ತೆಗೆದು ನಿಂದನು ಭೀಮ ಹೊಯ್ವ
ಳ್ಳೆಗಳ ತಲ್ಲಣವಡಗಲೊಳ ತಾ
ಳಿಗೆಗೆ ಕವಳವ ನೂಕಿದನು ಕರ್ಪುರದ ಹಳುಕುಗಳ
ಡಗೆ ಮರಳೆ ಮರುವಲಗೆ ಗೌಡೊ
ತ್ತುಗಳ ಬಲಿದವಯವದ ಸತ್ರಾ
ಣಿಗಳ ದೇವನು ಠಾವುರಿಯಲೊದಗಿದನು ಬಾಲದಲಿ (ಅರಣ್ಯ ಪರ್ವ, ೧೧ ಸಂಧಿ, ೨೦ ಪದ್ಯ)
ತಾತ್ಪರ್ಯ:
ಭೀಮನು ಹಿಂದಕ್ಕೆ ಸರಿದು ತಾಂಬೂಲವನ್ನೂ, ಪಚ್ಚಕರ್ಪೂರವನ್ನೂ ಬಾಯಿಗೆ ಹಾಕಿಕೊಂಡು ತನ್ನಲ್ಲಾದ ತಲ್ಲಣವನ್ನು ಅಡಗಿಸಿಕೊಂಡನು. ಅವನಲ್ಲಿ ಧಗೆಯು ಮತ್ತೆ ಆವರಿಸಿತು. ಅವನು ಆವುಡೊತ್ತಿ ದೇಹವನ್ನು ಗಟ್ಟಿಮಾಡಿಕೊಂಡು ಠಾವುರಿಯಿಂದ ಬಾಲವನ್ನೆತ್ತಲು ಯತ್ನಿಸಿದನು.
ಅರ್ಥ:
ತೆಗೆ: ಹೊರತರು; ನಿಂದನು: ನಿಲ್ಲು; ಹೊಯ್ವಳ್ಳೆ: ತೇಕುತ್ತಿರುವ ಪಕ್ಕೆಗಳು; ತಲ್ಲಣ: ಅಂಜಿಕೆ, ಭಯ; ಅಡಗು: ಮುಚ್ಚು; ತಾಳಿಗೆ: ಗಂಟಲು; ಕವಳ: ಊಟ; ನೂಕು: ತಳ್ಳು; ಕರ್ಪುರ: ಹಳುಕು: ಚೂರು; ಡಗೆ: ಸೆಕೆ, ಕಾವು; ಮರಳು: ಹಿಂದಿರುಗು; ಮರು: ಮುಂದಿನ; ಗೌಡೊತ್ತು: ಜೋರಾಗಿ ಸರಿಸು; ಬಲಿದ: ಗಟ್ಟಿ; ಅವಯವ: ದೇಹದ ಒಂದು ಭಾಗ, ಅಂಗ; ಸತ್ರಾಣಿ: ಬಲಶಾಲಿ; ದೇವ: ಸುರ; ಠಾವುರಿ: ಒಂದು ಪಟ್ಟು; ಒದಗು: ಲಭ್ಯ, ದೊರೆತುದು; ಬಾಲ: ಪುಚ್ಛ;
ಪದವಿಂಗಡಣೆ:
ತೆಗೆದು+ ನಿಂದನು +ಭೀಮ +ಹೊಯ್ವ
ಳ್ಳೆಗಳ +ತಲ್ಲಣವ್+ಅಡಗಲ್+ಒಳ +ತಾ
ಳಿಗೆಗೆ +ಕವಳವ +ನೂಕಿದನು +ಕರ್ಪುರದ+ ಹಳುಕುಗಳ
ಡಗೆ+ ಮರಳೆ+ ಮರುವಲಗೆ+ ಗೌಡೊ
ತ್ತುಗಳ+ ಬಲಿದ್+ಅವಯವದ +ಸತ್ರಾ
ಣಿಗಳ +ದೇವನು +ಠಾವುರಿಯಲ್+ಒದಗಿದನು +ಬಾಲದಲಿ
ಅಚ್ಚರಿ:
(೧) ಭೀಮನನ್ನು ಸತ್ರಾಣಿಗಳ ದೇವನು ಎಂದು ಕರೆದಿರುವುದು
(೨) ತಿನ್ನುವುದನ್ನು ಚಿತ್ರಿಸಿರುವ ಪರಿ – ಭೀಮ ಹೊಯ್ವಳ್ಳೆಗಳ ತಲ್ಲಣವಡಗಲೊಳ ತಾ
ಳಿಗೆಗೆ ಕವಳವ ನೂಕಿದನು ಕರ್ಪುರದ ಹಳುಕುಗಳ