ಪದ್ಯ ೫: ದ್ರೌಪದಿ ಯಾರ ಬಳಿ ಬಂದು ತನ್ನ ಮನೋರಥವನ್ನು ಹೇಳಿದಳು?

ಅರಸನಲಿ ಮೇಣ್ ನಕುಲ ಸಹದೇ
ವರಲಿ ತನ್ನ ಮನೋರಥಕೆ ವಿ
ಸ್ತರಣವಾಗದು ನುಡಿವಡಿಲ್ಲರ್ಜುನ ಸಮೀಪದಲಿ
ಅರಿಭಯಂಕರ ಭೀಮನೇ ಗೋ
ಚರಿಸುವನಲಾಯೆನುತಲಾತನ
ಹೊರೆಗೆ ಬಂದಳು ನಗುತ ನುಡಿದಲು ಮಧುರ ವಚನದಲಿ (ಅರಣ್ಯ ಪರ್ವ, ೧೧ ಸಂಧಿ, ೫ ಪದ್ಯ)

ತಾತ್ಪರ್ಯ:
ದ್ರೌಪದಿಯನ್ನು ಆ ಸುಗಂಧ ಹೂವಿನ ಪರಿಮಳ ಆಕರ್ಷಿಸಿತು. ಅದನ್ನು ನೋಡಲು ಬಯಸಿದ ಆಕೆ, ಧರ್ಮಜ, ನಕುಲ ಅಥವ ಸಹದೇವರಿಂದ ನನ್ನ ಆಶೆಯು ಪೂರೈಸಲಾಗುವುದಿಲ್ಲ ಎಂದು ಅರಿತು, ಅರ್ಜುನನು ಸಮೀಪದಲ್ಲಿರದ ಕಾರಣ, ವೈರಿಗಳಲ್ಲಿ ಭಯವನ್ನುಂಟುಮಾಡುವ ಭೀಮನೇ ಈ ಕಾರ್ಯಕ್ಕೆ ಸರಿಯೆಂದು ತಿಳಿದು ದ್ರೌಪದಿಯು ಆತನ ಬಳಿಗೆ ಹೋಗಿ ಮಧುರ ವಚನದಿಂದ ಹೀಗೆ ಹೇಳಿದಳು.

ಅರ್ಥ:
ಅರಸ: ರಾಜ; ಮೇಣ್: ಅಥವ; ಮನೋರಥ: ಕಾಮನೆ, ಆಸೆ; ವಿಸ್ತರಣ: ಹರಡು, ವಿಸ್ತಾರ; ನುಡಿ: ಮಾತು; ಸಮೀಪ: ಹತ್ತಿರ; ಅರಿ: ವೈರಿ; ಭಯಂಕರ: ಸಾಹಸಿ, ಗಟ್ಟಿಗ; ಗೋಚರಿಸು: ತೋರು; ಹೊರೆ: ಆಶ್ರಯ,ರಕ್ಷಣೆ; ಬಂದು: ಆಗಮಿಸು; ನಗು: ಸಂತಸ; ನುಡಿ: ಮಾತಾಡು; ಮಧುರ: ಸಿಹಿ; ವಚನ: ನುಡಿ, ಮಾತು;

ಪದವಿಂಗಡಣೆ:
ಅರಸನಲಿ +ಮೇಣ್ +ನಕುಲ +ಸಹದೇ
ವರಲಿ +ತನ್ನ +ಮನೋರಥಕೆ +ವಿ
ಸ್ತರಣವಾಗದು +ನುಡಿವಡಿಲ್ಲ್+ಅರ್ಜುನ +ಸಮೀಪದಲಿ
ಅರಿ+ಭಯಂಕರ+ ಭೀಮನೇ +ಗೋ
ಚರಿಸುವನಲಾ+ಎನುತಲ್+ಆತನ
ಹೊರೆಗೆ +ಬಂದಳು +ನಗುತ +ನುಡಿದಲು +ಮಧುರ +ವಚನದಲಿ

ಅಚ್ಚರಿ:
(೧) ಭೀಮನನ್ನು ಪರಿಚಯಿಸುವ ಪರಿ – ಅರಿಭಯಂಕರ
(೨) ಕೋರಿಕೆಯನ್ನು ತಿಳಿಸುವ ಮುನ್ನ – ಆತನ ಹೊರೆಗೆ ಬಂದಳು ನಗುತ ನುಡಿದಲು ಮಧುರ ವಚನದಲಿ

ನಿಮ್ಮ ಟಿಪ್ಪಣಿ ಬರೆಯಿರಿ