ಪದ್ಯ ೩೪: ಯಾವುದು ಯುಗಧರ್ಮ?

ಕೃತಯುಗದವರು ತ್ರೇತೆಯವರಿಂ
ದತಿ ಪರಾಕ್ರಮ ಯುಕ್ತರವರದು
ಭುತ ಬಲರು ತ್ರೇತೆಯವರಾ ದ್ವಾಪರ ಸ್ಥಿತಿಗೆ
ವಿತತ ಸತ್ವರು ಕಲಿಯುಗದ ದು
ರ್ಮತಿ ಮನುಷ್ಯವ್ರಾತ ಹೀನಾ
ಕೃತಿ ಕಣಾ ಯುಗ ಧರ್ಮ ಕೃತ ಮೊದಲಾಗಿ ಕಲಿಯುಗಕೆ (ಅರಣ್ಯ ಪರ್ವ, ೧೧ ಸಂಧಿ, ೩೪ ಪದ್ಯ)

ತಾತ್ಪರ್ಯ:
ಹನುಮಂತ ಯುಗಧರ್ಮದ ಬಗ್ಗೆ ತಿಳಿಸುತ್ತಾ, ತ್ರೇತಾಯುಗದವರಿಗೆ ಹೋಲಿಸಿದರೆ ಕೃತಯುಗದವರು ಅದ್ಭುತ ಪರಾಕ್ರಮಶಾಲಿಗಳು, ಬಲಶಾಲಿಗಳು ಆಗಿರುತ್ತಾರೆ. ದ್ವಾಪರ ಯುಗದವರಿಗಿಂತ ತ್ರೇತಾಯುಗದವರು ಮಹಾಪರಾಕ್ರಮಶಾಲಿಗಳು. ಕಲಿಯುಗದ ಮನುಷ್ಯರು ದ್ವಾಪರಯುಗದವರಿಗೆ ಹೋಲಿಸಿದಾಗ ಹೀನ ಸತ್ವರು, ಇದು ಯುಗಧರ್ಮ ಎಂದು ತಿಳಿಸಿದನು.

ಅರ್ಥ:
ಯುಗ: ಕಾಲವನ್ನು ಅಳೆಯುವ ಪ್ರಮಾಣ; ಅತಿ: ಬಹಳ; ಪರಾಕ್ರಮ: ಶೌರ್ಯ; ಯುಕ್ತ: ಅನುಸರಣೆ, ತರ್ಕವಾದ; ಅದುಭುತ: ಆಶ್ಚರ್ಯ; ಬಲರು: ಬಲಶಾಲಿಗಳು; ಸ್ಥಿತಿ: ಇರವು, ಅಸ್ತಿತ್ವ; ವಿತತ: ವಿಸ್ತಾರವಾದ; ಸತ್ವ: ಸಾರ; ದುರ್ಮತಿ: ಕೆಟ್ಟ ಬುದ್ಧಿ; ವ್ರಾತ: ಗುಂಪು; ಮನುಷ್ಯ: ನರ; ಹೀನಾಕೃತಿ:ಕೀಳಾದ ಕೆಲಸ, ಕೆಟ್ಟ ಕೆಲಸ;

ಪದವಿಂಗಡಣೆ:
ಕೃತಯುಗದವರು+ ತ್ರೇತೆಯವರಿಂದ್
ಅತಿ +ಪರಾಕ್ರಮ+ ಯುಕ್ತರ್+ಅವರ್+ಅದು
ಭುತ+ ಬಲರು+ ತ್ರೇತೆಯವರಾ+ ದ್ವಾಪರ +ಸ್ಥಿತಿಗೆ
ವಿತತ+ ಸತ್ವರು +ಕಲಿಯುಗದ +ದು
ರ್ಮತಿ +ಮನುಷ್ಯ+ವ್ರಾತ+ ಹೀನಾ
ಕೃತಿ +ಕಣಾ +ಯುಗ +ಧರ್ಮ +ಕೃತ+ ಮೊದಲಾಗಿ +ಕಲಿಯುಗಕೆ

ಅಚ್ಚರಿ:
(೧) ಕಲಿಯುಗದ ಗುಣಧರ್ಮ – ಕಲಿಯುಗದ ದುರ್ಮತಿ ಮನುಷ್ಯವ್ರಾತ ಹೀನಾಕೃತಿ ಕಣಾ

ನಿಮ್ಮ ಟಿಪ್ಪಣಿ ಬರೆಯಿರಿ