ಅಲ್ಲಿಯಖಿಳ ಋಷಿವ್ರಜವು ಭೂ
ವಲ್ಲಭವನನಾತಿಥ್ಯ ಪೂಜಾ
ಸಲ್ಲಲಿತ ಸಂಭಾವನಾ ಮಧುರೋಕ್ತಿ ರಚನೆಯಲಿ
ಅಲ್ಲಿಗಲ್ಲಿಗೆ ಸಕಲ ಮುನಿಜನ
ವೆಲ್ಲವನು ಮನ್ನಿಸಿದನಾ ವನ
ದಲ್ಲಿ ನೂಕಿದನೆಂಟು ದಿನವನು ನೃಪತಿ ಕೇಳೆಂದ (ಅರಣ್ಯ ಪರ್ವ, ೧೦ ಸಂಧಿ, ೩೮ ಪದ್ಯ)
ತಾತ್ಪರ್ಯ:
ಜನಮೇಜಯ ರಾಜ ಕೇಳು, ಬದರಿಕಾಶ್ರಮದಲ್ಲಿದ್ದ ಮುನಿಗಳು, ಪಾಂಡವರನನ್ನು ಆದರಿಸಿ ಆತಿಥ್ಯವನ್ನು ಮಾಡಿ ಮಧುರ ಮಾತುಗಳಿಂದ ಸಂಭಾವಿಸಿದರು. ಧರ್ಮಜನು ಸಕಲ ಮುನಿಜರನ್ನು ಮನ್ನಿಸಿ ಎಂಟು ದಿನಗಳ ಕಾಲ ಅಲ್ಲಿದ್ದನು.
ಅರ್ಥ:
ಅಖಿಳ: ಎಲ್ಲಾ; ಋಷಿ: ಮುನಿ; ವ್ರಜ: ಗುಂಪು; ಭೂವಲ್ಲಭ: ರಾಜ; ಆತಿಥ್ಯ: ಅತಿಥಿಸತ್ಕಾರ; ಪೂಜೆ: ಆರಾಧನೆ; ಸಲ್ಲಲಿತ: ಅಂದ, ಚೆಲುವು; ಸಂಭಾವನೆ: ಮನ್ನಣೆ; ಮಧುರ: ಸಿಹಿ; ಉಕ್ತಿ: ಮಾತು; ರಚನೆ: ಸೃಷ್ಟಿ; ಸಕಲ: ಎಲ್ಲಾ; ಮುನಿ: ಋಷಿ; ಮನ್ನಿಸು: ಗೌರವಿಸು; ವನ: ಕಾಡು; ನೂಕು: ತಳ್ಳು; ದಿನ: ದಿವಸ; ನೃಪತಿ: ರಾಜ; ಕೇಳು: ಆಲಿಸು;
ಪದವಿಂಗಡಣೆ:
ಅಲ್ಲಿ+ಅಖಿಳ +ಋಷಿ+ವ್ರಜವು +ಭೂ
ವಲ್ಲಭವನನ್+ಆತಿಥ್ಯ+ ಪೂಜಾ
ಸಲ್ಲಲಿತ +ಸಂಭಾವನಾ +ಮಧುರೋಕ್ತಿ +ರಚನೆಯಲಿ
ಅಲ್ಲಿಗಲ್ಲಿಗೆ +ಸಕಲ +ಮುನಿಜನ
ವೆಲ್ಲವನು+ ಮನ್ನಿಸಿದನಾ+ ವನ
ದಲ್ಲಿ +ನೂಕಿದನ್+ಎಂಟು +ದಿನವನು +ನೃಪತಿ+ ಕೇಳೆಂದ
ಅಚ್ಚರಿ:
(೧) ಋಷಿವ್ರಜ, ಮುನಿಜನ; ಅಖಿಳ, ಸಕಲ; ಭೂವಲ್ಲಭ, ನೃಪತಿ – ಸಮನಾರ್ಥಕ ಪದ