ಪದ್ಯ ೩೨: ಧರ್ಮಜನು ಯಾರನ್ನು ನೆನೆದನು?

ಆಯತಾಕ್ಷಿಯ ನುಡಿಗೆ ಪಾಂಡವ
ರಾಯ ಮೆಚ್ಚಿದನಿನ್ನು ಗಮನೋ
ಪಾಯವೆಂತೆಂದೆನುತ ನೆನೆದನು ಕಲಿ ಘಟೋತ್ಕಚನ
ರಾಯ ಕೇಳೈ ಕಮಲನಾಭನ
ಮಾಯೆಯೋ ತಾನರಿಯೆನಾಕ್ಷಣ
ವಾಯುವೇಗದಲಭ್ರದಿಂದಿಳಿತಂದನಮರಾರಿ (ಅರಣ್ಯ ಪರ್ವ, ೧೦ ಸಂಧಿ, ೩೨ ಪದ್ಯ)

ತಾತ್ಪರ್ಯ:
ದ್ರೌಪದಿಯ ಮಾತಿಗೆ ರಾಜನು ಮೆಚ್ಚಿ, ಮುಂದಿನ ಚಾರಣದ ಉಪಾಯವೇನು ಎಂದು ಯೋಚಿಸುತ್ತಾ, ಘಟೋತ್ಕಚನನ್ನು ನೆನೆದನು. ಜನಮೇಜಯ ರಾಜ ಕೇಳು, ವಿಷ್ಣು ಮಾಯೆಯೋ ಏನೋ ತಿಳಿಯದು ನೆನೆದೊಡನೆ ಘಟೋತ್ಕಚನು ವಾಯುವೇಗದಿಂದ ಬಂದು ಆಕಾಶದಿಂದಿಳಿದನು.

ಅರ್ಥ:
ಆಯತಾಕ್ಷಿ: ಅಗಲವಾದ ಕಣ್ಣುಳ್ಳವಳು (ಸುಂದರಿ); ನುಡಿ: ಮಾತು; ರಾಯ: ರಾಜ; ಮೆಚ್ಚು: ಪ್ರಶಂಶಿಸು; ಗಮನ: ನಡೆಯುವುದು, ನಡಗೆ; ಉಪಾಯ: ಯುಕ್ತಿ; ನೆನೆ: ಜ್ಞಾಪಿಸಿಕೊಳ್ಳು; ಕಲಿ: ಶೂರ; ರಾಯ: ರಾಜ; ಕೇಳು: ಆಲಿಸು; ಕಮಲನಾಭ: ವಿಷ್ಣು; ಮಾಯೆ: ಇಂದ್ರಜಾಲ; ಅರಿ: ತಿಳಿ; ಆಕ್ಷಣ: ಕೂಡಲೆ; ವಾಯು: ಗಾಳಿ; ವೇಗ: ರಭಸ; ಅಭ್ರ: ಆಗಸ; ಇಳಿ: ಕೆಳೆಗೆ ಬಾ; ಅಮರಾರಿ: ದೇವತೆಗಳ ವೈರಿ;

ಪದವಿಂಗಡಣೆ:
ಆಯತಾಕ್ಷಿಯ+ ನುಡಿಗೆ+ ಪಾಂಡವ
ರಾಯ +ಮೆಚ್ಚಿದನ್+ಇನ್ನು +ಗಮನೋ
ಪಾಯವೆಂತೆಂದ್+ಎನುತ+ ನೆನೆದನು +ಕಲಿ +ಘಟೋತ್ಕಚನ
ರಾಯ +ಕೇಳೈ +ಕಮಲನಾಭನ
ಮಾಯೆಯೋ +ತಾನರಿಯೆನ್+ಆ ಕ್ಷಣ
ವಾಯುವೇಗದಲ್+ಅಭ್ರದಿಂದ್+ಇಳಿತಂದನ್+ಅಮರಾರಿ

ಅಚ್ಚರಿ:
(೧) ದ್ರೌಪದಿಯನ್ನು ಆಯತಾಕ್ಷಿ; ಘಟೋತ್ಕಚನನ್ನು ಅಮರಾರಿ ಎಂದು ಕರೆದಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ