ತೀದುದೆಮಗೆ ವನಪ್ರವಾಸದ
ಖೇದವರ್ಜುನನಗಲಿಕೆಯ ದು
ರ್ಭೇದ ವಿಷವಿಂದಿಳಿದು ಹೋದುದು ಹರಮಹಾದೇವ
ಹೋದ ರಾಜ್ಯಭ್ರಂಶ ಬಹಳ ವಿ
ಷಾದ ಬೀತುದು ನಿಮ್ಮ ಕಾರು
ಣ್ಯೋದಯವು ನಮಗಾಯ್ತಲಾ ಚರಿತಾರ್ಥರಾವೆಂದ (ಅರಣ್ಯ ಪರ್ವ, ೧೧ ಸಂಧಿ, ೩೦ ಪದ್ಯ)
ತಾತ್ಪರ್ಯ:
ನಮಗೆ ವನವಾಸದ ದುಃಖವು ತೀರಿತು, ಸಹಿಸಲಾಗದ ಅರ್ಜುನನ ಅಗಲಿಕೆಯ ವಿಷವೂ ಕಡಿಮೆಯಾಯಿತು, ರಾಜ್ಯವನ್ನು ಕಳೆದುಕೊಂಡ ಖೇದವು ಇಲ್ಲವಾಯಿತು, ನಿಮ್ಮ ದರ್ಶನದಿಂದ ನಾವು ಪಡೆಯಬೇಕಾದುದೆಲ್ಲವನ್ನೂ ಪಡೆದಂತಾಯಿತು ಎಂದು ಭೀಮನು ಹೇಳಿದನು.
ಅರ್ಥ:
ತೀದು: ತೀರಿತು; ವನ: ಕಾಡು; ಪ್ರವಾಸ: ಸಂಚಾರ; ಖೇದ; ದುಃಖ; ಅಗಲಿಕೆ: ಬೇರೆ ಹೋಗು, ತೊರೆ; ದುರ್ಭೇದ: ಒಡೆಯಲು ಕಷ್ಟವಾದ; ವಿಷ: ಗರಲ; ಇಳಿ: ಕಡಿಮೆಯಾಗು; ಹರ: ಶಿವ; ಮಹಾದೇವ: ಶಂಕರ; ರಾಜ್ಯಭ್ರಂಶ: ರಾಜ್ಯದ ಅಗಲಿಕೆ; ವಿಷಾದ: ದುಃಖ; ಬೀತು: ಕಳೆದುಹೋಯಿತು; ಕಾರುಣ್ಯ: ದಯೆ; ಚರಿತಾರ್ಥ: ಕೃತಾರ್ಥ, ಧನ್ಯ;
ಪದವಿಂಗಡಣೆ:
ತೀದುದ್+ಎಮಗೆ +ವನ+ಪ್ರವಾಸದ
ಖೇದವ್+ಅರ್ಜುನನ್+ಅಗಲಿಕೆಯ +ದು
ರ್ಭೇದ +ವಿಷವಿಂದ್+ಇಳಿದು +ಹೋದುದು +ಹರ+ಮಹಾದೇವ
ಹೋದ +ರಾಜ್ಯಭ್ರಂಶ +ಬಹಳ +ವಿ
ಷಾದ +ಬೀತುದು +ನಿಮ್ಮ +ಕಾರು
ಣ್ಯೋದಯವು +ನಮಗಾಯ್ತಲಾ +ಚರಿತಾರ್ಥರಾವೆಂದ
ಅಚ್ಚರಿ:
(೧) ಖೇದ, ವಿಷಾದ – ಸಾಮಾರ್ಥ ಪದ