ಪದ್ಯ ೧೮: ಲೋಮಶನು ಧರ್ಮಜನಿಗೆ ಯಾವ ಕಥೆಗಳನ್ನು ಹೇಳಿದನು?

ಸೋಮಕನ ಚರಿತವ ಮರುತ್ತಮ
ಹಾಮಹಿಮಾನಾಚಾರ ಧರ್ಮ
ಸ್ತೋಮವನು ವಿರಚಿಸಿ ಯಯಾತಿಯ ಸತ್ಕಥಾಂತರವ
ಭೂಮಿಪತಿ ಕೇಳಿದನು ಶಿಬಿಯು
ದ್ದಾಮತನವನು ತನ್ನ ಮಾಂಸವ
ನಾ ಮಹೇಂದ್ರಾದಿಗಳಿಗಿತ್ತ ವಿಚಿತ್ರ ವಿಸ್ತರವ (ಅರಣ್ಯ ಪರ್ವ, ೧೦ ಸಂಧಿ, ೧೮ ಪದ್ಯ)

ತಾತ್ಪರ್ಯ:
ಸೋಮಕನ ಚರಿತ್ರೆ, ಮರುತ್ತನ ಆಚಾರ, ಧರ್ಮದ ಆಚರಣೆ, ಯಯಾತಿಯ ಸತ್ಕಥೆ, ಶಿಖಿಯು ದೇವೆಂದ್ರನಿಗೆ ಮಾಂಸವನ್ನೇ ದಾನ ಮಾಡಿದ್ದು, ಮೊದಲಾದ ಅನೇಕ ವಿಚಿತ್ರ ಕಥೆಗಳ ಪ್ರಸಂಗವನ್ನು ಲೋಮಶನು ಧರ್ಮಜನಿಗೆ ಹೇಳಿದನು.

ಅರ್ಥ:
ಚರಿತ: ಕಥೆ; ಮಹಿಮ: ಹಿರಿಮೆ ಯುಳ್ಳವನು, ಮಹಾತ್ಮ; ಆಚಾರ: ಕಟ್ಟುಪಾಡು, ಸಂಪ್ರದಾಯ; ಸ್ತೋಮ: ಗುಂಪು, ಸಮೂಹ; ವಿರಚಿಸು: ನಿರ್ಮಿಸು; ಭೂಮಿಪತಿ: ರಾಜ; ಭೂಮಿ: ಇಳೆ; ಉದ್ಧಾಮ: ಶ್ರೇಷ್ಠ; ಮಾಂಸ: ಅಡಗು; ಮಹೇಂದ್ರ: ಇಂದ್ರ; ವಿಚಿತ್ರ: ಆಶ್ಚರ್ಯಕರವಾದ; ವಿಸ್ತರ:ಹಬ್ಬುಗೆ, ವಿಸ್ತಾರ;

ಪದವಿಂಗಡಣೆ:
ಸೋಮಕನ+ ಚರಿತವ +ಮರುತ್ತ+ಮ
ಹಾಮಹಿಮನ್+ಆಚಾರ +ಧರ್ಮ
ಸ್ತೋಮವನು +ವಿರಚಿಸಿ +ಯಯಾತಿಯ +ಸತ್ಕಥಾಂತರವ
ಭೂಮಿಪತಿ +ಕೇಳಿದನು +ಶಿಬಿ
ಉದ್ದಾಮ+ತನವನು +ತನ್ನ +ಮಾಂಸವನ್
ಆ+ಮಹೇಂದ್ರಾದಿಗಳಿಗಿತ್ತ+ ವಿಚಿತ್ರ +ವಿಸ್ತರವ

ಅಚ್ಚರಿ:
(೧) ಸೋಮಕ, ಮರುತ್ತ, ಯಯಾತಿ, ಶಿಬಿ – ಕಥಾನಾಯಕರ ಹೆಸರುಗಳು

ನಿಮ್ಮ ಟಿಪ್ಪಣಿ ಬರೆಯಿರಿ