ಪದ್ಯ ೨೬: ದ್ರೌಪದಿಯು ಎಲ್ಲಿ ಮೂರ್ಛೆ ಹೋದಳು?

ಗಾಳಿಗೆರಗಿದ ಕದಳಿಯಂತಿರೆ
ಲೋಲಲೋಚನೆ ಥಟ್ಟುಗೆಡೆದಳು
ಮೇಲುಸಿರ ಬಲು ಮೂರ್ಛೆಯಲಿ ಮುದ್ರಿಸಿದ ಚೇತನದ
ಬಾಲೆಯಿರೆ ಬೆಳಗಾಯ್ತು ತೆಗೆದುದು
ಗಾಳಿ ಬಿರುವಳೆ ಭೀಮನಕುಲ ನೃ
ಪಾಲರರಸಿದರೀಕೆಯನು ಕಂಡವರ ಬೆಸಗೊಳುತ (ಅರಣ್ಯ ಪರ್ವ, ೧೦ ಸಂಧಿ, ೨೬ ಪದ್ಯ)

ತಾತ್ಪರ್ಯ:
ಗಾಳಿಗೆ ಮುರಿದು ಬಿದ್ದ ಬಾಳೆಯಗಿಡದಂತೆ ದ್ರೌಪದಿಯು ನೆಲಕ್ಕೊರಗಿದಳು, ಮೇಲುಸಿರು ಬಿಡುತ್ತಾ ಮೂರ್ಛೆ ಹೋದಳು. ರಾತ್ರಿಯೆಲ್ಲಾ ಅವಳು ಹಾಗೆಯೇ ಇದ್ದಳು. ಬೆಳಗಾದ ಮೇಲೆ ಭೀಮ ನಕುಲ ಧರ್ಮಜರು ಆಕೆಯನ್ನು ಹುಡುಕಿದರು.

ಅರ್ಥ:
ಗಾಳಿ: ವಾಯು; ಎರಗು: ಬಾಗು; ಕದಳಿ: ಬಾಳೆ; ಲೋಲ: ಅತ್ತಿತ್ತ ಅಲುಗಾಡುವ; ಲೋಚನ: ಕಣ್ಣು; ಥಟ್ಟು: ಪಕ್ಕ, ಕಡೆ; ಕೆಡೆ: ಬೀಳು, ಕುಸಿ; ಮೇಲುಸಿರು: ಏದುಸಿರು, ಜೋರಾದ ಉಸಿರಾಟ; ಬಲು: ಬಹಳ; ಮೂರ್ಛೆ: ಜ್ಞಾನವಿಲ್ಲದ ಸ್ಥಿತಿ; ಮುದ್ರಿಸು: ಗುರುತುಮಾಡು; ಚೇತನ: ಚೈತನ್ಯ, ಪ್ರಜ್ಞೆ; ಬಾಲೆ: ಹುಡುಗಿ; ಬೆಳಗು: ಮುಂಜಾವ; ತೆಗೆ: ಹೊರತರು; ಗಾಳಿ: ವಾಯು; ಬಿರುವಳೆ: ಬಿರುಸಾದ ಮಳೆ; ಅರಸು:ಹುಡುಕು; ಕಂಡು: ನೋಡು; ಬೆಸ: ಕೆಲಸ;

ಪದವಿಂಗಡಣೆ:
ಗಾಳಿಗ್+ಎರಗಿದ +ಕದಳಿ+ಯಂತಿರೆ
ಲೋಲಲೋಚನೆ +ಥಟ್ಟು+ಕೆಡೆದಳು
ಮೇಲ್+ಉಸಿರ+ ಬಲು+ ಮೂರ್ಛೆಯಲಿ+ ಮುದ್ರಿಸಿದ+ ಚೇತನದ
ಬಾಲೆಯಿರೆ +ಬೆಳಗಾಯ್ತು +ತೆಗೆದುದು
ಗಾಳಿ +ಬಿರುವಳೆ+ ಭೀಮ+ನಕುಲ+ ನೃ
ಪಾಲರ್+ಅರಸಿದರ್+ಈಕೆಯನು +ಕಂಡವರ +ಬೆಸಗೊಳುತ

ಅಚ್ಚರಿ:
(೧) ಮೂರ್ಛಿತಳಾದಳು ಎಂದು ಹೇಳಲು – ಮೇಲುಸಿರ ಬಲು ಮೂರ್ಛೆಯಲಿ ಮುದ್ರಿಸಿದ ಚೇತನದ
(೨) ಉಪಮಾನದ ಪ್ರಯೋಗ – ಗಾಳಿಗೆರಗಿದ ಕದಳಿಯಂತಿರೆ ಲೋಲಲೋಚನೆ ಥಟ್ಟುಗೆಡೆದಳು

ನಿಮ್ಮ ಟಿಪ್ಪಣಿ ಬರೆಯಿರಿ