ಪದ್ಯ ೧೬: ಯುಧಿಷ್ಠಿರನು ಯಾರ ಚರಿತೆಯನ್ನು ತಿಳಿದನು?

ಬಂದನವನಿಪನಾ ಪ್ರಭಾಸದ
ವಂದನೆಗೆ ಬಳಿಕಲ್ಲಿ ಯಾದವ
ವೃಂದ ದರ್ಶನವಾಯ್ತು ಬಹುವಿಧತೀರ್ಥ ತೀರದಲಿ
ಮಿಂದನಾತಗೆ ಗಯನ ಚರಿತವ
ನಂದು ರೋಮಶ ಹೇಳಿದನು ನಲ
ವಿಂದ ಶರ್ಯಾತಿ ಚ್ಯವನ ಸಂವಾದ ಸಂಗತಿಯ (ಅರಣ್ಯ ಪರ್ವ, ೧೦ ಸಂಧಿ, ೧೬ ಪದ್ಯ)

ತಾತ್ಪರ್ಯ:
ಪ್ರಭಾಸತೀರ್ಥಕ್ಕೆ ಧರ್ಮಜನು ಬಂದಾಗ ಅಲ್ಲಿ ಯಾದವರನ್ನು ನೋಡಿದರು. ಅನೇಕ ತೀರ್ಥಗಳಲ್ಲಿ ಸ್ನಾನ ಮಾಡಿದನು. ರೋಮಶರು ಧರ್ಮಜನಿಗೆ ಗಯನ ಚರಿತ್ರೆಯನ್ನು ಚ್ಯವನ ಶರ್ಯಾತಿ ಸಂವಾದದ ವಿಷಯವನ್ನೂ ತಿಳಿಸಿದರು.

ಅರ್ಥ:
ಬಂದನು: ಆಗಮಿಸು; ಅವನಿಪ: ರಾಜ; ಅವನಿ: ಭೂಮಿ; ವಂದನೆ: ನಮಸ್ಕರಿಸು; ಬಳಿಕ: ನಂತರ; ವೃಂದ: ಗುಂಪು; ದರ್ಶನ: ನೋಟ; ಬಹು: ಬಹಳ; ವಿಧ: ರೀತಿ; ತೀರ್ಥ: ಪವಿತ್ರವಾದ ಜಲ; ತೀರ: ದಡ; ಮಿಂದು: ಮುಳುಗು; ಚರಿತ: ಕಥೆ; ನಲವು: ಸಂತೋಷ; ಸಂವಾದ: ಸಂಭಾಷಣೆ; ಸಂಗತಿ: ವಿಚಾರ;

ಪದವಿಂಗಡಣೆ:
ಬಂದನ್+ಅವನಿಪನ್+ಆ+ ಪ್ರಭಾಸದ
ವಂದನೆಗೆ +ಬಳಿಕಲ್ಲಿ+ ಯಾದವ
ವೃಂದ +ದರ್ಶನವಾಯ್ತು +ಬಹುವಿಧ+ತೀರ್ಥ +ತೀರದಲಿ
ಮಿಂದನ್+ಆತಗೆ+ ಗಯನ+ ಚರಿತವನ್
ಅಂದು +ರೋಮಶ +ಹೇಳಿದನು +ನಲ
ವಿಂದ +ಶರ್ಯಾತಿ +ಚ್ಯವನ +ಸಂವಾದ +ಸಂಗತಿಯ

ಅಚ್ಚರಿ:
(೧) ರೋಮಶ, ಶರ್ಯಾತಿ, ಚ್ಯವ, ಗಯ – ಹೆಸರುಗಳ ಪರಿಚಯ

ನಿಮ್ಮ ಟಿಪ್ಪಣಿ ಬರೆಯಿರಿ