ಪದ್ಯ ೨೫: ದ್ರೌಪದಿಯು ಕಾಡಿನಲ್ಲಿ ಹೇಗೆ ನಡೆದು ಬರುತ್ತಿದ್ದಳು?

ಎಡಹು ಬೆರಳಿನ ಕಾಲ ಮುಳುಗಳ
ಕಡುವಳೆಯ ಘಾಟಳಿಪ ಗಾಳಿಯ
ಸಿಡಿಲು ಮಿಂಚಿನ ಘಲ್ಲಣೆಯ ಘೋರಾಂಧಕಾರದಲಿ
ಒಡನೆ ಮಾನಿಸರಿಲ್ಲ ಕರೆದಡೆ
ನುಡಿವರಿಲ್ಲ ಕರದ್ವಯದಿ ತಡ
ವಿಡುತ ಪೈಸರದೊಳಗೆ ಸೂಸಿತು ಮೈ ಮಹಾಸತಿಯ (ಅರಣ್ಯ ಪರ್ವ, ೧೦ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕಾಲ್ಬೆರಳುಗಳು ಎಡವಿ ನೊಮ್ದವು. ಅಂಗಾಲಿಗೆ ಮುಳ್ಳುಗಳು ನೆಟ್ಟವು. ಬಿರುಗಾಳಿಯೇ ಬಿರುಮಳೆಯನ್ನು ತಂದು ಮುಖಕ್ಕೆ ಅಪ್ಪಳಿಸುತ್ತಿತ್ತು. ಸಿಡಿಲು ಮಿಂಚುಗಳು ಘೋರವಾದ ಕತ್ತಲಿನಲ್ಲಿ ಬೆದರಿಸುತ್ತಿದ್ದವು. ದ್ರೌಪದಿಯ ಜೊತೆಗೆ ಯಾರೂ ಇರಲಿಲ್ಲ, ಕೂಗಿದರೆ ಉತ್ತರಿಸುವವರಿಲ್ಲ, ಕೈಗಳನ್ನೆತ್ತಿ ದೇಹವನ್ನು ಸಂಬಾಳಿಸುತ್ತಾ ಬರುದ್ದವಳು ಜಾರಿದಳು.

ಅರ್ಥ:
ಎಡಹು: ಎಡವು; ಬೆರಳು: ಅಂಗುಲಿ; ಕಾಲು: ಪಾದ; ಮುಳು: ಮುಳ್ಳು; ಕಡುವಳೆ: ಜೋರಾದ ಮಳೆ; ಅಳಿಪು: ಹಾಳು ಮಾಡು; ಗಾಳಿ: ವಾಯು; ಸಿಡಿಲು: ಚಿಮ್ಮು, ಸಿಡಿ; ಮಿಂಚು: ಹೊಳಪು, ಕಾಂತಿ; ಘಲ್ಲಣೆ: ಘಲ್ ಎನ್ನುವ ಶಬ್ದ; ಘೋರ: ಉಗ್ರ, ಭಯಂಕರ; ಅಂಧಕಾರ: ಕತ್ತಲೆ; ಒಡನೆ: ಕೂಡಲೆ; ಮಾನಿಸ: ಮನುಷ್ಯ; ಕರೆ: ಕೂಗು; ನುಡಿ: ಮಾತಾಡು; ಕರ: ಹಸ್ತ; ಧ್ವಯ: ಎರಡು; ತಡವು: ನೇವರಿಸು, ವಿಳಂಬ; ಪೈಸರ: ಇಳಿಜಾರಾದ ಪ್ರದೇಶ; ಸೂಸು: ಎಸೆ, ಬಿಸುಡು; ಮೈ: ತನು; ಮಹಾಸತಿ: ಶ್ರೇಷ್ಠವಾದ ಗರತಿ (ದ್ರೌಪದಿ);

ಪದವಿಂಗಡಣೆ:
ಎಡಹು +ಬೆರಳಿನ +ಕಾಲ +ಮುಳುಗಳ
ಕಡುವಳೆಯ +ಘಾಟಳಿಪ +ಗಾಳಿಯ
ಸಿಡಿಲು +ಮಿಂಚಿನ +ಘಲ್ಲಣೆಯ +ಘೋರ+ಅಂಧಕಾರದಲಿ
ಒಡನೆ+ ಮಾನಿಸರಿಲ್ಲ+ ಕರೆದಡೆ
ನುಡಿವರಿಲ್ಲ+ ಕರ+ದ್ವಯದಿ +ತಡ
ವಿಡುತ +ಪೈಸರದೊಳಗೆ+ ಸೂಸಿತು +ಮೈ +ಮಹಾಸತಿಯ

ಅಚ್ಚರಿ:
(೧) ಜಾರಿಬಿದ್ದಳು ಎಂದು ಹೇಳಲು – ಪೈಸರದೊಳಗೆ ಸೂಸಿತು ಮೈ ಮಹಾಸತಿಯ

ನಿಮ್ಮ ಟಿಪ್ಪಣಿ ಬರೆಯಿರಿ