ಕೇಳಿದನು ನೃಪ ಋಷ್ಯಶೃಂಗ ವಿ
ಶಾಲ ಕಥೆಯ ಕಳಿಂಗ ದೇಶದ
ಕೂಲವತಿಗಳ ಮಿಂದು ಗಂಗಾಜಲಧಿ ಸಂಗಮದ
ಮೇಲೆ ವೈತರಣಿಯ ವರೋತ್ತರ
ಕೂಲವನು ದಾಂಟಿದನು ನೃಪಕುಲ
ಕಾಲಯಮನಾಶ್ರಯಕೆ ಬಂದರು ರೇಣುಕಾಸುತನ (ಅರಣ್ಯ ಪರ್ವ, ೧೦ ಸಂಧಿ, ೧೪ ಪದ್ಯ)
ತಾತ್ಪರ್ಯ:
ಋಷ್ಯಶೃಂಗನ ಕಥೆಯನ್ನು ಧರ್ಮಜನು ಕೇಳಿದನು. ಬಳಿಕ ಪಾಂಡವರು ಪರಿವಾರದೊಡನೆ ಕಳಿಂಗ ದೇಶದ ನದಿಗಳಲ್ಲಿ ಸ್ನಾನ ಮಾಡಿ, ಗಂಗಾಸಾಗರ ಸಂಗಮಕ್ಕೆ ಹೋದರು, ವೈತರಣಿಯನ್ನು ದಾಟಿ ಕ್ಷತ್ರಿಯ ಕುಲಕ್ಕೆ ಕಾಲಯಮನಂತಿದ್ದ ಪರಶುರಾಮನ ಆಶ್ರಮಕ್ಕೆ ಬಂದರು.
ಅರ್ಥ:
ಕೇಳು: ಆಲಿಸು; ನೃಪ: ರಾಜ; ವಿಶಾಲ: ವಿಸ್ತಾರ; ಕಥೆ: ವೃತ್ತಾಮ್ತ; ದೇಶ: ರಾಷ್ಟ್ರ; ಕೂಲವತಿ: ನದಿ; ಮಿಂದು: ಮುಳುಗು; ಜಲ: ನೀರು; ಜಲಧಿ: ಸಾಗರ; ಸಂಗಮ: ಸಮಾಗಮ; ವರ: ಶ್ರೇಷ್ಠ; ಕೂಲ:ದಡ; ದಾಂಟು: ಪಾರುಮಾಡು, ಹಾಯ್ದುಹೋಗು; ನೃಪ: ರಾಜ; ಕುಲ; ವಂಶ; ಯಮ: ಮೃತ್ಯುದೇವತೆ; ಕಾಲ: ಸಮಯ; ಕಾಲಯಮ: ರೇಣುಕಾಸುತ: ಪರಶುರಾಮ; ಆಶ್ರಯ: ರಕ್ಷಣೆ;
ಪದವಿಂಗಡಣೆ:
ಕೇಳಿದನು +ನೃಪ +ಋಷ್ಯಶೃಂಗ+ ವಿ
ಶಾಲ +ಕಥೆಯ +ಕಳಿಂಗ +ದೇಶದ
ಕೂಲವತಿಗಳ+ ಮಿಂದು +ಗಂಗಾಜಲಧಿ +ಸಂಗಮದ
ಮೇಲೆ +ವೈತರಣಿಯ +ವರೋತ್ತರ
ಕೂಲವನು +ದಾಂಟಿದನು +ನೃಪಕುಲ
ಕಾಲಯಮನಾಶ್ರಯಕೆ +ಬಂದರು +ರೇಣುಕಾಸುತನ
ಅಚ್ಚರಿ:
(೧) ಪರಶುರಾಮರನ್ನು ಪರಿಚಯಿಸುವ ಪರಿ – ನೃಪಕುಲ ಕಾಲಯಮನಾಶ್ರಯಕೆ ಬಂದರು ರೇಣುಕಾಸುತನ