ಪದ್ಯ ೨೭: ಧರ್ಮಜನು ದ್ರೌಪದಿಯನ್ನು ಹೇಗೆ ರಕ್ಷಿಸಿದನು?

ಬರುತ ಕಂಡರು ಬಟ್ಟೆಯಲಿ ನಿ
ರ್ಭರದ ಮೂರ್ಛಾ ಮೋಹಿತಾಂತಃ
ಕರಣೆಯನು ಹಾಯೆನುತ ಬಿದ್ದರು ಪವನಜಾದಿಗಳು
ಧರಣಿಪತಿ ತೆಗೆದೀಕೆಯನು ಕು
ಳ್ಳಿರಿಸಿ ತನ್ನಯ ತೊಡೆಯ ಮೇಲಾ
ದರಿಸಿ ಮಂತ್ರಿಸಿ ನೀರ ತಳಿದನು ರಕ್ಷೆಗಳ ರಚಿಸಿ (ಅರಣ್ಯ ಪರ್ವ, ೧೦ ಸಂಧಿ, ೨೭ ಪದ್ಯ)

ತಾತ್ಪರ್ಯ:
ದಾರಿಯಲ್ಲಿ ಮೂರ್ಛೆಯಿಂದ ಒರಗಿ ಬಿದ್ದಿದ್ದ ದ್ರೌಪದಿಯನ್ನು ಕಂಡು ಭೀಮಾದಿಗಳು ಹಾಯೆಂದು ಬಿದ್ದು ಬಿಟ್ಟರು. ಧರ್ಮಜನು ತನ್ನ ತೊಡೆಯ ಮೇಲೆ ದ್ರೌಪದಿಯನ್ನು ಕುಳ್ಳಿರಿಸಿಕೊಂಡು ಮಂತ್ರಿಸಿದ ನೀರನ್ನು ಪ್ರೋಕ್ಷಿಸಿ ರಕ್ಷೆಯನ್ನು ರಚಿಸಿದನು.

ಅರ್ಥ:
ಬರುತ: ತೆರಳುವಾಗ; ಕಂಡು: ನೋಡು; ಬಟ್ಟೆ: ವಸ್ತ್ರ; ನಿರ್ಭರ: ಬಹಳ, ಅತಿಶಯ; ಮೂರ್ಛೆ: ಜ್ಞಾನವಿಲ್ಲದ ಸ್ಥಿತಿ; ಮೊಹ: ಎಚ್ಚರ ತಪ್ಪುವಿಕೆ; ಅಂತಃಕರಣ: ಚಿತ್ತವೃತ್ತಿ; ಬಿದ್ದು: ಕೆಳಗೆ ಬೀಳು; ಪವನಜ: ಭೀಮ; ಆದಿ: ಮುಂತಾದವರು; ಧರಣಿಪತಿ: ರಾಜ; ತೆಗೆ: ಹೊರತರು; ಕುಳ್ಳಿರಿಸು: ಆಸೀನ; ತೊಡೆ: ಊರು; ಆದರ: ಪ್ರೀತಿ; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ನೀರು: ಜಲ; ತಳಿ: ಚಿಮುಕಿಸು, ಸಿಂಪಡಿಸು; ರಕ್ಷೆ: ಕಾಪು, ರಕ್ಷಣೆ; ರಚಿಸು: ನಿರ್ಮಿಸು;

ಪದವಿಂಗಡಣೆ:
ಬರುತ +ಕಂಡರು +ಬಟ್ಟೆಯಲಿ +ನಿ
ರ್ಭರದ +ಮೂರ್ಛಾ +ಮೋಹಿತ+ಅಂತಃ
ಕರಣೆಯನು+ ಹಾಯೆನುತ +ಬಿದ್ದರು +ಪವನಜ+ಆದಿಗಳು
ಧರಣಿಪತಿ +ತೆಗೆದ್+ಈಕೆಯನು +ಕು
ಳ್ಳಿರಿಸಿ+ ತನ್ನಯ +ತೊಡೆಯ +ಮೇಲ್
ಆದರಿಸಿ+ ಮಂತ್ರಿಸಿ +ನೀರ +ತಳಿದನು +ರಕ್ಷೆಗಳ +ರಚಿಸಿ

ಅಚ್ಚರಿ:
(೧) ಪಾಂಡವರ ದುಗುಡವನ್ನು ಚಿತ್ರಿಸುವ ಪರಿ – ಬರುತ ಕಂಡರು ಬಟ್ಟೆಯಲಿ ನಿ
ರ್ಭರದ ಮೂರ್ಛಾ ಮೋಹಿತಾಂತಃಕರಣೆಯನು ಹಾಯೆನುತ ಬಿದ್ದರು ಪವನಜಾದಿಗಳು

ನಿಮ್ಮ ಟಿಪ್ಪಣಿ ಬರೆಯಿರಿ