ಪದ್ಯ ೨೦: ಭೀಮನು ಹೇಗೆ ಹನುಮನ ಬಾಲವನ್ನು ಎತ್ತಲು ಪ್ರಯತ್ನಿಸಿದನು?

ತೆಗೆದು ನಿಂದನು ಭೀಮ ಹೊಯ್ವ
ಳ್ಳೆಗಳ ತಲ್ಲಣವಡಗಲೊಳ ತಾ
ಳಿಗೆಗೆ ಕವಳವ ನೂಕಿದನು ಕರ್ಪುರದ ಹಳುಕುಗಳ
ಡಗೆ ಮರಳೆ ಮರುವಲಗೆ ಗೌಡೊ
ತ್ತುಗಳ ಬಲಿದವಯವದ ಸತ್ರಾ
ಣಿಗಳ ದೇವನು ಠಾವುರಿಯಲೊದಗಿದನು ಬಾಲದಲಿ (ಅರಣ್ಯ ಪರ್ವ, ೧೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ಭೀಮನು ಹಿಂದಕ್ಕೆ ಸರಿದು ತಾಂಬೂಲವನ್ನೂ, ಪಚ್ಚಕರ್ಪೂರವನ್ನೂ ಬಾಯಿಗೆ ಹಾಕಿಕೊಂಡು ತನ್ನಲ್ಲಾದ ತಲ್ಲಣವನ್ನು ಅಡಗಿಸಿಕೊಂಡನು. ಅವನಲ್ಲಿ ಧಗೆಯು ಮತ್ತೆ ಆವರಿಸಿತು. ಅವನು ಆವುಡೊತ್ತಿ ದೇಹವನ್ನು ಗಟ್ಟಿಮಾಡಿಕೊಂಡು ಠಾವುರಿಯಿಂದ ಬಾಲವನ್ನೆತ್ತಲು ಯತ್ನಿಸಿದನು.

ಅರ್ಥ:
ತೆಗೆ: ಹೊರತರು; ನಿಂದನು: ನಿಲ್ಲು; ಹೊಯ್ವಳ್ಳೆ: ತೇಕುತ್ತಿರುವ ಪಕ್ಕೆಗಳು; ತಲ್ಲಣ: ಅಂಜಿಕೆ, ಭಯ; ಅಡಗು: ಮುಚ್ಚು; ತಾಳಿಗೆ: ಗಂಟಲು; ಕವಳ: ಊಟ; ನೂಕು: ತಳ್ಳು; ಕರ್ಪುರ: ಹಳುಕು: ಚೂರು; ಡಗೆ: ಸೆಕೆ, ಕಾವು; ಮರಳು: ಹಿಂದಿರುಗು; ಮರು: ಮುಂದಿನ; ಗೌಡೊತ್ತು: ಜೋರಾಗಿ ಸರಿಸು; ಬಲಿದ: ಗಟ್ಟಿ; ಅವಯವ: ದೇಹದ ಒಂದು ಭಾಗ, ಅಂಗ; ಸತ್ರಾಣಿ: ಬಲಶಾಲಿ; ದೇವ: ಸುರ; ಠಾವುರಿ: ಒಂದು ಪಟ್ಟು; ಒದಗು: ಲಭ್ಯ, ದೊರೆತುದು; ಬಾಲ: ಪುಚ್ಛ;

ಪದವಿಂಗಡಣೆ:
ತೆಗೆದು+ ನಿಂದನು +ಭೀಮ +ಹೊಯ್ವ
ಳ್ಳೆಗಳ +ತಲ್ಲಣವ್+ಅಡಗಲ್+ಒಳ +ತಾ
ಳಿಗೆಗೆ +ಕವಳವ +ನೂಕಿದನು +ಕರ್ಪುರದ+ ಹಳುಕುಗಳ
ಡಗೆ+ ಮರಳೆ+ ಮರುವಲಗೆ+ ಗೌಡೊ
ತ್ತುಗಳ+ ಬಲಿದ್+ಅವಯವದ +ಸತ್ರಾ
ಣಿಗಳ +ದೇವನು +ಠಾವುರಿಯಲ್+ಒದಗಿದನು +ಬಾಲದಲಿ

ಅಚ್ಚರಿ:
(೧) ಭೀಮನನ್ನು ಸತ್ರಾಣಿಗಳ ದೇವನು ಎಂದು ಕರೆದಿರುವುದು
(೨) ತಿನ್ನುವುದನ್ನು ಚಿತ್ರಿಸಿರುವ ಪರಿ – ಭೀಮ ಹೊಯ್ವಳ್ಳೆಗಳ ತಲ್ಲಣವಡಗಲೊಳ ತಾ
ಳಿಗೆಗೆ ಕವಳವ ನೂಕಿದನು ಕರ್ಪುರದ ಹಳುಕುಗಳ

ನಿಮ್ಮ ಟಿಪ್ಪಣಿ ಬರೆಯಿರಿ