ಪದ್ಯ ೨೬: ಪ್ರಾಣಿಗಳು ಹೇಗೆ ಪತನಗೊಂಡವು?

ಬೊಬ್ಬೆಗಳ ಪಟಹದ ಮೃದಂಗದ
ಸಬ್ಬಲಗ್ಗೆಯ ಸೋಹಿನಲಿ ಸುಳಿ
ವಬ್ಬರಕೆ ಹಿಂಡೊಡೆದು ಹಾಯ್ದವು ಸೂಸಿ ದೆಸೆದೆಸೆಗೆ
ತೆಬ್ಬಿದವು ಬೆಳ್ಳಾರವಲೆ ಹರಿ
ದುಬ್ಬಿಹಾಯ್ದರೆ ವೇಡೆಯವರಿಗೆ
ಹಬ್ಬವಾಯ್ತೇನೆಂಬೆನಗಣಿತ ಮೃಗನಿಪಾತನವು (ಅರಣ್ಯ ಪರ್ವ, ೧೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕೇಕೆ, ತಮಟೆ, ಭೇರಿ ಮೊದಲಾದವುಗಳಿಂದ ಅಡಗಿದ್ದ ಮೃಗಗಳನ್ನು ಎಬ್ಬಿಸಿ ಹೊರಕ್ಕೆಳೆದರು. ಈ ವಾದ್ಯಗಳ ಸದ್ದಿಗೆ ಮೃಗಗಳು ಹಿಂಡನ್ನು ಬಿಟ್ಟು ದಿಕ್ಕು ಪಾಲಾಗಿ ಓಡಿದವು. ಮೃಗಗಳು ಚದುರಿ ಓಡಿ ಬೆಳ್ಳಾರ ಬಲೆಗಳನ್ನು ಹರಿದು ನುಗ್ಗಿದಾಗ ಬೇಟೆಗಾರರು ಅವನ್ನು ಕೊಂದು ಕೆಡವಿದರು. ಅಸಂಖ್ಯಾತ ಪ್ರಾಣಿಗಳು ಸತ್ತು ಬಿದ್ದವು.

ಅರ್ಥ:
ಬೊಬ್ಬೆ: ಆರ್ಭಟ; ಪಟಹ: ನಗಾರಿ; ಸಬ್ಬಲ: ಸರ್ವಬಲ; ಸೋಹು: ಅಡಗಿರುವ ಪ್ರಾಣಿಗಳನ್ನು ಪೊದೆ ಗಳಿಂದ ಎಬ್ಬಿಸಿ ಆಡುವ ಒಂದು ಬಗೆಯ ಬೇಟೆ; ಸುಳಿ: ಆವರಿಸು; ಅಬ್ಬರ: ಕೂಗು; ಹಿಂಡು: ಗುಂಪು; ಒಡೆ: ಸೀಳು; ಹಾಯ್ದು: ನೆಗೆ, ಹಾರು; ಸೂಸು: ಎರಚು, ಚಲ್ಲು; ದೆಸೆ: ದಿಕ್ಕು; ತೆಬ್ಬು: ಬಿಲ್ಲಿನ ತಿರುವು; ಬೆಳ್ಳಾರವಲೆ: ಒಂದು ಬಗೆಯ ಬಲೆ; ಹರಿ:ದಾಳಿ ಮಾಡು, ಮುತ್ತಿಗೆ ಹಾಕು; ಉಬ್ಬು: ಮೇಲೇಳು; ವೇಡೆ: ಬಲೆ, ಜಾಲ; ಹಬ್ಬ: ಸಂಭ್ರಮ; ಅಗಣಿತ: ಅಸಂಖ್ಯಾತ; ಮೃಗ: ಪ್ರಾಣಿ; ನಿಪಾತ: ಸಾವು, ಪತನ;

ಪದವಿಂಗಡಣೆ:
ಬೊಬ್ಬೆಗಳ +ಪಟಹದ +ಮೃದಂಗದ
ಸಬ್ಬಲ್+ಅಗ್ಗೆಯ+ ಸೋಹಿನಲಿ +ಸುಳಿವ್
ಅಬ್ಬರಕೆ+ ಹಿಂಡೊಡೆದು+ ಹಾಯ್ದವು +ಸೂಸಿ +ದೆಸೆದೆಸೆಗೆ
ತೆಬ್ಬಿದವು+ ಬೆಳ್ಳಾರವಲೆ+ ಹರಿದ್
ಉಬ್ಬಿ+ಹಾಯ್ದರೆ +ವೇಡೆಯವರಿಗೆ
ಹಬ್ಬವಾಯ್ತ್+ಏನೆಂಬೆನ್+ಅಗಣಿತ+ ಮೃಗ+ನಿಪಾತನವು

ಅಚ್ಚರಿ:
(೧) ಪಟಹ, ಮೃದಂಗ, ಸಬ್ಬಲ – ವಾದ್ಯಗಳ ಹೆಸರು
(೨) ಬೇಟೆಗಾರರಿಗೆ ಹೆಚ್ಚಿನ ಪ್ರಾಣಿಗಳು ಸಿಕ್ಕವು ಎಂದು ಹೇಳುವ ಪರಿ – ವೇಡೆಯವರಿಗೆ
ಹಬ್ಬವಾಯ್ತೇನೆಂಬೆನಗಣಿತ ಮೃಗನಿಪಾತನವು

ಪದ್ಯ ೨೫: ಬೇಟೆ ನಾಯಿಗಳು ಸಿಂಹದ ಮೇಲೆ ಹೇಗೆ ಹೋರಾಡಿದವು?

ಕಳಚಿ ಹಾಸವನಬ್ಬರಿಸಿ ಕು
ಪ್ಪಳಿಸಿ ಕಂಠೀರವನ ಮೋರೆಗೆ
ನಿಲುಕಿ ಕವಿದವು ಬಿದ್ದು ಹಾಯ್ದವು ಹಣುಗಿ ತುಡುಕಿದವು
ಸೆಳೆದವುಡಿದುಕ್ಕುಳಿಸಿ ಎಡಬಲ
ಬಳಸಿದವು ಮೇಲ್ವಾಯ್ದುನಿಂದು
ಚ್ಚಳಿಸಿದವು ಕುಸುಬಿದವು ಕುನ್ನಿಗಳಖಿಳ ಮೃಗಕುಲವ (ಅರಣ್ಯ ಪರ್ವ, ೧೪ ಸಂಧಿ, ೨೫ ಪದ್ಯ)

ತಾತ್ಪರ್ಯ:
ಹಗ್ಗವನ್ನು ಕೈಬಿಡಲು, ಜೋರಾಗಿ ಬೊಗಳುತ್ತಾ ಬೇಟೆನಾಯಿಗಳು ಸಿಂಹಗಳ ಮುಖವನ್ನು ಆಕ್ರಮಿಸಿದವು. ಕೆಳಬಿದ್ದು ಮತ್ತೆ ಮೇಲಕ್ಕೆ ಹಾಯ್ದು, ಹೆಣಗಿ ಹಿಡಿದವು. ಮೃಗಗಳನ್ನು ಸೆಳೆದು ನಡುವನ್ನು ಹಿಡಿದು ಎಡಬಲಕ್ಕೆ ಎಳೆದಾಡಿದವು. ಮೇಲೆ ನೆಗೆದು ಮೃಗಗಳನ್ನು ಸೀಳಿದವು ಕುಕ್ಕಿದವು.

ಅರ್ಥ:
ಕಳಚು: ಬೇರ್ಪಡಿಸು; ಹಾಸ: ಹಗ್ಗ, ಪಾಶ; ಅಬ್ಬರಿಸು: ಗರ್ಜಿಸು; ಕುಪ್ಪಳಿಸು: ನೆಗೆ; ಕಂಠೀರವ: ಸಿಂಹ; ಮೋರೆ: ಮುಖ; ನಿಲುಕು: ಹತ್ತಿರ ಹೋಗು, ಚಾಚುವಿಕೆ; ಕವಿ: ಆವರಿಸು; ಬಿದ್ದು: ಬೀಳು; ಉಡಿ: ಸೊಂಟ; ಹಾಯ್ದು: ಹೊಡೆ; ಹಣುಗು: ಹೋರಾಡು; ತುಡುಕು: ಹೋರಾಡು, ಸೆಣಸು; ಸೆಳೆ: ಜಗ್ಗು, ಎಳೆ; ಉಕ್ಕುಳಿಸು: ತಪ್ಪಿಸಿಕೋ, ಕೈಮೀರು; ಎಡಬಲ: ಎರಡೂ ಕಡೆ; ಬಳಸು: ಆವರಿಸು; ಮೇಲ್ವಾಯ್ದು: ಮೇಲೆ ಬೀಳು; ನಿಂದು: ನಿಲ್ಲು; ಉಚ್ಚಳಿಸು: ಮೇಲೆ ಹಾರು;

ಪದವಿಂಗಡಣೆ:
ಕಳಚಿ +ಹಾಸವನ್+ಅಬ್ಬರಿಸಿ+ ಕು
ಪ್ಪಳಿಸಿ +ಕಂಠೀರವನ+ ಮೋರೆಗೆ
ನಿಲುಕಿ +ಕವಿದವು +ಬಿದ್ದು +ಹಾಯ್ದವು +ಹಣುಗಿ +ತುಡುಕಿದವು
ಸೆಳೆದವ್+ಉಡಿದ್+ಉಕ್ಕುಳಿಸಿ +ಎಡಬಲ
ಬಳಸಿದವು +ಮೇಲ್ವಾಯ್ದು+ನಿಂದ್
ಉಚ್ಚಳಿಸಿದವು +ಕುಸುಬಿದವು +ಕುನ್ನಿಗಳ್+ಅಖಿಳ +ಮೃಗಕುಲವ

ಅಚ್ಚರಿ:
(೧) ಹೋರಾಟದ ಚಿತ್ರಣ – ಬಿದ್ದು ಹಾಯ್ದವು ಹಣುಗಿ ತುಡುಕಿದವು
ಸೆಳೆದವುಡಿದುಕ್ಕುಳಿಸಿ ಎಡಬಲ ಬಳಸಿದವು ಮೇಲ್ವಾಯ್ದುನಿಂದುಚ್ಚಳಿಸಿದವು ಕುಸುಬಿದವು

ಪದ್ಯ ೨೪: ಮೃಗಗಳಿಗೆ ಬೇಡರು ಎಲ್ಲಿ ಹುಡುಕಿದರು?

ಏನನೆಂಬೆನು ಜೀಯ ಹೊಕ್ಕನು
ಕಾನನವನನಿಲಜನು ಶಬರ ವಿ
ತಾನವಿಕ್ಕಿದ ವೇಡೆಗಳ ಬೆಳ್ಳಾರ ಸುತ್ತುಗಳ
ಕಾನನವನಳಿವಿನ ಶಿಲೋಚ್ಚಯ
ಸಾನುವಿನ ಗಹ್ವರದ ಗಂಡ
ಸ್ಥಾನ ದೀರ್ಘದ್ರೋಣಿಗಳಲರಸಿದರು ಮೃಗಕುಲವ (ಅರಣ್ಯ ಪರ್ವ, ೧೪ ಸಂಧಿ, ೨೪ ಪದ್ಯ)

ತಾತ್ಪರ್ಯ:
ಜನಮೇಜಯ ನಾನು ಏನೆಂದು ಹೇಳಲು, ಶಬರರು ಸುತ್ತ ಬಲೆಗಳನ್ನು ಹಾಕಿದ್ದ ಕಾಡನ್ನು ಭೀಮನು ಹೊಕ್ಕನು. ಕಾಡಿನ ಅಂಚುಗಳಲ್ಲಿ ಗುಂಡು ಕಲ್ಲುಗಳ ರಾಶಿಗಳ ಹಿಂದೆ, ಬೆಟ್ಟದ ಮೇಲಿನ ಪ್ರದೇಶದಲ್ಲಿ, ಕಂದರಗಳಲ್ಲಿ, ಗುಹೆಗಳಲ್ಲಿ, ಅಪಾಯದ ಸ್ಥಾನದ ಪ್ರದೇಶಗಳಲ್ಲಿ, ಬೇಡರು ಮೃಗಗಳನ್ನು ಹುಡುಕಿದರು.

ಅರ್ಥ:
ಜೀಯ: ಒಡೆಯ; ಹೊಕ್ಕು: ಸೇರು; ಕಾನನ; ಅರಣ್ಯ; ಅನಿಲಜ; ವಾಯುಪುತ್ರ (ಭೀಮ); ಶಬರ: ಬೇಡಾ; ವಿತಾನ: ಆಧಿಕ್ಯ, ಹೆಚ್ಚಳ; ವೇಡೆ: ಬಲೆ, ಜಾಲ; ಬೆಳ್ಳಾರ: ಒಂದು ಬಗೆಯ ಬಲೆ; ಸುತ್ತು: ಬಳಸಿರುವುದು, ಮಂಡಲ; ಅಳಿ: ಅಂಚು; ಶಿಲ: ಕಲ್ಲುಬಂಡೆ; ಉಚ್ಚಯ: ಸಮೂಹ, ರಾಶಿ ; ಸಾನು: ಬೆಟ್ಟದ ಮೇಲಿನ ಸಮತಲವಾದ ಪ್ರದೇಶ, ತುದಿ; ಗಹ್ವರ: ಗವಿ, ಗುಹೆ; ಗಂಡ: ಆಪತ್ತು, ಅಪಾಯ; ಸ್ಥಾನ: ಪ್ರದೇಶ; ದೀರ್ಘ: ಉದ್ದವಾದ; ದ್ರೋಣಿ: ಕಣಿವೆ, ಕಂದಕ; ಅರಸು: ಹುಡುಕು; ಮೃಗ: ಪ್ರಾಣಿ; ಕುಲ: ವಂಶ;

ಪದವಿಂಗಡಣೆ:
ಏನನೆಂಬೆನು +ಜೀಯ +ಹೊಕ್ಕನು
ಕಾನನವನ್+ಅನಿಲಜನು +ಶಬರ +ವಿ
ತಾನವಿಕ್ಕಿದ+ ವೇಡೆಗಳ+ ಬೆಳ್ಳಾರ +ಸುತ್ತುಗಳ
ಕಾನನವನ್+ಅಳಿವಿನ +ಶಿಲ+ಉಚ್ಚಯ
ಸಾನುವಿನ+ ಗಹ್ವರದ +ಗಂಡ
ಸ್ಥಾನ +ದೀರ್ಘದ್ರೋಣಿಗಳಲ್+ಅರಸಿದರು +ಮೃಗ+ಕುಲವ

ಅಚ್ಚರಿ:
(೧) ಕಾನನ – ೨, ೪ ಸಾಲಿನ ಮೊದಲ ಪದ
(೨) ಕಾಡಿನ ಪ್ರದೇಶಗಳನ್ನು ವಿವರಿಸುವ ಪರಿ – ಕಾನನವನಳಿವಿನ, ಶಿಲೋಚ್ಚಯ, ಸಾನುವಿನ, ಗಹ್ವರದ, ಗಂಡಸ್ಥಾನ, ದೀರ್ಘದ್ರೋಣಿ

ಪದ್ಯ ೨೩: ಯಾವ ರೀತಿಯ ಬಲೆಗಳನ್ನು ಬೇಡರು ಕೊಂಡ್ಯೊಯ್ದರು?

ಬಂಡಿಗಳ ಬೆಳ್ಳಾರವಲೆಗಳ
ಖಂಡವಲೆಗಳ ತಡಿಕೆವಲೆಗಳ
ಗುಂಡುವಲೆಗಳ ಬೀಸುವಲೆಗಳ ಕಾಲುಗಣ್ಣಿಗಳ
ದಂಡಿವಲೆಗಳ ತೊಡಕುವಲೆಗಳ
ಹಿಂಡುವಲೆಗಳ ಮಯಣದಂಟಿನ
ಮಂಡವಿಗೆ ಬಲೆಗಳ ಕಿರಾತರು ಕೆದರಿತಗಲದಲಿ (ಅರಣ್ಯ ಪರ್ವ, ೧೪ ಸಂಧಿ, ೨೩ ಪದ್ಯ)

ತಾತ್ಪರ್ಯ:
ಬಂಡಿಗಳಲ್ಲಿ ಬೆಳ್ಳಾರ ಬಲೆ, ಖಂಡಬಲೆ, ತಡಿಕೆ ಬಲೆ, ಗುಂಡುಬಲೆ, ಬೀಸುಬಲೆ, ಕಾಲುಕಣ್ಣಿಗಳು, ದಂಡಿಬಲೆ, ತೊಡಕುಬಲೆ, ಹಿಂಡು ಬಲೆ, ಮೇಣದಂಟಿನ ಮಂಡವಿಗೆ ಬಲೆಗಳನ್ನು ತೆಗೆದುಕೊಂಡು ಬಂದ ಕಿರಾತರು ಕಾಡಿನಗಲಕ್ಕೂ ಹಾಸಿದರು.

ಅರ್ಥ:
ಬಂಡಿ: ಗಾಡಿ, ಚಕ್ಕಡಿ; ಬೆಳ್ಳಾರಬಲೆ: ಒಂದು ವಿಧವಾದ ಬಲೆ; ಮಯಣ: ಜೇನುಹುಟ್ಟಿನಿಂದ ಸಿಗುವ ಒಂದು ಬಗೆಯ ಅಂಟುದ್ರವ್ಯ; ಖಂಡ: ಮೂಳೆಯಿಲ್ಲದ ಮಾಂಸ; ತಡಿಕೆ: ಒಂದು ಬಗೆಯ ಬಲೆ; ಗುಂಡು: ಗೋಳಾಕಾರ; ಬೀಸು:ತೂಗುವಿಕೆ, ವಿಸ್ತಾರ; ಕಾಲುಗಣ್ಣಿ: ಕಾಲುಕುಣಿಕೆ, ಕಾಲು ತೊಡರಿಬೀಳುವಂತೆ ಮಾಡುವ ಹಗ್ಗ; ಕುಣಿಕೆ: ಹಗ್ಗದ ತುದಿಯಲ್ಲಿ ಹಾಕಿದ ಗಂಟು; ದಂಡಿ: ಕೋಲು, ದಡಿ; ತೊಡಕು: ಕಗ್ಗಂಟು; ಹಿಂಡು: ನುಲಿಸು, ತಿರುಚು; ಮಂಡ:ಮತ್ತಿನ ಪದಾರ್ಥ; ಕಿರಾತ: ಬೇಡ; ಕೆದರು: ಹರಡು; ಅಗಲ: ವಿಸ್ತಾರ;

ಪದವಿಂಗಡಣೆ:
ಬಂಡಿಗಳ +ಬೆಳ್ಳಾರವಲೆಗಳ
ಖಂಡವಲೆಗಳ+ ತಡಿಕೆವಲೆಗಳ
ಗುಂಡುವಲೆಗಳ +ಬೀಸುವಲೆಗಳ+ ಕಾಲುಗಣ್ಣಿಗಳ
ದಂಡಿವಲೆಗಳ+ ತೊಡಕುವಲೆಗಳ
ಹಿಂಡುವಲೆಗಳ+ ಮಯಣದಂಟಿನ
ಮಂಡವಿಗೆ +ಬಲೆಗಳ +ಕಿರಾತರು +ಕೆದರಿತ್+ಅಗಲದಲಿ

ಅಚ್ಚರಿ:
(೧) ಬಲೆಗಳ ಹೆಸರುಗಳು – ಬೆಳ್ಳಾರವಲೆ, ಖಂಡವಲೆ, ತಡಿಕೆವಲೆ, ಗುಂಡುವಲೆ, ಬೀಸುವಲೆ, ಕಾಲುಗಣ್ಣಿಗ, ದಂಡಿವಲೆ, ತೊಡಕುವಲೆ, ಹಿಂಡುವಲೆ, ಮಯಣದಂಟಿನ ಮಂಡವಿಗೆ ಬಲೆ

ಪದ್ಯ ೨೨: ಬೇಡರು ಅಡವಿಯಲ್ಲಿ ಹೇಗೆ ಸಾಗಿದರು?

ಬಗೆಯನವ ಶಕುನವ ಮೃಗವ್ಯದ
ಸೊಗಡಿನಲಿ ಸಿಲುಕಿದ ಮನೋ ವೃ
ತ್ತಿಗಳೊಳುಂಟೆ ವಿವೇಕ ಧರ್ಮ ವಿಚಾರ ವಿಸ್ತಾರ
ಹೊಗರೊಗುವ ಹೊಂಗರಿಯ ಬಿಲುಸರ
ಳುಗಳ ಹೊದೆಗಳ ನಡೆದುದಡವಿಯ
ಬೆಗಡುಗೊಳಿಸುತ ಮುಂದೆ ಮುಂದೆ ಪುಳಿಂದ ಸಂದೋಹ (ಅರಣ್ಯ ಪರ್ವ, ೧೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಬೇಟೆಯ ವ್ಯಸನದಲ್ಲಿ ಸಿಕ್ಕ ಮನೋವೃತ್ತಿಯುಳ್ಳವರಿಗೆ ಯಾವುದು ಸರಿ, ಯಾವುದು ತಪ್ಪು ಎನ್ನುವು ವಿವೇಕೆ ಜ್ಞಾನ ಇರುವುದೇ? ಭೀಮನು ಶುಭ ಅಶುಭಗಳನ್ನು ಲೆಕ್ಕಿಸಲಿಲ್ಲ. ಬಂಗಾರದ ಕಾಂತಿಯುಳ್ಳ ರೆಕ್ಕೆಗಳಿಂದ ಅಲಂಕೃತಗೊಂಡು, ಬಿಲ್ಲು ಬಾಣಗಳನ್ನು ಹಿಡಿದ ಬೇಡರು ಅಡವಿಯನ್ನು ಬೆರಗುಗೊಳಿಸುತ್ತಾ ಅಡವಿಯಲ್ಲಿ ಭೀಮನ ಮುಂದೆ ನಡೆದರು.

ಅರ್ಥ:
ಬಗೆ: ಆಲೋಚನೆ, ಯೋಚನೆ; ಶಕುನ: ಶುಭಾಶುಭಗಳನ್ನು ಸೂಚಿಸುವ ನಿಮಿತ್ತ; ಮೃಗವ್ಯ: ಬೇಟೆ; ಸೊಗಡು: ತೀಕ್ಷ್ಣವಾದ ಗಂಧ; ಸಿಲುಕು: ಬಂಧನ; ಮನ: ಮನಸ್ಸು; ವೃತ್ತಿ: ನಡವಳಿಕೆ, ಸ್ಥಿತಿ; ವಿವೇಕ: ಯುಕ್ತಾಯುಕ್ತ ವಿಚಾರ; ಧರ್ಮ: ಧಾರಣೆ ಮಾಡಿದುದು; ವಿಚಾರ: ಪರ್ಯಾಲೋಚನೆ, ವಿಮರ್ಶೆ; ವಿಸ್ತಾರ: ಹರಹು; ಹೊಗರು: ಪ್ರಕಾಶಿಸು, ಕಾಂತಿ; ಒಗು: ಹೊರಹೊಮ್ಮುವಿಕೆ; ಹೊಂಗರಿ: ಚಿನ್ನದ ರೆಕ್ಕೆ; ಬಿಲು: ಚಾಪ; ಸರಳ: ಬಾಣ; ಹೊದೆ: ಬಾಣಗಳನ್ನಿಡುವ ಕೋಶ; ನಡೆ: ಚಲಿಸು; ಅಡವಿ: ಕಾಡು; ಬೆಗಡು: ಆಶ್ಚರ್ಯ, ಬೆರಗು; ಮುಂದೆ: ಮುನ್ನ, ಎದುರು; ಪುಳಿಂದ: ಬೇಡ; ಸಂದೋಹ: ಗುಂಪು;

ಪದವಿಂಗಡಣೆ:
ಬಗೆಯನವ+ ಶಕುನವ +ಮೃಗವ್ಯದ
ಸೊಗಡಿನಲಿ +ಸಿಲುಕಿದ+ ಮನೋ +ವೃ
ತ್ತಿಗಳೊಳ್+ಉಂಟೆ +ವಿವೇಕ +ಧರ್ಮ +ವಿಚಾರ+ ವಿಸ್ತಾರ
ಹೊಗರೊಗುವ+ ಹೊಂಗರಿಯ+ ಬಿಲು+ಸರ
ಳುಗಳ +ಹೊದೆಗಳ+ ನಡೆದುದ್+ಅಡವಿಯ
ಬೆಗಡುಗೊಳಿಸುತ +ಮುಂದೆ +ಮುಂದೆ +ಪುಳಿಂದ +ಸಂದೋಹ

ಅಚ್ಚರಿ:
(೧) ವ್ಯಸನಕ್ಕೀಡಾದ ಮನಸ್ಸಿನ ಸ್ಥಿತಿ – ಮೃಗವ್ಯದಸೊಗಡಿನಲಿ ಸಿಲುಕಿದ ಮನೋ ವೃ
ತ್ತಿಗಳೊಳುಂಟೆ ವಿವೇಕ ಧರ್ಮ ವಿಚಾರ ವಿಸ್ತಾರ

ಪದ್ಯ ೨೧: ಯಾವ ಶಕುನಗಳನ್ನು ಭೀಮನು ಕಂಡನು?

ಹೆಸರ ನಾಯ್ಗಳ ಹಾಸ ಹರಿದು
ಬ್ಬಸದ ಲುಳಿಗದವರ್ದಿರ ಹಿಡಿಮೃಗ
ಮಸಗಿದವು ಹದವಿಲುಗಳೊದೆದವು ಹೆದೆಯ ಹರಿವಿನಲಿ
ನುಸುಳಿದವು ಮೊಲನುರಿಯ ಹೊಗೆಗಳ
ದೆಸೆವಿಡಿದು ಕೆದರಿದವು ಹೊಲದಲಿ
ಹಸುಬ ಹರಡೆಗಳೇನನೆಂಬೆನು ಶಕುನ ಸೂಚಕವ (ಅರಣ್ಯ ಪರ್ವ, ೧೪ ಸಂಧಿ, ೨೧ ಪದ್ಯ)

ತಾತ್ಪರ್ಯ:
ಬೇಟೆಗೆ ಬಹು ಪ್ರಸಿದ್ಧವೂ ಪ್ರಶಸ್ತವೂ ಆದ ನಾಯಿಗಳ ಸಾಲಿನ ನಡುವೆ ಬೇಟೆಗೆ ಬಳಸುವ ಸಾಕು ಪ್ರಾಣಿಗಳು ನುಗ್ಗಿದವು. ಬೇಟೆಗೆ ಹದಗೊಳಿಸಿದ್ದ ಬಿಲ್ಲುಗಳ ಹೆದೆಗಳು ಹರಿದು ಹೋದವು. ಮೊಲಗಳು ಮೇಲೆ ಬಂದವು, ಉರಿ ಹೊಗೆಗಳು ಕಂಡವು, ಹಸುಬ ಹರಡೆಗಳು ಆ ದಿಕ್ಕಿಗೆ ಹಾರಿದವು. ಅಶುಭಸೂಚಕಗಳನ್ನು ನಾನೇನೆಂದು ಹೇಳಲಿ.

ಅರ್ಥ:
ಹೆಸರ: ಪ್ರಸಿದ್ಧ; ನಾಯಿ: ಶ್ವಾನ; ಹಾಸ: ಬಂಧನ, ಹಗ್ಗ; ಹರಿ: ಓಡು, ಧಾವಿಸು, ಪ್ರವಹಿಸು; ಉಬ್ಬಸ: ಕಷ್ಟ, ಸಂಕಟ; ಲುಳಿ: ರಭಸ; ಹಿಡಿ: ಬಂಧಿಸು; ಮೃಗ: ಪ್ರಾಣಿ; ಮಸಗು: ಹರಡು; ಹದ: ಸರಿಯಾದ ಸ್ಥಿತಿ; ಒದೆ: ತುಳಿ, ಮೆಟ್ಟು, ತಳ್ಳು; ಹೆದೆ: ಬಿಲ್ಲಿಗೆ ಹೂಡುವ ಬಾಣಕ್ಕೆ ಆಧಾರವಾದ ಸೂತ್ರ; ಹರಿವು: ದಾಳಿ, ಮುತ್ತಿಗೆ; ನುಸುಳು: ತೂರುವಿಕೆ; ಉರಿ:ಸಂಕಟ; ಹೊಗೆ: ಧೂಮ; ದೆಸೆ: ದಿಕ್ಕು; ಕೆದರು: ಹರಡು; ಹೊಲ: ಬೆಳೆ ಬೆಳೆಯುವ ಭೂಮಿ; ಹಸುಬ: ಒಂದು ಬಗೆಯ ಹಕ್ಕಿ; ಹರಡೆ: ಶಕುನದ ಹಕ್ಕಿ, ಹಾಲಕ್ಕಿ; ಶಕುನ: ಶುಭಾಶುಭಗಳನ್ನು ಸೂಚಿಸುವ ನಿಮಿತ್ತ, ಹಕ್ಕಿ; ಸೂಚಕ: ತೋರಿಸು;

ಪದವಿಂಗಡಣೆ:
ಹೆಸರ+ ನಾಯ್ಗಳ +ಹಾಸ +ಹರಿದ್
ಉಬ್ಬಸದ +ಲುಳಿಗದ್+ಅವದಿರ +ಹಿಡಿ+ಮೃಗ
ಮಸಗಿದವು +ಹದವಿಲುಗಳ್+ಒದೆದವು +ಹೆದೆಯ +ಹರಿವಿನಲಿ
ನುಸುಳಿದವು +ಮೊಲನ್+ಉರಿಯ +ಹೊಗೆಗಳ
ದೆಸೆವಿಡಿದು +ಕೆದರಿದವು +ಹೊಲದಲಿ
ಹಸುಬ +ಹರಡೆಗಳ್+ಏನನೆಂಬೆನು +ಶಕುನ +ಸೂಚಕವ

ಅಚ್ಚರಿ:
(೧) ಹ ಕಾರದ ಸಾಲು ಪದಗಳು – ಹೊಲದಲಿ ಹಸುಬ ಹರಡೆಗಳ್, ಹೆದೆಯ ಹರಿವಿನಲಿ

ಪದ್ಯ ೨೦: ನಾಯಿಗಳು ಬೇಟೆಗೆ ಹೇಗೆ ಹೊರಟವು?

ಮಡಿದ ಕೊಡಕೆಗಳೊಡ್ಡಿದುರದೊ
ಪ್ಪಿಡಿಯೆ ನಡುವಿನ ಕೊಂಕಿದುಗುರಿನ
ಕಡುಮನದ ನಿರ್ಮಾಂಸ ಜಂಘೆಯ ಕೆಂಪಿನಾಲಿಗಳ
ಸಿಡಿಲ ಘನಗರ್ಜನೆಯ ಗಗನವ
ತುಡುಕುವಾಕುಳಿಕೆಗಳ ಮೊರಹಿನ
ಮಿಡುಕುಗಳ ನಾಯ್ ನೂಕಿದವು ಹಾಸದ ವಿಳಾಸದಲಿ (ಅರಣ್ಯ ಪರ್ವ, ೧೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಜೋಲು ಬಿದ್ದ ಕಿವಿ, ನೀಳವಾದ ಹೊಟ್ಟೆ, ಒಂದೇ ಹಿಡಿಯಷ್ಟು ನದು, ಕೊಂಕಾದ ಉಗುರುಗಳು, ಕಠೋರ ಚಿತ್ತ, ಮಾಂಸವಿಲ್ಲದ ಕೆಳಗಾಲುಗಳು, ಕೆಂಗಣ್ಣುಗಳು, ಸಿಡಿಲಿನಂತಹ ಸದ್ದು, ಆಕಾಶವನ್ನೇ ಮುಟ್ಟುವಂತೆ ಆಕಳಿಕೆ, ಪಟು ಪರಾಕ್ರಮವುಳ್ಳ ನಾಯಿಗಳು ಹೊರಟವು.

ಅರ್ಥ:
ಮಡಿ: ಜೋತು ಬೀಳು; ಕೊಡಕೆ: ಕಿವಿ; ಒಡ್ಡು: ರಾಶಿ, ಸಮೂಹ; ಉರ: ಎದೆ, ವಕ್ಷಸ್ಥಳ; ಒಪ್ಪಿಡಿ: ಒಂದು ಹಿಡಿ; ನಡು: ಮಧ್ಯಭಾಗ; ಕೊಂಕು: ಡೊಂಕು, ವಕ್ರತೆ; ಉಗುರು: ನಖ; ಕಡುಮನ: ರಭಸದ ಮನಸ್ಸು; ಮಾಂಸ: ಅಡಗು; ಜಂಘೆ: ಕೆಳದೊಡೆ, ಕಿರುದೊಡೆ; ಕೆಂಪು: ರಕ್ತವರ್ಣ; ಆಲಿ:ಕಣ್ಣು; ಸಿಡಿಲು: ಅಶನಿ; ಘನ: ದೊಡ್ಡ; ಗರ್ಜನೆ: ಆರ್ಭಟ; ಗಗನ: ಆಗಸ; ತುಡುಕು: ಬೇಗನೆ ಹಿಡಿಯುವುದು; ಆಕುಳಿಸು: ಆವರಿಸು; ಮೊರಹು: ಬಾಗು, ಕೋಪ; ಮಿಡುಕು: ಅಲುಗಾಟ; ನಾಯ್: ನಾಯಿ, ಶ್ವಾನ; ನೂಕು: ತಳ್ಳು; ಹಾಸ: ಹಗ್ಗ, ಪಾಶ; ವಿಲಾಸ: ಅಂದ, ಸೊಬಗು;

ಪದವಿಂಗಡಣೆ:
ಮಡಿದ +ಕೊಡಕೆಗಳ್+ಒಡ್ಡಿದ್+ಉರದ್
ಒಪ್ಪಿಡಿಯೆ +ನಡುವಿನ +ಕೊಂಕಿದ್+ಉಗುರಿನ
ಕಡುಮನದ +ನಿರ್ಮಾಂಸ +ಜಂಘೆಯ +ಕೆಂಪಿನ್+ಆಲಿಗಳ
ಸಿಡಿಲ +ಘನಗರ್ಜನೆಯ +ಗಗನವ
ತುಡುಕುವ್+ಆಕುಳಿಕೆಗಳ +ಮೊರಹಿನ
ಮಿಡುಕುಗಳ+ ನಾಯ್ +ನೂಕಿದವು +ಹಾಸದ +ವಿಳಾಸದಲಿ

ಅಚ್ಚರಿ:
(೧) ಆಕಳಿಕೆಯ ವಿವರಣೆ – ಗಗನವತುಡುಕುವಾಕುಳಿಕೆ

ಪದ್ಯ ೧೯: ಭೀಮನು ಬೇಟೆಗೆ ಹೇಗೆ ತಯಾರಾದನು?

ಅಂಗಚಿತ್ತವನಿತ್ತನಾ ಶಬ
ರಂಗೆ ಬಲೆಗಳ ತೆಗೆಸಿದನು ಹಸು
ರಂಗಿಯನು ತೊಟ್ಟನು ಚಡಾಳಿಸಿ ಪದದೊಳೆಕ್ಕಡವ
ಸಿಂಗಶರಭವ ನಳವಿಗೊಡಲವ
ರಂಗಳಿಯಲಡುಪಾಯ ಲೌಡಿಯ
ಜಂಗುಳಿಯ ಜೋಡಿಸಿದನಂದು ಜವಾಯ್ಲ ಜಾಯಿಲನ (ಅರಣ್ಯ ಪರ್ವ, ೧೪ ಸಂಧಿ, ೧೯ ಪದ್ಯ)

ತಾತ್ಪರ್ಯ:
ಶಬರನ ಮಾತನ್ನು ಕೇಳಿದ ಭೀಮನು ಅವನಿಗೆ ತನ್ನ ಮೈಮೇಲಿದ್ದ ಹಾರವನ್ನು ಉಡುಗೊರೆಯಾಗಿ ನೀಡಿದನು. ನಾನಾ ವಿಧವಾದ ಬಲೆಗಳನ್ನು ತೆಗೆಸಿದನು. ತಾನೇ ಹಸುರು ಬಣ್ಣದ ಅಂಗಿಯನ್ನು ತೊಟ್ಟು, ಪಾದದಲ್ಲಿ ಎಕ್ಕಡವನ್ನು ಮೆಟ್ಟಿದನು. ಸಿಂಹ, ಶರಭಗಳನ್ನೆದುರಿಸಿ ಅವುಗಳ ಬಾಯಿಗೆ ಅಗುಳಿಯನ್ನು ಹಾಕಲು ವೇಗವಾದ ಬೇಟೆ ನಾಯಿಗಳನ್ನು ಜೋಡಿಸಿದನು.

ಅರ್ಥ:
ಅಂಗ: ದೇಹದ ಭಾಗ; ಅಂಗಚಿತ್ತ: ಉಡುಗೊರೆಯಾಗಿ ತನ್ನ ಮೈ ಮೇಲಿನಿಂದ ತೆಗೆದು ಕೊಡುವ ವಸ್ತ್ರ, ಆಭರಣ ಇತ್ಯಾದಿ; ಇತ್ತನು: ನೀಡು; ಶಬರ: ಬೇಡ; ಬಲೆ: ಜಾಲ; ತೆಗೆಸು: ಹೊರತರು; ಅಂಗಿ: ವಸ್ತ್ರ; ತೊಡು: ಧರಿಸು; ಚಡಾಳಿಸು: ಜೋಡಿಸು; ಪದ: ಚರಣ; ಎಕ್ಕಡ: ಚಪ್ಪಲಿ; ಸಿಂಗ: ಸಿಂಹ; ಶರಭ: ಎಂಟು ಕಾಲುಗಳುಳ್ಳ ಒಂದು ಕಾಲ್ಪನಿಕ ಪ್ರಾಣಿ; ಅಳವಿ: ವಶ; ಅಳಿ: ನಾಶ; ಅಡುಪಾಯ: ಇನ್ನೊಂದು ಉಪಾಯ; ಲೌಡಿ: ಕಬ್ಬಿಣದ ಆಯುಧ; ಜಂಗುಳಿ: ಗುಂಪು; ಜೋಡಿಸು: ಹೊಂದಿಸು; ಜವಾಯ್ಲ: ವೇಗ; ಜಾಯಿಲ: ನಾಯಿ;

ಪದವಿಂಗಡಣೆ:
ಅಂಗಚಿತ್ತವನ್+ಇತ್ತನ್+ಆ+ ಶಬ
ರಂಗೆ +ಬಲೆಗಳ +ತೆಗೆಸಿದನು +ಹಸುರ್
ಅಂಗಿಯನು +ತೊಟ್ಟನು +ಚಡಾಳಿಸಿ +ಪದದೊಳ್+ಎಕ್ಕಡವ
ಸಿಂಗ+ಶರಭವನ್+ಅಳವಿಗೊಡಲ್+ಅವರ್
ಅಂಗಳಿಯಲ್+ಅಡುಪಾಯ +ಲೌಡಿಯ
ಜಂಗುಳಿಯ +ಜೋಡಿಸಿದನ್+ಅಂದು +ಜವಾಯ್ಲ +ಜಾಯಿಲನ

ಅಚ್ಚರಿ:
(೧) ಜ ಕಾರದ ಸಾಲು ಪದ – ಜಂಗುಳಿಯ ಜೋಡಿಸಿದನಂದು ಜವಾಯ್ಲ ಜಾಯಿಲನ

ಪದ್ಯ ೧೮: ಏನನ್ನು ತೋರುವೆನೆಂದು ಬೇಡನು ಕರೆದನು?

ಕಂಡ ಮೃಗ ಮೈದೆಗೆಯದಿಕ್ಕೆಯ
ಹಿಂಡು ಹೊಳಹಿನ ಹುಲಿಯ ಕರಡಿಯ
ಮಿಂಡವಂದಿನ ಲಾವಣಿಗೆಯ ಲುಲಾಯಲಾಲನೆಯ
ತೊಂಡು ಮೊಲನ ತೊಂಡಕು ನವಿಲಿನ
ಮಂಡಳಿಯ ಮೇಳವದ ಖಡ್ಗಿಯ
ಹಿಂಡುಗಳ ತೋರಿಸುವೆನೇಳೆಂದನಿಲಜನ ಕರೆದ (ಅರಣ್ಯ ಪರ್ವ, ೧೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ನೋಡಿದರೂ ಹೋದರೂ ಆ ಮೃಗಗಳು ಹಿಂದೆ ಸರಿಯುವುದಿಲ್ಲ. ಹುಲಿ ಕರಡಿಗಳ ಹಿಂಡುಗಳ ಗರ್ವ, ಕಾದುಕೋಣಗಳ ಗುಂಪು, ಮೊಲಗಳ ಚಲನೆ, ನವಿಲು, ಹಾವುಗಳು ಜೊತೆ ಜೊತೆ ಇರುವುದು, ಖಡ್ಗಮೃಗದ ಹಿಂಡುಗಳನ್ನು ತೋರುತ್ತೇನೆ ಮೇಲೇಳು ಎಂದು ಬೇಡನು ಭೀಮಸೇನನನ್ನು ಕರೆದನು.

ಅರ್ಥ:
ಕಂಡು: ನೋಡು; ಮೃಗ: ಪ್ರಾಣಿ; ಮೈ: ತನು, ದೇಹ; ತೆಗೆ: ಈಚೆಗೆ ತರು, ಹೊರತರು; ಇಕ್ಕೆ: ನೆಲೆ; ಬೀಡು; ಹಿಂಡು: ಗುಂಪು; ಹೊಳಹು: ಸ್ವರೂಪ, ಲಕ್ಷಣ; ಹುಲಿ: ವ್ಯಾಘ್ರ; ಕರಡಿ: ಮೈಎಲ್ಲಾ ಕೂದಲುಳ್ಳಪ್ರಾಣಿ; ಮಿಂಡ:ಹರೆಯದ, ಪ್ರಾಯದ; ಲಾವಣಿಗೆ: ಗುಂಪು, ಸಮೂಹ; ಲುಲಾಯ: ಕೋಣ, ಮಹಿಷ; ಲಾಲನೆ: ಅಕ್ಕರೆ ತೋರಿಸುವುದು, ಮುದ್ದಾಟ; ತೊಂಡು: ಉದ್ಧಟತನ, ದುಷ್ಟತನ; ಮೊಲ: ತೊಂಡ: ಆಳು; ತುಂಟತನ, ತುಂಟ; ನವಿಲು: ಮಯೂರ; ಮಂಡಳಿ: ಗುಂಪು; ಮೇಳ: ಸೇರುವಿಕೆ, ಕೂಡುವಿಕೆ; ಖಡ್ಗಿ: ಘೇಂಡಾಮೃಗ; ಹಿಂಡು: ಗುಂಪು; ತೋರಿಸು: ನೋಡು, ಗೋಚರಿಸು; ಅನಿಲಜ: ಭೀಮ; ಕರೆ: ಬರೆಮಾಡು;

ಪದವಿಂಗಡಣೆ:
ಕಂಡ +ಮೃಗ +ಮೈದೆಗೆಯದ್+ಇಕ್ಕೆಯ
ಹಿಂಡು +ಹೊಳಹಿನ +ಹುಲಿಯ +ಕರಡಿಯ
ಮಿಂಡವಂದಿನ+ ಲಾವಣಿಗೆಯ +ಲುಲಾಯ+ಲಾಲನೆಯ
ತೊಂಡು +ಮೊಲನ +ತೊಂಡಕು +ನವಿಲಿನ
ಮಂಡಳಿಯ +ಮೇಳವದ+ ಖಡ್ಗಿಯ
ಹಿಂಡುಗಳ +ತೋರಿಸುವೆನ್+ಏಳೆಂದ್+ಅನಿಲಜನ +ಕರೆದ

ಅಚ್ಚರಿ:
(೧) ಲ ಕಾರದ ತ್ರಿವಳಿ ಪದ – ಲಾವಣಿಗೆಯ ಲುಲಾಯ ಲಾಲನೆಯ
(೨) ಅರಣ್ಯದಲ್ಲಿ ಕಾಣುವ ವಿಶೇಷತೆ: ತೊಂಡು ಮೊಲನ ತೊಂಡಕು ನವಿಲಿನ
ಮಂಡಳಿಯ ಮೇಳವದ ಖಡ್ಗಿಯ ಹಿಂಡುಗಳ ತೋರಿಸುವೆ

ಪದ್ಯ ೧೭: ಬೇಡನು ಭೀಮನಿಗೆ ಏನು ಹೇಳಿದನು?

ಮೇಹುಗಾಡಿನೊಳವರ ಮೈಮಿಗೆ
ಸೋಹಿದರೆ ಸುವ್ವಲೆಯ ಸುಬ್ಬಲೆ
ಯಾಹವದಲೇ ತೋಳ ತೆಕ್ಕೆಯ ತೋಟ ತೇಗುವರೆ
ತೋಹಿನಲಿ ತೊದಳಾಗಿ ಗೋರಿಯ
ಗಾಹಿನಲಿ ಗುರಿ ಗಡಬಡಿಸೆ ಹುಲು
ಸಾಹಸಕ್ಕಂಜುವೆವು ನೀನೇಳೆಂದನಾ ಶಬರ (ಅರಣ್ಯ ಪರ್ವ, ೧೪ ಸಂಧಿ, ೧೭ ಪದ್ಯ)

ತಾತ್ಪರ್ಯ:
ಮೇಯುವ ಕಾಡಿನಲ್ಲಿ ಅವುಗಳನ್ನು ಸೋಹಿಕೊಂಡು ಬಂದರೆ ಅವುಗಳು ಗುಂಪುಗುಂಪಾಗಿ ತೆಕ್ಕೆಗೆ ಸಿಗುತ್ತವೆ. ಅವನ್ನು ಹೊಡೆಯಲು ಹೋದರೆ ಅವು ಮರಗಳ ಗುಂಪಿನಲ್ಲಿ ಸೇರಿಕೊಂಡು ಮಾಯವಾಗುತ್ತವೆ. ಹಾಡು ಹೇಳಿ ಆಕರ್ಷಿಸಲು ಹೋದರೆ ಆಗುವುದಿಲ್ಲ, ನಾವಿಟ್ಟಗುರಿ ಹೆಚ್ಚು ಕಡಿಮೆಯಾಗುತ್ತದೆ. ಅವುಗಳ ಕಾಟ ಹೆಚ್ಚಾದರೂ ಸಾಹಸದಿಂದ ಯಾವ ಪ್ರಯೊಜನವೂ ಆಗದು. ಆದುದರಿಂದ ಬೇಟೆಗೆ ನೀನೇ ಬಾ ಎಂದು ಬೇಡನು ಭೀಮನಿಗೆ ಹೇಳಿದನು.

ಅರ್ಥ:
ಮೇಹು: ಮೇಯುವ; ಕಾಡು: ಕಾನನ, ಅರಣ್ಯ; ಸೋಹು: ಅಡಗಿರುವ ಪ್ರಾಣಿಗಳನ್ನು ಪೊದೆ ಗಳಿಂದ ಎಬ್ಬಿಸಿ ಆಡುವ ಒಂದು ಬಗೆಯ ಬೇಟೆ; ಸುವ್ವಲೆ, ಸುಬ್ಬಲೆ: ಒಂದು ಬಗೆಯಾದ ಬಲೆ; ತೋಳ: ವೃಕ; ತೆಕ್ಕೆ: ಗುಂಪು; ತೋಟಿ: ಕಲಹ, ಜಗಳ; ತೇಗು: ತಿಂದು ಮುಗಿಸು, ಏಗು; ತೋಹು: ಮರಗಳ ಗುಂಪು, ಸಮೂಹ, ತೋಪು; ತೊದಳು: ಉಗ್ಗು; ಗೋರಿ: ಬೇಟೆಯಲ್ಲಿ ಜಿಂಕೆಗಳನ್ನು ಮರುಳುಗೊಳಿ ಸಲು ಬೇಟೆಗಾರರು ಹಾಡುವ ಹಾಡು; ಗಾಹು: ಮೋಸ, ವಂಚನೆ; ಗುರಿ: ಈಡು, ಲಕ್ಷ್ಯ; ಗಡಬಡಿ: ಆತುರ; ಹುಲು: ಕ್ಷುದ್ರ, ಅಲ್ಪ; ಸಾಹಸ: ಪರಾಕ್ರಮ; ಅಂಜು: ಹೆದರು; ಶಬರ: ಬೇಡ;

ಪದವಿಂಗಡಣೆ:
ಮೇಹುಗಾಡಿನೊಳ್+ಅವರ +ಮೈಮಿಗೆ
ಸೋಹಿದರೆ+ ಸುವ್ವಲೆಯ+ ಸುಬ್ಬಲೆ
ಆಹವದಲೇ+ ತೋಳ+ ತೆಕ್ಕೆಯ +ತೋಟ +ತೇಗುವರೆ
ತೋಹಿನಲಿ+ ತೊದಳಾಗಿ +ಗೋರಿಯ
ಗಾಹಿನಲಿ+ ಗುರಿ+ ಗಡಬಡಿಸೆ+ ಹುಲು
ಸಾಹಸಕ್+ಅಂಜುವೆವು +ನೀನ್+ಏಳೆಂದನಾ+ ಶಬರ

ಅಚ್ಚರಿ:
(೧) ತ ಕಾರದ ಸಾಲು ಪದಗಳು – ತೋಳ ತೆಕ್ಕೆಯ ತೋಟ ತೇಗುವರೆ ತೋಹಿನಲಿ ತೊದಳಾಗಿ
(೨) ಗ ಕಾರದ ಸಾಲು ಪದ – ಗೋರಿಯ ಗಾಹಿನಲಿ ಗುರಿ ಗಡಬಡಿಸೆ
(೩) ಸ ಕಾರದ ತ್ರಿವಳಿ ಪದ – ಸೋಹಿದರೆ ಸುವ್ವಲೆಯ ಸುಬ್ಬಲೆಯಾಹವದಲೇ