ಪದ್ಯ ೨೪: ಹನುಮನು ಭೀಮನಿಗೆ ಯಾವ ಪ್ರಶ್ನೆ ಕೇಳಿದನು?

ನಾವು ವಾನರರಟವಿಯಲಿ ಫಲ
ಜೀವಿಗಳು ನಿಸ್ಸತ್ವರಿಲ್ಲಿಯ
ಠಾವ ಬಿಡಲನ್ಯತ್ರಗಮನತ್ರಾಣವಿಲ್ಲೆಮಗೆ
ನೀವು ದಿಟವಾರೈ ಮಹಾ ಸಂ
ಭಾವಿತರು ಸುರನರ ಭುಜಂಗರ
ಲಾವಕುಲ ನಿಮಗೆಂದು ಭೀಮನು ನುಡಿಸಿದನು ಹನುಮ (ಅರಣ್ಯ ಪರ್ವ, ೧೧ ಸಂಧಿ, ೨೪ ಪದ್ಯ)

ತಾತ್ಪರ್ಯ:
ಭೀಮನ ಪ್ರಶ್ನೆಗೆ ಹನುಮನು ಉತ್ತರಿಸುತ್ತಾ, ನಾವು ವಾನರ ಕುಲಕ್ಕೆ ಸೇರಿದವರು. ಕಾಡಿನಲ್ಲಿ ಹಣ್ಣು ತಿಂದು ಜೀವಿಸುವವರು. ನಮಗೆ ಶಕ್ತಿಯಿಲ್ಲ, ಈ ಜಾಗವನ್ನು ಬಿಟ್ಟು ಬೇರೆಡೆಗೆ ಹೋಗೋಣವೆಂದರೆ ನಮ್ಮಲ್ಲಿ ತ್ರಾಣವಿಲ್ಲ. ನಿಜ, ನೀವಾರು? ಮಹಾಗೌರವಶಾಲಿಗಳಂತಿರುವಿರಿ, ದೇವತೆಗಳೋ, ಮನುಷ್ಯರೋ, ಸರ್ಪಗಳೋ, ನೀವು ಯಾವ ಕುಲಕ್ಕೆ ಸೇರಿದವರು ಎಂದು ಹನುಮನು ಪ್ರಶ್ನಿಸಿದನು.

ಅರ್ಥ:
ವಾನರ: ಮಂಗ, ಕಪಿ; ಅಟವಿ: ಕಾದು; ಫಲ: ಹಣ್ಣು; ಜೀವಿ: ಪ್ರಾಣಿ; ಸತ್ವ: ಶಕ್ತಿ; ಠಾವು: ಸ್ಥಳ, ಜಾಗ; ಬಿಡಲು: ತೊರೆ; ಅನ್ಯ: ಬೇರೆ; ಗಮನ: ನಡೆ, ಚಲಿಸು; ತ್ರಾಣ: ಶಕ್ತಿ; ದಿಟ: ಸತ್ಯ; ಸಂಭಾವಿತ: ಯೋಗ್ಯ, ಸಭ್ಯ; ಸುರ: ದೇವತೆ; ನರ: ಮನುಷ್ಯ; ಭುಜಂಗ: ಸರ್ಪ; ಕುಲ: ವಂಶ; ನುಡಿಸು: ಮಾತನಾಡಿಸು;

ಪದವಿಂಗಡಣೆ:
ನಾವು +ವಾನರರ್+ಅಟವಿಯಲಿ +ಫಲ
ಜೀವಿಗಳು +ನಿಸ್ಸತ್ವರ್+ಇಲ್ಲಿಯ
ಠಾವ +ಬಿಡಲ್+ಅನ್ಯತ್ರ+ಗಮನ+ತ್ರಾಣವ್+ಇಲ್ಲೆಮಗೆ
ನೀವು +ದಿಟವಾರೈ +ಮಹಾ +ಸಂ
ಭಾವಿತರು +ಸುರ+ನರ+ ಭುಜಂಗರಲ್
ಆವಕುಲ+ ನಿಮಗೆಂದು+ ಭೀಮನು +ನುಡಿಸಿದನು +ಹನುಮ

ಅಚ್ಚರಿ:
(೧) ಮೂರು ಲೋಕದಲ್ಲಿ ನೀವ್ಯಾರು ಎಂದು ಕೇಳುವ ಪರಿ – ನೀವು ದಿಟವಾರೈ ಮಹಾ ಸಂ
ಭಾವಿತರು ಸುರನರ ಭುಜಂಗರಲಾವಕುಲ

ನಿಮ್ಮ ಟಿಪ್ಪಣಿ ಬರೆಯಿರಿ