ಪದ್ಯ ೩೦: ದ್ರೌಪದಿಯು ಧರ್ಮಜನಿಗೇನು ಹೇಳಿದಳು?

ಹರೆದುದುಬ್ಬಿದ ಮೂರ್ಛೆ ಕರಣೋ
ತ್ಕರದ ಕಳವಳವಡಗಿತರಸನ
ನರಸಿ ಸಂತೈಸಿದಳು ತಪ್ಪೇನಿದು ಪುರಾಕೃತದ
ಪರುಠವಣೆಗೇಕಳಲು ಮುಂದಣ
ಗಿರಿಯ ಗಮನೋಪಾಯವನು ಗೋ
ಚರಿಸಿರೇ ಸಾಕೆಂದಳಂಬುಜಮುಖಿ ಮಹೀಪತಿಗೆ (ಅರಣ್ಯ ಪರ್ವ, ೧೦ ಸಂಧಿ, ೩೦ ಪದ್ಯ)

ತಾತ್ಪರ್ಯ:
ದ್ರೌಪದಿಯ ಮೂರ್ಛೆ ತಿಳಿಯಿತು, ದೇಹೇಂದ್ರಿಯಗಳ ಕಳವಳವು ಅಡಗಿತು, ಆಗ ಅವಳು ಇದರಲ್ಲೇನು ತಪ್ಪು, ಇದು ಪೂರ್ವದಲ್ಲಿ ಮಾಡಿದ ಕರ್ಮಫಲದ ಪರಿಣಾಮ. ಇದಕ್ಕೆ ದುಃಖಿಸುವುದೇಕೆ? ಮುಂದಿರುವ ಬೆಟ್ಟವನ್ನು ದಾತಿ ಹೋಗಲು ಏನು ಮಾಡಬೇಕೋ ನೋಡಿರಿ ಎಂದು ಧರ್ಮರಾಜನಿಗೆ ಹೇಳಿದಳು.

ಅರ್ಥ:
ಹರೆ: ವ್ಯಾಪಿಸು, ವಿಸ್ತರಿಸು; ಉಬ್ಬು: ಹೆಚ್ಚಾಗು; ಮೂರ್ಛೆ: ಪ್ರಜ್ಞೆ ಇಲ್ಲದ ಸ್ಥಿತಿ; ಕರಣ: ಜ್ಞಾನೇಂದ್ರಿಯ; ಉತ್ಕರ: ಸಮೂಹ; ಕಳವಳ: ಗೊಂದಲ, ಭ್ರಾಂತಿ; ಅಡಗು: ಮರೆಯಾಗು; ಅರಸ: ರಾಜ; ಅರಸಿ: ರಾಣಿ; ಸಂತೈಸು: ಸಮಾಧಾನ ಪಡಿಸು; ತಪ್ಪು: ಸರಿಯಿಲ್ಲದ ಸ್ಥಿತಿ; ಪುರಾಕೃತ: ಹಿಂದ ಮಾದಿದ; ಪರುಠವ: ವಿಸ್ತಾರ, ಹರಹು; ಅಳು: ನೋವು, ರೋಧಿಸು; ಮುಂದಣ: ಮುಂದೆ ಬರುವ; ಗಿರಿ: ಬೆಟ್ಟ; ಗಮನ: ನಡೆ, ಚಲಿಸು; ಉಪಾಯ: ಮಾರ್ಗ, ಯುಕ್ತಿ; ಗೋಚರಿಸು: ಕಾಣಿಸು, ತೋರು; ಸಾಕು: ನಿಲ್ಲಿಸು, ಕೊನೆ; ಅಂಬುಜಮುಖಿ: ಕಮಲದಂತ ಮುಖವುಳ್ಳವಳು; ಮಹೀಪತಿ: ರಾಜ;

ಪದವಿಂಗಡಣೆ:
ಹರೆದುದ್+ಉಬ್ಬಿದ +ಮೂರ್ಛೆ +ಕರಣೋ
ತ್ಕರದ +ಕಳವಳವ್+ಅಡಗಿತ್+ಅರಸನನ್
ಅರಸಿ+ ಸಂತೈಸಿದಳು+ ತಪ್ಪೇನ್+ಇದು+ ಪುರಾಕೃತದ
ಪರುಠವಣೆಗೇಕ್+ಅಳಲು +ಮುಂದಣ
ಗಿರಿಯ +ಗಮನೋಪಾಯವನು+ ಗೋ
ಚರಿಸಿರೇ+ ಸಾಕೆಂದಳ್+ಅಂಬುಜಮುಖಿ +ಮಹೀಪತಿಗೆ

ಅಚ್ಚರಿ:
(೧) ಅರಸನನರಸಿ ಸಂತೈಸಿದಳು – ಅರಸ ಅರಸಿ ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ