ಪದ್ಯ ೨೯: ಧರ್ಮಜನೇಕೆ ದುಃಖಿಸಿದ?

ನೆಲೆವನೆಯ ಮಾಡದಲಿ ರತ್ನಾ
ವಳಿಯ ನುಣ್ಬೆಳಗಿನಲಿ ಹಂಸೆಯ
ತುಳಿಯ ಮೇಲ್ವಾಸಿನಲಿ ಪವಡಿಸುವೀಕೆಯಿಂದೀಗ
ಹಳುವದಲಿ ಘೋರಾಂಧಕಾರದ
ಮಳೆಯಲೊಬ್ಬಳೆ ನಡೆದು ನೆನೆದೀ
ಕಲುನೆಲದೊಳೊರಗಿದಳೆನುತ ಮರುಗಿದನು ಧರಣೀಶ (ಅರಣ್ಯ ಪರ್ವ, ೧೦ ಸಂಧಿ, ೨೯ ಪದ್ಯ)

ತಾತ್ಪರ್ಯ:
ಉಪ್ಪರಿಗೆಯ ಮೇಲುಮನೆಯಲ್ಲಿ ನವರತ್ನಗಳ ಮೆಲು ಬೆಳಕಿನಲ್ಲಿ ಹಂಸತೂಲಿಕಾ ಹಾಸಿಗೆಯಲ್ಲಿ ಮಲ್ಗುತ್ತಿದ್ದ ಇವಳು ಇಂದು ಈಗ ಕಾಡಿನ ನಡುವೆ ಭಯಂಕರವದ ಕತ್ತಲಿನಲ್ಲಿ ಮಳೆಯಲ್ಲಿ ನೆನೆದು ಕಲ್ಲು ನೆಲದಲ್ಲಿ ಬಿದ್ದು ಬಿಟ್ಟಿದ್ದಳು ಎಂದು ಧರ್ಮಜನು ದ್ರೌಪದಿಗೊದಗಿದ ದುರವಸ್ಥೆಯನ್ನು ಕಂಡು ಮರುಗಿದನು.

ಅರ್ಥ:
ನೆಲೆ: ಆಶ್ರಯ, ಆಧಾರ; ರತ್ನಾವಳಿ: ರತ್ನಗಳ ಸಾಲು; ನುಣ್ಪು: ನಯ, ಮೃದು; ಬೆಳಕು: ಕಾಂತಿ, ಪ್ರಕಾಶ; ಹಂಸ: ಮರಾಲ; ತುಳಿ: ಮೆಟ್ಟುವಿಕೆ, ತುಳಿತ; ಮೇಲ್ವಾಸು: ಹಾಸಿಗೆ; ಪವಡಿಸು: ಮಲಗು; ಹಳುವು: ಕಾಡು; ಘೋರ: ಭಯಂಕರ; ಅಂಧಕಾರ: ಕತ್ತಲು; ಮಳೆ: ವರ್ಷ; ನಡೆ: ಚಲಿಸು; ನೆನೆ: ಒದ್ದೆ; ಕಲುನೆಲ: ಕಲ್ಲುಗಳಿಂದ ಕೂಡಿದ ನೆಲ; ಒರಗು: ಮಲಗು; ಮರುಗು: ತಳಮಳ, ಸಂಕಟ; ಧರಣೀಶ: ರಾಜ; ಧರಣಿ: ಭೂಮಿ;

ಪದವಿಂಗಡಣೆ:
ನೆಲೆವನೆಯ +ಮಾಡದಲಿ +ರತ್ನಾ
ವಳಿಯ +ನುಣ್ಬೆಳಗಿನಲಿ +ಹಂಸೆಯ
ತುಳಿಯ +ಮೇಲ್ವಾಸಿನಲಿ+ ಪವಡಿಸುವೀಕೆ+ಇಂದೀಗ
ಹಳುವದಲಿ+ ಘೋರಾಂಧಕಾರದ
ಮಳೆಯಲ್+ಒಬ್ಬಳೆ +ನಡೆದು +ನೆನೆದೀ
ಕಲುನೆಲದೊಳ್+ಒರಗಿದಳೆನುತ +ಮರುಗಿದನು+ ಧರಣೀಶ

ಅಚ್ಚರಿ:
(೧) ದ್ರೌಪದಿಯು ಮಲಗುತ್ತಿದ್ದ ಸ್ಥಳದ ವಿವರ – ನೆಲೆವನೆಯ ಮಾಡದಲಿ ರತ್ನಾ
ವಳಿಯ ನುಣ್ಬೆಳಗಿನಲಿ ಹಂಸೆಯ ತುಳಿಯ ಮೇಲ್ವಾಸಿನಲಿ ಪವಡಿಸುವ್

ನಿಮ್ಮ ಟಿಪ್ಪಣಿ ಬರೆಯಿರಿ