ಪದ್ಯ ೧೪: ಹನುಮನು ಭೀಮನ ಬಲವನ್ನು ಪರೀಕ್ಷಿಸಲು ಏನು ಮಾಡಿದ?

ನಿರಿನಿರಿಲು ನಿರಿಲೆನುತ ಹೆಮ್ಮರ
ಮುರಿದುದಾತನ ರೋಮ ಸೋಂಕಿನ
ಲಿರಿಕಿಲಾದುದು ಧರಣಿಯನಿಲಜ ಮುರಿದ ಮಗ್ಗುಲಲಿ
ಉರುವ ಬಾಲವ ಬೆಳೆಸಿ ದಾರಿಯ
ತೆರಹುಗೊಡದೆಡೆಯೊಡ್ಡಿ ಮನುಜನ
ಮುರುಕವನು ತಾ ಕಾಂಬೆನಿನ್ನೆನುತಿರ್ದನಾ ಹನುಮ (ಅರಣ್ಯ ಪರ್ವ, ೧೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ಹನುಮಂತನು ತನ್ನ ಬಾಲವನ್ನು ಬೆಳಸಿದನು. ಆ ಬಾಲದ ಮೇಲಿನ ಕೂದಲುಗಳಿಗೆ ತಾಕಿ ದೊಡ್ಡ ಮರಗಳು ನಿರಿ ನಿರಿ ಎಂದು ಸದ್ದು ಮಾಡುತ್ತಾ ಉರುಳಿದವು. ಬಾಲವು ಬೆಳೆದ ಚಾಚಿದಾಗ ಭೂಮಿಯು ಇಕ್ಕಟ್ಟಾಯಿತು. ಹನುಮಂತನು ಈ ಮನುಷ್ಯನ ಸತ್ವ ಸಾಹಸಗಳನ್ನು ನೋಡೋಣ ಎಂದು ಕೊಂಡನು.

ಅರ್ಥ:
ಹೆಮ್ಮರ: ದೊಡ್ಡ ವೃಕ್ಷ; ಮುರಿ: ಸೀಳು; ರೋಮ: ಕೂದಲು; ಸೋಂಕು: ತಾಗು; ಇರಿಕು: ಇಕ್ಕಟ್ಟು; ಧರಣಿ: ಭೂಮಿ; ಅನಿಲಜ: ವಾಯುಪುತ್ರ (ಭೀಮ); ಮಗ್ಗುಲ: ಪಕ್ಕ; ಉರುವ: ಶ್ರೇಷ್ಠ; ಬಾಲ: ಪುಚ್ಛ; ಬೆಳೆಸು: ವೃದ್ಧಿಸು, ದೊಡ್ಡದಾಗು; ದಾರಿ: ಮಾರ್ಗ; ತೆರಹು: ಬಿಚ್ಚು, ತೆರೆ; ಎಡೆ: ಷ್ಟವಾಗಿ ಕಾಣು, ನಡುವೆ; ಮನುಜ: ಮನುಷ್ಯ; ಮುರುಕ: ಬಿಂಕ, ಬಿನ್ನಾಣ, ಸೊಕ್ಕು; ಕಾಂಬೆ: ನೋಡು; ಹನುಮ: ಆಂಜನೇಯ;

ಪದವಿಂಗಡಣೆ:
ನಿರಿನಿರಿಲು +ನಿರಿಲೆನುತ +ಹೆಮ್ಮರ
ಮುರಿದುದ್+ಆತನ +ರೋಮ +ಸೋಂಕಿನಲ್
ಇರಿಕಿಲಾದುದು +ಧರಣಿ+ಅನಿಲಜ+ ಮುರಿದ+ ಮಗ್ಗುಲಲಿ
ಉರುವ+ ಬಾಲವ +ಬೆಳೆಸಿ+ ದಾರಿಯ
ತೆರಹುಗೊಡದ್+ಎಡೆಯೊಡ್ಡಿ+ ಮನುಜನ
ಮುರುಕವನು +ತಾ +ಕಾಂಬೆನಿನ್+ಎನುತಿರ್ದನಾ+ ಹನುಮ

ಅಚ್ಚರಿ:
(೧) ಮರಮುರಿಯುವುದನ್ನು ಹೇಳುವ ಪರಿ – ನಿರಿನಿರಿಲು ನಿರಿಲೆನುತ ಹೆಮ್ಮರ ಮುರಿದುದಾತನ ರೋಮ ಸೋಂಕಿನಲ್

ನಿಮ್ಮ ಟಿಪ್ಪಣಿ ಬರೆಯಿರಿ