ಪದ್ಯ ೩೨: ಧರ್ಮಜನು ಯಾರನ್ನು ನೆನೆದನು?

ಆಯತಾಕ್ಷಿಯ ನುಡಿಗೆ ಪಾಂಡವ
ರಾಯ ಮೆಚ್ಚಿದನಿನ್ನು ಗಮನೋ
ಪಾಯವೆಂತೆಂದೆನುತ ನೆನೆದನು ಕಲಿ ಘಟೋತ್ಕಚನ
ರಾಯ ಕೇಳೈ ಕಮಲನಾಭನ
ಮಾಯೆಯೋ ತಾನರಿಯೆನಾಕ್ಷಣ
ವಾಯುವೇಗದಲಭ್ರದಿಂದಿಳಿತಂದನಮರಾರಿ (ಅರಣ್ಯ ಪರ್ವ, ೧೦ ಸಂಧಿ, ೩೨ ಪದ್ಯ)

ತಾತ್ಪರ್ಯ:
ದ್ರೌಪದಿಯ ಮಾತಿಗೆ ರಾಜನು ಮೆಚ್ಚಿ, ಮುಂದಿನ ಚಾರಣದ ಉಪಾಯವೇನು ಎಂದು ಯೋಚಿಸುತ್ತಾ, ಘಟೋತ್ಕಚನನ್ನು ನೆನೆದನು. ಜನಮೇಜಯ ರಾಜ ಕೇಳು, ವಿಷ್ಣು ಮಾಯೆಯೋ ಏನೋ ತಿಳಿಯದು ನೆನೆದೊಡನೆ ಘಟೋತ್ಕಚನು ವಾಯುವೇಗದಿಂದ ಬಂದು ಆಕಾಶದಿಂದಿಳಿದನು.

ಅರ್ಥ:
ಆಯತಾಕ್ಷಿ: ಅಗಲವಾದ ಕಣ್ಣುಳ್ಳವಳು (ಸುಂದರಿ); ನುಡಿ: ಮಾತು; ರಾಯ: ರಾಜ; ಮೆಚ್ಚು: ಪ್ರಶಂಶಿಸು; ಗಮನ: ನಡೆಯುವುದು, ನಡಗೆ; ಉಪಾಯ: ಯುಕ್ತಿ; ನೆನೆ: ಜ್ಞಾಪಿಸಿಕೊಳ್ಳು; ಕಲಿ: ಶೂರ; ರಾಯ: ರಾಜ; ಕೇಳು: ಆಲಿಸು; ಕಮಲನಾಭ: ವಿಷ್ಣು; ಮಾಯೆ: ಇಂದ್ರಜಾಲ; ಅರಿ: ತಿಳಿ; ಆಕ್ಷಣ: ಕೂಡಲೆ; ವಾಯು: ಗಾಳಿ; ವೇಗ: ರಭಸ; ಅಭ್ರ: ಆಗಸ; ಇಳಿ: ಕೆಳೆಗೆ ಬಾ; ಅಮರಾರಿ: ದೇವತೆಗಳ ವೈರಿ;

ಪದವಿಂಗಡಣೆ:
ಆಯತಾಕ್ಷಿಯ+ ನುಡಿಗೆ+ ಪಾಂಡವ
ರಾಯ +ಮೆಚ್ಚಿದನ್+ಇನ್ನು +ಗಮನೋ
ಪಾಯವೆಂತೆಂದ್+ಎನುತ+ ನೆನೆದನು +ಕಲಿ +ಘಟೋತ್ಕಚನ
ರಾಯ +ಕೇಳೈ +ಕಮಲನಾಭನ
ಮಾಯೆಯೋ +ತಾನರಿಯೆನ್+ಆ ಕ್ಷಣ
ವಾಯುವೇಗದಲ್+ಅಭ್ರದಿಂದ್+ಇಳಿತಂದನ್+ಅಮರಾರಿ

ಅಚ್ಚರಿ:
(೧) ದ್ರೌಪದಿಯನ್ನು ಆಯತಾಕ್ಷಿ; ಘಟೋತ್ಕಚನನ್ನು ಅಮರಾರಿ ಎಂದು ಕರೆದಿರುವುದು

ಪದ್ಯ ೩೧: ದ್ರೌಪದಿಯು ಧರ್ಮಜನಿಗೆ ಏನೆಂದು ಹೇಳಿದಳು?

ಇದೆ ಮುನಿವ್ರಜವಗ್ನಿಹೋತ್ರಿಗ
ಳಿದೆ ಕುಟುಂಬಿಗಳಾಪ್ತಪರಿಜನ
ವಿದೆ ವರ ಸ್ತ್ರೀ ಬಾಲವೃದ್ಧ ನಿಯೋಗಿ ಜನ ಸಹಿತ
ಇದೆ ಮಹಾಕಾಮ್ತಾರವಿನಿಬರ
ಪದಕೆ ವನಮಾರ್ಗದಲಿ ಸೇರುವ
ಹದನಕಾಣೆನು ಶಿವ ಶಿವೆಂದಳು ಕಾಂತೆ ಭೂಪತಿಗೆ (ಅರಣ್ಯ ಪರ್ವ, ೧೦ ಸಂಧಿ, ೩೧ ಪದ್ಯ)

ತಾತ್ಪರ್ಯ:
ಮುನಿಗಳು, ಅಗ್ನಿಹೋತ್ರಿಗಳು, ಅವರ ಕುಟುಂಬದವರು, ನಮ್ಮ ಆಪ್ತರು, ಪರಿಜನರು, ನಿಯೋಗಿಗಳು ಇದ್ದಾರೆ. ಇವರಲ್ಲಿ ಸ್ತ್ರೀಯರು, ಬಾಲರು, ಮುದುಕರು, ಬಹಳ ಜನರಿದ್ದಾರೆ. ಇಲ್ಲಿಂದ ಮುಂದೆ ಮಹಾರಣ್ಯವಿದೆ. ಇವರೆಲ್ಲರೂ ಈ ಮಾರ್ಗದಲ್ಲಿ ನಡೆಯುವುದು ಹೇಗೆಂಬುದು ತಿಳಿಯುತ್ತಿಲ್ಲ ಎಂದು ದ್ರೌಪದಿಯು ಹೇಳಿದಳು.

ಅರ್ಥ:
ಮುನಿ: ಋಷಿ; ವ್ರಜ: ಗುಂಪು; ಅಗ್ನಿಹೋತ್ರಿ: ಅಗ್ನಿಹೋತ್ರವನ್ನು ನಡೆಸುವವನು; ಕುಟುಂಬ: ಸಂಸಾರ; ಆಪ್ತಪರಿಜನ: ಹತ್ತಿರದ ಸಂಬಂಧಿಕರು; ವರ: ಶ್ರೇಷ್ಠ; ಸ್ತ್ರೀ: ಹೆಣ್ಣು; ಬಾಲ: ಚಿಕ್ಕವರು; ವೃದ್ಧ: ವಯಸ್ಸಾದ; ನಿಯೋಗಿ: ಸೇವಕ,ಊಳಿಗದವನು; ಜನ: ಗುಂಪು, ಮನುಷ್ಯ; ಸಹಿತ: ಜೊತೆ; ಕಾಂತಾರ: ಅಡವಿ; ಮಹಾ: ದೊಡ್ಡ; ಇನಿಬರ್: ಇಷ್ಟುಜನ; ಪದ: ಪಾದ; ವನ: ಕಾಡು; ಮಾರ್ಗ: ದಾರಿ; ಸೇರು: ತಲುಪು, ಮುಟ್ಟು; ಹದನ: ಔಚಿತ್ಯ, ರೀತಿ; ಕಾಣೆನು: ತೋರದು;

ಪದವಿಂಗಡಣೆ:
ಇದೆ +ಮುನಿ+ವ್ರಜವ್+ಅಗ್ನಿಹೋತ್ರಿಗಳ್
ಇದೆ+ ಕುಟುಂಬಿಗಳ್+ಆಪ್ತಪರಿಜನವ್
ಇದೆ+ ವರ+ ಸ್ತ್ರೀ +ಬಾಲ+ವೃದ್ಧ +ನಿಯೋಗಿ +ಜನ +ಸಹಿತ
ಇದೆ+ ಮಹಾಕಾಂತಾರವ್+ಇನಿಬರ
ಪದಕೆ +ವನಮಾರ್ಗದಲಿ +ಸೇರುವ
ಹದನ+ಕಾಣೆನು +ಶಿವ +ಶಿವೆಂದಳು+ ಕಾಂತೆ +ಭೂಪತಿಗೆ

ಅಚ್ಚರಿ:
(೧) ಕಾಡಿಗೆ ಮಹಾಕಾಂತಾರ ವೆಂಬ ಪದಬಳಕೆ
(೨) ವನ, ಮಹಾಕಾಂತಾರ – ಸಮನಾರ್ಥಕ ಪದ

ಪದ್ಯ ೩೦: ದ್ರೌಪದಿಯು ಧರ್ಮಜನಿಗೇನು ಹೇಳಿದಳು?

ಹರೆದುದುಬ್ಬಿದ ಮೂರ್ಛೆ ಕರಣೋ
ತ್ಕರದ ಕಳವಳವಡಗಿತರಸನ
ನರಸಿ ಸಂತೈಸಿದಳು ತಪ್ಪೇನಿದು ಪುರಾಕೃತದ
ಪರುಠವಣೆಗೇಕಳಲು ಮುಂದಣ
ಗಿರಿಯ ಗಮನೋಪಾಯವನು ಗೋ
ಚರಿಸಿರೇ ಸಾಕೆಂದಳಂಬುಜಮುಖಿ ಮಹೀಪತಿಗೆ (ಅರಣ್ಯ ಪರ್ವ, ೧೦ ಸಂಧಿ, ೩೦ ಪದ್ಯ)

ತಾತ್ಪರ್ಯ:
ದ್ರೌಪದಿಯ ಮೂರ್ಛೆ ತಿಳಿಯಿತು, ದೇಹೇಂದ್ರಿಯಗಳ ಕಳವಳವು ಅಡಗಿತು, ಆಗ ಅವಳು ಇದರಲ್ಲೇನು ತಪ್ಪು, ಇದು ಪೂರ್ವದಲ್ಲಿ ಮಾಡಿದ ಕರ್ಮಫಲದ ಪರಿಣಾಮ. ಇದಕ್ಕೆ ದುಃಖಿಸುವುದೇಕೆ? ಮುಂದಿರುವ ಬೆಟ್ಟವನ್ನು ದಾತಿ ಹೋಗಲು ಏನು ಮಾಡಬೇಕೋ ನೋಡಿರಿ ಎಂದು ಧರ್ಮರಾಜನಿಗೆ ಹೇಳಿದಳು.

ಅರ್ಥ:
ಹರೆ: ವ್ಯಾಪಿಸು, ವಿಸ್ತರಿಸು; ಉಬ್ಬು: ಹೆಚ್ಚಾಗು; ಮೂರ್ಛೆ: ಪ್ರಜ್ಞೆ ಇಲ್ಲದ ಸ್ಥಿತಿ; ಕರಣ: ಜ್ಞಾನೇಂದ್ರಿಯ; ಉತ್ಕರ: ಸಮೂಹ; ಕಳವಳ: ಗೊಂದಲ, ಭ್ರಾಂತಿ; ಅಡಗು: ಮರೆಯಾಗು; ಅರಸ: ರಾಜ; ಅರಸಿ: ರಾಣಿ; ಸಂತೈಸು: ಸಮಾಧಾನ ಪಡಿಸು; ತಪ್ಪು: ಸರಿಯಿಲ್ಲದ ಸ್ಥಿತಿ; ಪುರಾಕೃತ: ಹಿಂದ ಮಾದಿದ; ಪರುಠವ: ವಿಸ್ತಾರ, ಹರಹು; ಅಳು: ನೋವು, ರೋಧಿಸು; ಮುಂದಣ: ಮುಂದೆ ಬರುವ; ಗಿರಿ: ಬೆಟ್ಟ; ಗಮನ: ನಡೆ, ಚಲಿಸು; ಉಪಾಯ: ಮಾರ್ಗ, ಯುಕ್ತಿ; ಗೋಚರಿಸು: ಕಾಣಿಸು, ತೋರು; ಸಾಕು: ನಿಲ್ಲಿಸು, ಕೊನೆ; ಅಂಬುಜಮುಖಿ: ಕಮಲದಂತ ಮುಖವುಳ್ಳವಳು; ಮಹೀಪತಿ: ರಾಜ;

ಪದವಿಂಗಡಣೆ:
ಹರೆದುದ್+ಉಬ್ಬಿದ +ಮೂರ್ಛೆ +ಕರಣೋ
ತ್ಕರದ +ಕಳವಳವ್+ಅಡಗಿತ್+ಅರಸನನ್
ಅರಸಿ+ ಸಂತೈಸಿದಳು+ ತಪ್ಪೇನ್+ಇದು+ ಪುರಾಕೃತದ
ಪರುಠವಣೆಗೇಕ್+ಅಳಲು +ಮುಂದಣ
ಗಿರಿಯ +ಗಮನೋಪಾಯವನು+ ಗೋ
ಚರಿಸಿರೇ+ ಸಾಕೆಂದಳ್+ಅಂಬುಜಮುಖಿ +ಮಹೀಪತಿಗೆ

ಅಚ್ಚರಿ:
(೧) ಅರಸನನರಸಿ ಸಂತೈಸಿದಳು – ಅರಸ ಅರಸಿ ಪದದ ಬಳಕೆ

ಪದ್ಯ ೨೯: ಧರ್ಮಜನೇಕೆ ದುಃಖಿಸಿದ?

ನೆಲೆವನೆಯ ಮಾಡದಲಿ ರತ್ನಾ
ವಳಿಯ ನುಣ್ಬೆಳಗಿನಲಿ ಹಂಸೆಯ
ತುಳಿಯ ಮೇಲ್ವಾಸಿನಲಿ ಪವಡಿಸುವೀಕೆಯಿಂದೀಗ
ಹಳುವದಲಿ ಘೋರಾಂಧಕಾರದ
ಮಳೆಯಲೊಬ್ಬಳೆ ನಡೆದು ನೆನೆದೀ
ಕಲುನೆಲದೊಳೊರಗಿದಳೆನುತ ಮರುಗಿದನು ಧರಣೀಶ (ಅರಣ್ಯ ಪರ್ವ, ೧೦ ಸಂಧಿ, ೨೯ ಪದ್ಯ)

ತಾತ್ಪರ್ಯ:
ಉಪ್ಪರಿಗೆಯ ಮೇಲುಮನೆಯಲ್ಲಿ ನವರತ್ನಗಳ ಮೆಲು ಬೆಳಕಿನಲ್ಲಿ ಹಂಸತೂಲಿಕಾ ಹಾಸಿಗೆಯಲ್ಲಿ ಮಲ್ಗುತ್ತಿದ್ದ ಇವಳು ಇಂದು ಈಗ ಕಾಡಿನ ನಡುವೆ ಭಯಂಕರವದ ಕತ್ತಲಿನಲ್ಲಿ ಮಳೆಯಲ್ಲಿ ನೆನೆದು ಕಲ್ಲು ನೆಲದಲ್ಲಿ ಬಿದ್ದು ಬಿಟ್ಟಿದ್ದಳು ಎಂದು ಧರ್ಮಜನು ದ್ರೌಪದಿಗೊದಗಿದ ದುರವಸ್ಥೆಯನ್ನು ಕಂಡು ಮರುಗಿದನು.

ಅರ್ಥ:
ನೆಲೆ: ಆಶ್ರಯ, ಆಧಾರ; ರತ್ನಾವಳಿ: ರತ್ನಗಳ ಸಾಲು; ನುಣ್ಪು: ನಯ, ಮೃದು; ಬೆಳಕು: ಕಾಂತಿ, ಪ್ರಕಾಶ; ಹಂಸ: ಮರಾಲ; ತುಳಿ: ಮೆಟ್ಟುವಿಕೆ, ತುಳಿತ; ಮೇಲ್ವಾಸು: ಹಾಸಿಗೆ; ಪವಡಿಸು: ಮಲಗು; ಹಳುವು: ಕಾಡು; ಘೋರ: ಭಯಂಕರ; ಅಂಧಕಾರ: ಕತ್ತಲು; ಮಳೆ: ವರ್ಷ; ನಡೆ: ಚಲಿಸು; ನೆನೆ: ಒದ್ದೆ; ಕಲುನೆಲ: ಕಲ್ಲುಗಳಿಂದ ಕೂಡಿದ ನೆಲ; ಒರಗು: ಮಲಗು; ಮರುಗು: ತಳಮಳ, ಸಂಕಟ; ಧರಣೀಶ: ರಾಜ; ಧರಣಿ: ಭೂಮಿ;

ಪದವಿಂಗಡಣೆ:
ನೆಲೆವನೆಯ +ಮಾಡದಲಿ +ರತ್ನಾ
ವಳಿಯ +ನುಣ್ಬೆಳಗಿನಲಿ +ಹಂಸೆಯ
ತುಳಿಯ +ಮೇಲ್ವಾಸಿನಲಿ+ ಪವಡಿಸುವೀಕೆ+ಇಂದೀಗ
ಹಳುವದಲಿ+ ಘೋರಾಂಧಕಾರದ
ಮಳೆಯಲ್+ಒಬ್ಬಳೆ +ನಡೆದು +ನೆನೆದೀ
ಕಲುನೆಲದೊಳ್+ಒರಗಿದಳೆನುತ +ಮರುಗಿದನು+ ಧರಣೀಶ

ಅಚ್ಚರಿ:
(೧) ದ್ರೌಪದಿಯು ಮಲಗುತ್ತಿದ್ದ ಸ್ಥಳದ ವಿವರ – ನೆಲೆವನೆಯ ಮಾಡದಲಿ ರತ್ನಾ
ವಳಿಯ ನುಣ್ಬೆಳಗಿನಲಿ ಹಂಸೆಯ ತುಳಿಯ ಮೇಲ್ವಾಸಿನಲಿ ಪವಡಿಸುವ್

ಪದ್ಯ ೨೮: ಧರ್ಮಜನು ದ್ರೌಪದಿಯನ್ನು ಹೇಗೆ ಉಪಚರಿಸಿದನು?

ಉಪಚರಿಸಿ ರಕ್ಷೋಘ್ನಸೂಕ್ತದ
ಜಪವ ಮಾಡಿಸಿ ವಚನ ಮಾತ್ರದ
ರಪಣದಲಿ ರಚಿಸಿದನು ಗೋಧನ ಭೂಮಿದಾನವನು
ನೃಪತಿ ಕೇಳೊಂದೆರಡು ಗಳಿಗೆಯೊ
ಳುಪಹರಿಸಿದುದು ಮೂರ್ಛೆ ಸತ್ಯ
ವ್ಯಪಗತೈಶ್ವರ್ಯರನು ಕಂಡಳು ಕಾಂತೆ ಕಂದೆರೆದು (ಅರಣ್ಯ ಪರ್ವ, ೧೦ ಸಂಧಿ, ೨೮ ಪದ್ಯ)

ತಾತ್ಪರ್ಯ:
ಧರ್ಮರಾಯನು ದ್ರೌಪದಿಗೆ ಉಪಚಾರ ಮಾಡಿ, ಧೌಮ್ಯರಿಂದ ರಕ್ಷೋಘ್ನ ಸೂಕ್ತದ ಜಪವನ್ನು ಮಾಡಿಸಿ, ದ್ರೌಪದಿಯ ಸುಕ್ಷೇಮಕ್ಕಾಗಿ ಗೋದಾನ, ಭೂದಾನಗಳನ್ನು ಸಂಕಲ್ಪಿಸಿದನು. ಒಂದೆರಡು ಗಳಿಗೆಗಳಲ್ಲಿ ದ್ರೌಪದಿಯು ಆಕೆಯ ಪ್ರಜ್ಞಾಹೀನ ಸ್ಥಿತಿಯಿಂದ ಹೊರಬಂದಳು, ಜನಮೇಜಯ ಕೇಳು, ಸತ್ಯ ಪರಿಪಾಲನೆಗಾಗಿ ಐಶ್ವರ್ಯವನ್ನು ಕಳೆದುಕೊಂಡ ಪಾಂಡವರರನ್ನು ದ್ರೌಪದಿಯು ಕಣ್ತೆರೆದು ನೋಡಿದಳು.

ಅರ್ಥ:
ಉಪಚರಿಸು: ಆರೈಕೆ ಮಾಡು; ಸೂಕ್ತ: ವೇದದಲ್ಲಿಯ ಸ್ತೋತ್ರ ಭಾಗ; ಜಪ: ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು; ವಚನ: ಮಾತು, ನುಡಿ; ರಪಣ: ಐಶ್ವರ್ಯ; ರಚಿಸು: ನಿರ್ಮಿಸು; ಧನ: ಐಶ್ವರ್ಯ; ಗೋ: ಗೋವು; ಭೂಮಿ: ಇಳೆ; ದಾನ: ಚತುರೋಪಾಯಗಳಲ್ಲಿ ಒಂದು; ನೃಪತಿ: ರಾಜ; ಕೇಳು: ಆಲಿಸು; ಗಳಿಗೆ: ಸಮಯ; ಉಪಹರಿಸು: ನಿವಾರಿಸು; ಮೂರ್ಛೆ: ಜ್ಞಾನತಪ್ಪಿದ ಸ್ಥಿತಿ; ಸತ್ಯ: ದಿಟ; ವ್ಯಪಗತೈಶ್ವರ್ಯ: ನಾಶವಾದ ಐಶ್ವರ್ಯ; ಕಂಡು: ನೋಡು; ಕಾಂತೆ: ಚೆಲುವೆ; ಕಂದೆರೆ: ಕಣ್ಣನ್ನು ಬಿಟ್ಟು, ಅಗಲಿಸು;

ಪದವಿಂಗಡಣೆ:
ಉಪಚರಿಸಿ +ರಕ್ಷೋಘ್ನ+ಸೂಕ್ತದ
ಜಪವ +ಮಾಡಿಸಿ +ವಚನ +ಮಾತ್ರದ
ರಪಣದಲಿ +ರಚಿಸಿದನು +ಗೋಧನ +ಭೂಮಿ+ದಾನವನು
ನೃಪತಿ + ಕೇಳ್+ ಒಂದೆರಡು +ಗಳಿಗೆಯೊಳ್
ಉಪಹರಿಸಿದುದು +ಮೂರ್ಛೆ +ಸತ್ಯ
ವ್ಯಪಗತ್+ಐಶ್ವರ್ಯರನು+ ಕಂಡಳು +ಕಾಂತೆ +ಕಂದೆರೆದು

ಅಚ್ಚರಿ:
(೧) ದ್ರೌಪದಿಯು ಯಾರನ್ನು ನೋಡಿದಳೆಂದು ಹೇಳುವ ಪರಿ – ಸತ್ಯ
ವ್ಯಪಗತೈಶ್ವರ್ಯರನು ಕಂಡಳು ಕಾಂತೆ ಕಂದೆರೆದು