ಪದ್ಯ ೨೩: ಪಾಂಡವರ ಸಂತೋಷವು ಏಕೆ ಮುದುಡಿತು?

ಕೆದರಿತಲ್ಲಿಯದಲ್ಲಿ ಮಳೆಯಲಿ
ಹುದುಗಿತಲ್ಲಿಯದಲ್ಲಿ ಕಣಿಗಿಲು
ಕದಳಿಗಳ ಮರೆಗೊಂಡುಲ್ಲಿಯದಲ್ಲಿ ಹರಿಹರಿದು
ಬೆದರಿತಲ್ಲಿಯದಲ್ಲಿ ಕರಕರ
ದೊದರಿತಲ್ಲಿಯದಲ್ಲಿ ಬಲು ಮಳೆ
ಸದೆದುದಿವರನು ಸೇಡುಗೊಂಡುದು ಜನದ ಸುಮ್ಮಾನ (ಅರಣ್ಯ ಪರ್ವ, ೧೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ಪಾಂಡವರ ಪರಿವಾರದವರು ಅಲ್ಲಲ್ಲೇ ಬೇರೆ ಬೇರೆಯಾಗಿ ಮಳೆಯ ಹೊಡೆತವನ್ನು ತಪ್ಪಿಸಿಕೊಳ್ಳಲು ಕಣಗಿಲು ಬಾಳೆ ಮೊದಲಾದ ಯಾವ ಗಿಡಸಿಕ್ಕರೂ ಅದರ ಮರೆಯಲ್ಲಿ ನಿಂತರು. ನಿಂತವರು ಮಳೆಗಾಳಿಗಳ ಅಬ್ಬರಕ್ಕೆ ಹೆದರಿ ಒಬ್ಬರನ್ನೊಬ್ಬರು ಕೂಗಿ ಕರೆದರು. ಬಿರುಮಳೆಯು ಅವರನ್ನು ಅಪ್ಪಳಿಸಿತು, ಅವರ ಮನಸ್ಸಂತೋಷವು ಮುದುಡಿತು.

ಅರ್ಥ:
ಕೆದರು: ಹರಡು; ಮಳೆ: ವರ್ಷ; ಹುದುಗು: ಸಂಬಂಧ, ಸೇರು; ಕದಳಿ: ಬಾಳೆ; ಮರೆ: ಮೊರೆ,ಶರಣು; ಹರಿ: ಓಡು, ಧಾವಿಸು; ಬೆದರು: ಹೆದರು; ಅದರು: ನಡುಗು; ಬಲು: ಬಹಳ; ಸದೆದು: ಬಡಿ, ಕೊಲ್ಲು; ಸೇಡು: ಸೆಡೆಯುವಿಕೆ, ವೈರಿ; ಜನ: ಮನುಷ್ಯ; ಸುಮ್ಮಾನ: ಸಂತೋಷ;

ಪದವಿಂಗಡಣೆ:
ಕೆದರಿತ್+ಅಲ್ಲಿಯದಲ್ಲಿ+ ಮಳೆಯಲಿ
ಹುದುಗಿತ್+ಅಲ್ಲಿಯದಲ್ಲಿ+ ಕಣಿಗಿಲು
ಕದಳಿಗಳ +ಮರೆಗೊಂಡ್+ಉಲ್ಲಿಯದಲ್ಲಿ +ಹರಿಹರಿದು
ಬೆದರಿತ್+ಅಲ್ಲಿಯದಲ್ಲಿ +ಕರಕರದ್
ಒದರಿತ್+ಅಲ್ಲಿಯದಲ್ಲಿ +ಬಲು +ಮಳೆ
ಸದೆದುದ್+ಇವರನು+ ಸೇಡುಗೊಂಡುದು +ಜನದ +ಸುಮ್ಮಾನ

ಅಚ್ಚರಿ:
(೧) ಅಲ್ಲಿಯದಲ್ಲಿ – ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ