ಪದ್ಯ ೨೯: ಭೀಮನು ಆಂಜನೇಯನನ್ನು ಹೇಗೆ ಉಪಚರಿಸಿದನು?

ಹಿರಿಯರೆನಗಿಬ್ಬರು ಯುಧಿಷ್ಠಿರ
ಧರಣಿಪತಿ ನೀನೊಬ್ಬರೈಯ್ಯಂ
ದಿರುಗಳಿಬ್ಬರು ಮಾರುತನು ನೀನೊಬ್ಬನಿಂದೆನಗೆ
ಗುರುಗಳಿಬ್ಬರು ಬಾದರಾಯಣ
ಪರಮಋಷಿ ನೀನೊಬ್ಬನೆಂದುಪ
ಚರಿಸಿದನು ಪವಮಾನನಂದನನಂಜನಾಸುತನ (ಅರಣ್ಯ ಪರ್ವ, ೧೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಮನು ಹನುಮಂತನಿಗೆ, ನನಗಿಬ್ಬರು ಅಣ್ಣಂದಿರು, ಧರ್ಮಜ ಮತ್ತು ನೀನು, ನನಗಿಬ್ಬರು ತಂದೆಯರು, ವಾಯುದೇವ ಮತ್ತು ನೀನು, ನನಗಿಬ್ಬರು ಗುರುಗಳು, ವ್ಯಾಸ ಮಹರ್ಷಿಗಳು ಮತ್ತು ನೀನು ಎಂದು ಉಪಚಾರದ ಮಾತುಗಳನ್ನು ಭೀಮನು ನುಡಿದನು.

ಅರ್ಥ:
ಹಿರಿಯ: ದೊಡ್ಡವ; ಧರಣಿಪತಿ: ರಾಜ; ಅಯ್ಯ: ತಂದೆ; ಮಾರುತ: ವಾಯು; ಗುರು: ಆಚಾರ್ಯ; ಬಾದರಾಯಣ: ವ್ಯಾಸ; ಪರಮ: ಶ್ರೇಷ್ಠ; ಋಷಿ: ಮುನಿ; ಉಪಚಾರ: ಸತ್ಕಾರ; ಪವಮಾನ: ವಾಯು; ನಂದನ: ಮಗ; ಅಂಜನಾಸುತ: ಆಂಜನೇಯ;

ಪದವಿಂಗಡಣೆ:
ಹಿರಿಯರ್+ಎನಗಿಬ್ಬರು +ಯುಧಿಷ್ಠಿರ
ಧರಣಿಪತಿ +ನೀನೊಬ್ಬರ್+ಅಯ್ಯಂ
ದಿರುಗಳ್+ಇಬ್ಬರು +ಮಾರುತನು +ನೀನೊಬ್ಬನ್+ಇಂದೆನಗೆ
ಗುರುಗಳಿಬ್ಬರು +ಬಾದರಾಯಣ
ಪರಮಋಷಿ +ನೀನೊಬ್ಬನೆಂದ್+ಉಪ
ಚರಿಸಿದನು +ಪವಮಾನನಂದನನ್+ಅಂಜನಾಸುತನ

ಅಚ್ಚರಿ:
(೧) ಭೀಮ ಮತ್ತು ಆಂಜನೇಯರನ್ನು ಒಟ್ಟಿಗೆ ಕರೆದ ಪರಿ – ಪವಮಾನನಂದನನಂಜನಾಸುತನ

ನಿಮ್ಮ ಟಿಪ್ಪಣಿ ಬರೆಯಿರಿ