ಪದ್ಯ ೨೦: ಯುಧಿಷ್ಠಿರನು ಯಾವ ಅರಣ್ಯಪ್ರದೇಶಕ್ಕೆ ಬಂದನು?

ಅರಸಬಂದನು ಗಂಧಮಾದನ
ಗಿರಿಯತಪ್ಪಲಿಗಗ್ನಿಹೋತ್ರದ
ಪರಮಋಷಿಗಳು ಮಡದಿ ಸಕಲ ನಿಯೋಗಿ ಜನಸಹಿತ
ಸರಸಿನೆರೆಯವು ಸ್ನಾನಪಾನಕೆ
ತರುಲತಾವಳಿಗಳು ಯುಧಿಷ್ಠಿರ
ನರಮನೆಯ ಸೀವಟಕೆ ಸಾಲವು ನೃಪತಿ ಕೇಳೆಂದ (ಅರಣ್ಯ ಪರ್ವ, ೧೦ ಸಂಧಿ, ೨೦ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಯುಧಿಷ್ಠಿರನು ಗಂಧಮಾದನ ಗಿರಿಯ ತಪ್ಪಲಿಗೆ ಅಗ್ನಿಹೋತ್ರಿಗಳಾದ ಬ್ರಾಹ್ಮಣರು, ದ್ರೌಪದಿ ಮತ್ತು ನಿಯೋಗಿಗಳೊಡನೆ ಬಂದನು. ಅಲ್ಲಿನ ಸರೋವರಗಳು ಆ ಸಮೂಹಕ್ಕೆ ಸ್ನಾನಪಾನಗಳಿಗೆ ಸಾಕಾಗಲಿಲ್ಲ. ಅಲ್ಲಿನ ಮಗರಿಡಗಳು ಧರ್ಮರಾಯನ ಪರಿವಾರದವರಿಗೆ ಸಾಕಾಗಲಿಲ್ಲ.

ಅರ್ಥ:
ಅರಸ: ರಾಜ; ಬಂದನು: ಆಗಮಿಸು; ಗಿರಿ: ಬೆಟ್ಟ; ತಪ್ಪಲು: ಬೆಟ್ಟದ ಪಕ್ಕದ ಪ್ರದೇಶ; ಅಗ್ನಿಹೋತ್ರ: ಅಗ್ನಿಯನ್ನು ಉದ್ದೇಶಿಸಿ ಮಾಡುವ ಹೋಮ; ಪರಮ: ಶ್ರೇಷ್ಠ; ಋಷಿ: ಮುನಿ; ಮಡದಿ: ಹೆಂದತಿ; ಸಕಲ: ಎಲ್ಲಾ; ನಿಯೋಗ: ಸೇರು, ಕೆಲಸ; ಸಹಿತ: ಜೊತೆ; ಸರಸಿ: ನೀರು; ಸ್ನಾನ: ಅಭ್ಯಂಜನ; ಪಾನ: ಕುಡಿ; ತರು: ಮರ; ಲತೆ: ಬಳ್ಳಿ; ಆವಳಿ: ಸಾಲು; ಅರಮನೆ: ಆಲಯ; ಸೀವಟ: ಹಿಂಡು, ಹಣ್ಣಿನ ರಸ; ಸಾಲವು: ಕಡಿಮೆಯಾಗು; ನೃಪತಿ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅರಸ+ಬಂದನು +ಗಂಧಮಾದನ
ಗಿರಿಯ+ತಪ್ಪಲಿಗ್+ಅಗ್ನಿಹೋತ್ರದ
ಪರಮ+ಋಷಿಗಳು +ಮಡದಿ +ಸಕಲ +ನಿಯೋಗಿ +ಜನಸಹಿತ
ಸರಸಿನೆರೆಯವು +ಸ್ನಾನ+ಪಾನಕೆ
ತರು+ಲತಾವಳಿಗಳು +ಯುಧಿಷ್ಠಿರನ್
ಅರಮನೆಯ+ ಸೀವಟಕೆ +ಸಾಲವು +ನೃಪತಿ +ಕೇಳೆಂದ

ಅಚ್ಚರಿ:
(೧) ಅರಸ, ನೃಪತಿ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ