ಪದ್ಯ ೮: ಭೀಮನ ಓಡಾಟವು ಅಡವಿಯನ್ನು ಹೇಗೆ ನಡುಗಿಸಿತು?

ಒದರಿದರೆ ಪರ್ವತದ ಶಿಖರದ
ಲುದುರಿದವು ಹೆಗ್ಗುಂಡುಗಳು ಮುರಿ
ದೊದೆಯೆ ಬಿದ್ದವು ಬೇರು ಸಹಿತ ಮಹಾದ್ರುಮಾಳಿಗಳು
ಗದೆಯ ಹೊಯ್ಲಿನ ಗಂಡಶೈಲವೊ
ಕದಳಿಗಳೊ ತಾವರಿಯೆವುಬ್ಬಿದ
ಮದಮುಖನ ಪರಿಮಸಕ ಮುರಿದುದು ಗಿರಿತರುವ್ರಜವ (ಅರಣ್ಯ ಪರ್ವ, ೧೧ ಸಂಧಿ, ೮ ಪದ್ಯ)

ತಾತ್ಪರ್ಯ:
ಭೀಮನು ಅಬ್ಬರಿಸಿದರೆ ಪರ್ವತ ಶಿಖರಗಳಲ್ಲಿದ್ದ ದೊಡ್ಡ ಗುಂಡುಗಳು ಉದುರಿದವು. ಕಾಲು ಝಾಡಿಸಿದರೆ ಮಹಾವೃಕ್ಷಗಳು ಬೇರು ಸಹಿತ ಉರುಳಿದವು. ಗದೆಯ ಹೊಡೆತಕ್ಕೆ ಬೆಟ್ಟದ ಕಲ್ಲುಗಳು ಬಾಳೆಯ ಗಿಡಗಳಂತೆ ಮುರಿದುಬಿದ್ದವು. ಮದೊನ್ಮತ್ತನಾದ ಭೀಮನ ಚಲನವು ಬೆಟ್ಟ, ಅಡವಿಗಳನ್ನು ನಡುಗಿಸಿತು.

ಅರ್ಥ:
ಒದರು: ಕೊಡಹು, ಜಾಡಿಸು, ಕೂಗು; ಪರ್ವತ: ಬೆಟ್ಟ; ಶಿಖರ: ತುದಿ; ಉದುರು: ಕೆಳಕ್ಕೆ ಬೀಳು; ಹೆಗ್ಗುಂಡು: ದೊಡ್ಡ ಬಂಡೆ; ಮುರಿ: ಸೀಳು; ಒದೆ: ಕಾಲಿನಿಂದ ತಳ್ಳು; ಬಿದ್ದು: ಕೆಳಗೆ ಜಾರು; ಬೇರು: ಮೂಲ; ಸಹಿತ: ಜೊತೆ; ದ್ರುಮ: ಮರ,ವೃಕ್ಷ; ಆಳಿ: ಸಾಲು, ಗುಂಪು; ಗದೆ: ಮುದ್ಗರ; ಹೊಯ್ಲು: ಹೊಡೆತ; ಗಂಡಶೈಲ: ಬೆಟ್ಟದಿಂದ ಉರುಳಿಬಿದ್ದ ದೊಡ್ಡಬಂಡೆ; ಕದಳಿ: ಬಾಳೆ; ಉಬ್ಬು: ಹೆಚ್ಚು; ಮದ: ಮತ್ತು, ಅಮಲು; ಮುಖ: ಆನನ; ಮಸಕ: ಆಧಿಕ್ಯ, ಹೆಚ್ಚಳ, ವೇಗ; ಗಿರಿ: ಬೆಟ್ಟ; ತರು: ಮರ; ವ್ರಜ: ಗುಂಪು;

ಪದವಿಂಗಡಣೆ:
ಒದರಿದರೆ +ಪರ್ವತದ +ಶಿಖರದಲ್
ಉದುರಿದವು +ಹೆಗ್ಗುಂಡುಗಳು +ಮುರಿದ್
ಒದೆಯೆ +ಬಿದ್ದವು +ಬೇರು +ಸಹಿತ +ಮಹಾದ್ರುಮಾಳಿಗಳು
ಗದೆಯ +ಹೊಯ್ಲಿನ +ಗಂಡಶೈಲವೊ
ಕದಳಿಗಳೊ +ತಾವರಿಯೆ+ಉಬ್ಬಿದ
ಮದಮುಖನ +ಪರಿಮಸಕ +ಮುರಿದುದು +ಗಿರಿ+ತರು+ವ್ರಜವ

ಅಚ್ಚರಿ:
(೧) ಭೀಮನ ಶಕ್ತಿಯನ್ನು ವಿವರಿಸುವ ಪರಿ – ಒದರಿದರೆ ಪರ್ವತದ ಶಿಖರದ
ಲುದುರಿದವು ಹೆಗ್ಗುಂಡುಗಳು ಮುರಿದೊದೆಯೆ ಬಿದ್ದವು ಬೇರು ಸಹಿತ ಮಹಾದ್ರುಮಾಳಿಗಳು

ನಿಮ್ಮ ಟಿಪ್ಪಣಿ ಬರೆಯಿರಿ