ಅಸುರ ದೇಹ ಸ್ಪರ್ಶವಸಮಂ
ಜಸವಲಾ ತನಗೆನುತ ಮುನಿರೋ
ಮಶನು ಗಗನೇಚರರ ಗತಿಯಲಿ ಬಂದನಿವರೊಡನೆ
ವಿಷಮಗಿರಿ ಕಾನನ ಕದಧ್ವ
ಪ್ರಸರವನು ಹಿಂದಿಕ್ಕಿ ಹೊದ್ದಿದ
ರೆಸೆವ ನರನಾರಾಯಣಾಶ್ರಮ ವರತಪೋವನವ (ಅರಣ್ಯ ಪರ್ವ, ೧೦ ಸಂಧಿ, ೩೭ ಪದ್ಯ)
ತಾತ್ಪರ್ಯ:
ರಾಕ್ಷಸನ ದೇಹವನ್ನು ಮುಟ್ಟುವುದು ಉಚಿತವಲ್ಲವೆಂದು ರೋಮಶ ಮುನಿಗಳು ಆಕಾಶಮಾರ್ಗದಲ್ಲಿ ಅವರೊಡನೆ ಹೋದರು. ಪರ್ವತ ವನಗಳ ದುರ್ಗಮ ಮಾರ್ಗವನ್ನು ದಾಟಿ ಅವರು ನರನಾರಾಯಣಾಶ್ರಮಕ್ಕೆ (ಬದರೀಕಾಶ್ರಮ) ಬಂದರು.
ಅರ್ಥ:
ಅಸುರ: ರಾಕ್ಷಸ; ದೇಹ: ತನು, ಶರೀರ; ಸ್ಪರ್ಶ: ಮುಟ್ಟು; ಅಸಮಂಜಸ: ಅನುಚಿತವಾದುದು; ಮುನಿ: ಋಷಿ; ಗಗನ: ಆಕಾಶ; ಗತಿ: ವೇಗ; ಬಂದನು: ಆಗಮಿಸು; ವಿಷಮ: ಕಷ್ಟಕರವಾದುದು; ಗಿರಿ: ಬೆಟ್ಟ; ಕಾನನ: ಕಾಡು; ಕದಧ್ವ: ಕೆಟ್ಟ ದಾರಿ; ಪ್ರಸರ: ಹರಡುವುದು; ಹಿಂದಿಕ್ಕು: ದಾಟು; ಹೊದ್ದು: ಹೊಂದು, ಸೇರು; ಎಸೆ: ತೋರು; ಆಶ್ರಮ: ಕುಟೀರ; ವರ: ಶ್ರೇಷ್ಠ; ತಪೋವನ: ತಪಸ್ಸು ಮಾಡುವ ಪ್ರದೇಶ; ಗಗನಚರ: ಗಂಧರ್ವ, ಆಕಾಶದಲ್ಲಿ ಚಲಿಸುವ;
ಪದವಿಂಗಡಣೆ:
ಅಸುರ +ದೇಹ +ಸ್ಪರ್ಶವ್+ಅಸಮಂ
ಜಸವಲಾ +ತನಗೆನುತ +ಮುನಿ+ರೋ
ಮಶನು +ಗಗನೇಚರರ+ ಗತಿಯಲಿ +ಬಂದನ್+ಇವರೊಡನೆ
ವಿಷಮಗಿರಿ +ಕಾನನ+ ಕದಧ್ವ
ಪ್ರಸರವನು +ಹಿಂದಿಕ್ಕಿ +ಹೊದ್ದಿದರ್
ಎಸೆವ +ನರನಾರಾಯಣಾಶ್ರಮ +ವರತಪೋವನವ
ಅಚ್ಚರಿ:
(೧) ಮುನಿಗಳು ತಲುಪಿದ ಪರಿ – ಮುನಿರೋಮಶನು ಗಗನೇಚರರ ಗತಿಯಲಿ ಬಂದನಿವರೊಡನೆ