಲಿರುವ ಮನುಷ್ಯರ ಧರ್ಮವು ಸಂಶಯಾಸ್ಪದ. ಈಗ ಮನುಷ್ಯರಿಗೆ ನಮ್ಮ ರೂಪವು ಕಾಣಿಸುವುದಿಲ್ಲ, ನಾನು ಇದ್ದುದನ್ನು ಇದ್ದಂತೆ ಹೇಳಿದ್ದೇನೆ ಎನ್ನಲು, ಭೀಮನು ಮತ್ತೆ ಹನುಮನ ಪಾದಯುಗಳಿಗೆ ನಮಸ್ಕರಿಸಿ, ನಾನು ನಿಮ್ಮನ್ನು ನಿರ್ಬಂಧಿಸಲಾರೆ, ಆದರೆ ನಿನ್ನ ರೂಪವನ್ನು ತೊರಿಸು ಎಂದು ಬೇಡಿದನು.

ಅರ್ಥ:
ಕಡೆ: ಕೊನೆ; ಉದಿತ: ಹುಟ್ಟಿದ; ಮಾನುಷ: ಮನುಷ್ಯರು; ಸಂಶಯ: ಅನುಮಾನ, ಸಂದೇಹ; ಧರ್ಮ: ಧಾರಣೆ ಮಾಡಿದುದು; ರೂಪ: ಆಕಾರ; ಗೋಚರ: ತೋರು; ಮರ್ತ್ಯ: ಮನುಷ್ಯ; ನಿಧಾನ: ವಿಳಂಬ, ನಿರ್ಧಾರ, ದೃಢ ಸಂಕಲ್ಪ; ಪದಯುಗ: ಎರಡು ಪಾದಗಳು; ಮಗುಳು: ಮತ್ತೆ; ಎರಗು: ನಮಸ್ಕರಿಸು; ನಿರ್ಬಂಧ: ಪಟ್ಟು ಹಿಡಿಯುವಿಕೆ, ದೃಢ ಸಂಕಲ್ಪ; ಬಿನ್ನಹ: ಕೋರಿಕೆ; ತೋರು: ಗೋಚರಿಸು;

ಪದವಿಂಗಡಣೆ:
ಅದರಿನ್+ಈ+ ದ್ವಾಪರದ +ಕಡೆಯಲ್
ಉದಿತ +ಮಾನುಷ +ಧರ್ಮ +ಸಂಶಯವ್
ಇದರೊಳ್+ಎಮ್ಮಯ +ರೂಪು +ಗೋಚರವಲ್ಲ+ ಮರ್ತ್ಯರಿಗೆ
ಇದು +ನಿಧಾನವು +ಭೀಮ+ಎನೆ+ ತತ್
ಪದಯುಗಕೆ+ ಮಗುಳೆರಗಿ+ ನಿರ್ಬಂ
ಧದಲಿ+ ಬಿನ್ನಹ +ಮಾಡಲಮ್ಮೆನು+ ತೋರಬೇಕೆಂದ

ಅಚ್ಚರಿ:
(೧) ಹನುಮನ ರೂಪವು ಏಕೆ ಕಾಣುವುದಿಲ್ಲ ವೆಂದು ಹೇಳುವ ಪರಿ – ದ್ವಾಪರದ ಕಡೆಯ
ಲ್ಲುದಿತ ಮಾನುಷ ಧರ್ಮ ಸಂಶಯವಿದರೊಳೆಮ್ಮಯ ರೂಪು ಗೋಚರವಲ್ಲ ಮರ್ತ್ಯರಿಗೆ

ನಿಮ್ಮ ಟಿಪ್ಪಣಿ ಬರೆಯಿರಿ