ಸೋಮಕನ ಚರಿತವ ಮರುತ್ತಮ
ಹಾಮಹಿಮಾನಾಚಾರ ಧರ್ಮ
ಸ್ತೋಮವನು ವಿರಚಿಸಿ ಯಯಾತಿಯ ಸತ್ಕಥಾಂತರವ
ಭೂಮಿಪತಿ ಕೇಳಿದನು ಶಿಬಿಯು
ದ್ದಾಮತನವನು ತನ್ನ ಮಾಂಸವ
ನಾ ಮಹೇಂದ್ರಾದಿಗಳಿಗಿತ್ತ ವಿಚಿತ್ರ ವಿಸ್ತರವ (ಅರಣ್ಯ ಪರ್ವ, ೧೦ ಸಂಧಿ, ೧೮ ಪದ್ಯ)
ತಾತ್ಪರ್ಯ:
ಸೋಮಕನ ಚರಿತ್ರೆ, ಮರುತ್ತನ ಆಚಾರ, ಧರ್ಮದ ಆಚರಣೆ, ಯಯಾತಿಯ ಸತ್ಕಥೆ, ಶಿಖಿಯು ದೇವೆಂದ್ರನಿಗೆ ಮಾಂಸವನ್ನೇ ದಾನ ಮಾಡಿದ್ದು, ಮೊದಲಾದ ಅನೇಕ ವಿಚಿತ್ರ ಕಥೆಗಳ ಪ್ರಸಂಗವನ್ನು ಲೋಮಶನು ಧರ್ಮಜನಿಗೆ ಹೇಳಿದನು.
ಅರ್ಥ:
ಚರಿತ: ಕಥೆ; ಮಹಿಮ: ಹಿರಿಮೆ ಯುಳ್ಳವನು, ಮಹಾತ್ಮ; ಆಚಾರ: ಕಟ್ಟುಪಾಡು, ಸಂಪ್ರದಾಯ; ಸ್ತೋಮ: ಗುಂಪು, ಸಮೂಹ; ವಿರಚಿಸು: ನಿರ್ಮಿಸು; ಭೂಮಿಪತಿ: ರಾಜ; ಭೂಮಿ: ಇಳೆ; ಉದ್ಧಾಮ: ಶ್ರೇಷ್ಠ; ಮಾಂಸ: ಅಡಗು; ಮಹೇಂದ್ರ: ಇಂದ್ರ; ವಿಚಿತ್ರ: ಆಶ್ಚರ್ಯಕರವಾದ; ವಿಸ್ತರ:ಹಬ್ಬುಗೆ, ವಿಸ್ತಾರ;
ಪದವಿಂಗಡಣೆ:
ಸೋಮಕನ+ ಚರಿತವ +ಮರುತ್ತ+ಮ
ಹಾಮಹಿಮನ್+ಆಚಾರ +ಧರ್ಮ
ಸ್ತೋಮವನು +ವಿರಚಿಸಿ +ಯಯಾತಿಯ +ಸತ್ಕಥಾಂತರವ
ಭೂಮಿಪತಿ +ಕೇಳಿದನು +ಶಿಬಿ
ಉದ್ದಾಮ+ತನವನು +ತನ್ನ +ಮಾಂಸವನ್
ಆ+ಮಹೇಂದ್ರಾದಿಗಳಿಗಿತ್ತ+ ವಿಚಿತ್ರ +ವಿಸ್ತರವ
ಅಚ್ಚರಿ:
(೧) ಸೋಮಕ, ಮರುತ್ತ, ಯಯಾತಿ, ಶಿಬಿ – ಕಥಾನಾಯಕರ ಹೆಸರುಗಳು