ಪದ್ಯ ೩೮: ಬದರಿಕಾಶ್ರಮದಲ್ಲಿ ಎಷ್ಟು ದಿನ ಕಳೆದನು?

ಅಲ್ಲಿಯಖಿಳ ಋಷಿವ್ರಜವು ಭೂ
ವಲ್ಲಭವನನಾತಿಥ್ಯ ಪೂಜಾ
ಸಲ್ಲಲಿತ ಸಂಭಾವನಾ ಮಧುರೋಕ್ತಿ ರಚನೆಯಲಿ
ಅಲ್ಲಿಗಲ್ಲಿಗೆ ಸಕಲ ಮುನಿಜನ
ವೆಲ್ಲವನು ಮನ್ನಿಸಿದನಾ ವನ
ದಲ್ಲಿ ನೂಕಿದನೆಂಟು ದಿನವನು ನೃಪತಿ ಕೇಳೆಂದ (ಅರಣ್ಯ ಪರ್ವ, ೧೦ ಸಂಧಿ, ೩೮ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಬದರಿಕಾಶ್ರಮದಲ್ಲಿದ್ದ ಮುನಿಗಳು, ಪಾಂಡವರನನ್ನು ಆದರಿಸಿ ಆತಿಥ್ಯವನ್ನು ಮಾಡಿ ಮಧುರ ಮಾತುಗಳಿಂದ ಸಂಭಾವಿಸಿದರು. ಧರ್ಮಜನು ಸಕಲ ಮುನಿಜರನ್ನು ಮನ್ನಿಸಿ ಎಂಟು ದಿನಗಳ ಕಾಲ ಅಲ್ಲಿದ್ದನು.

ಅರ್ಥ:
ಅಖಿಳ: ಎಲ್ಲಾ; ಋಷಿ: ಮುನಿ; ವ್ರಜ: ಗುಂಪು; ಭೂವಲ್ಲಭ: ರಾಜ; ಆತಿಥ್ಯ: ಅತಿಥಿಸತ್ಕಾರ; ಪೂಜೆ: ಆರಾಧನೆ; ಸಲ್ಲಲಿತ: ಅಂದ, ಚೆಲುವು; ಸಂಭಾವನೆ: ಮನ್ನಣೆ; ಮಧುರ: ಸಿಹಿ; ಉಕ್ತಿ: ಮಾತು; ರಚನೆ: ಸೃಷ್ಟಿ; ಸಕಲ: ಎಲ್ಲಾ; ಮುನಿ: ಋಷಿ; ಮನ್ನಿಸು: ಗೌರವಿಸು; ವನ: ಕಾಡು; ನೂಕು: ತಳ್ಳು; ದಿನ: ದಿವಸ; ನೃಪತಿ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅಲ್ಲಿ+ಅಖಿಳ +ಋಷಿ+ವ್ರಜವು +ಭೂ
ವಲ್ಲಭವನನ್+ಆತಿಥ್ಯ+ ಪೂಜಾ
ಸಲ್ಲಲಿತ +ಸಂಭಾವನಾ +ಮಧುರೋಕ್ತಿ +ರಚನೆಯಲಿ
ಅಲ್ಲಿಗಲ್ಲಿಗೆ +ಸಕಲ +ಮುನಿಜನ
ವೆಲ್ಲವನು+ ಮನ್ನಿಸಿದನಾ+ ವನ
ದಲ್ಲಿ +ನೂಕಿದನ್+ಎಂಟು +ದಿನವನು +ನೃಪತಿ+ ಕೇಳೆಂದ

ಅಚ್ಚರಿ:
(೧) ಋಷಿವ್ರಜ, ಮುನಿಜನ; ಅಖಿಳ, ಸಕಲ; ಭೂವಲ್ಲಭ, ನೃಪತಿ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ