ಪದ್ಯ ೧೩: ಸಗರನ ಮಕ್ಕಳನ್ನು ಯಾರು ದಹಿಸಿದರು?

ಸಗರಸುತ ಚರಿತವನು ಕಪಿಲನ
ದೃಗುಶಿಖಿಯಲುರಿದುದನು ಬಳಿಕವ
ರಿಗೆ ಭಗೀರಥನಿಳುಹಿದಮರನದೀ ಕಥಾಂತರವ
ವಿಗಡಮುನಿ ಇಲ್ವಲನ ವಾತಾ
ಪಿಗಳ ಮರ್ದಿಸಿ ವಿಂಧ್ಯಗಿರಿ ಹ
ಬ್ಬುಗೆಯ ನಿಲಿಸಿದಗಸ್ತ್ಯ ಚರಿತವ ಮುನಿಪ ವರ್ಣಿಸಿದ (ಅರಣ್ಯ ಪರ್ವ, ೧೦ ಸಂಧಿ, ೧೩ ಪದ್ಯ)

ತಾತ್ಪರ್ಯ:
ಲೋಮಶನು ಯುಧಿಷ್ಠಿರನಿಗೆ ಸಗರ ಚರ್ಕ್ರವರ್ತಿಯ ಮಕ್ಕಳು ಕಪಿಲನ ನೋಟದುರಿಯಲ್ಲಿ ಸುಟ್ಟು ಹೋದುದನ್ನೂ, ಭಗೀರಥನು ಗಂಗೆಯನ್ನು ಹರಿಸಿದ ಕಥೆಯನ್ನು ಹೇಳಿದನು. ಬಳಿಕ ಅಗಸ್ತ್ಯರು ವಾತಾಪಿ ಮತ್ತು ಇಲ್ವಲರೆಂಬ ರಾಕ್ಷಸರನ್ನು ಸಂಹರಿಸಿ, ವಿಂಧ್ಯಗಿರಿಯು ಎತ್ತರಕ್ಕೆ ಬೆಳೆಯುತ್ತಿದ್ದುದನ್ನು ತಪ್ಪಿಸಿದುದನ್ನೂ ವಿವರಿಸಿದರು.

ಅರ್ಥ:
ಸುತ: ಮಗ; ಚರಿತ: ಕಥೆ; ದೃಗು: ದೃಕ್ಕು, ದೃಶ್; ಶಿಖಿ: ಅಗ್ನಿ; ಉರಿ: ದಹನ; ಬಳಿಕ: ನಂತರ; ಅಮರನದಿ: ಗಂಗೆ; ವಿಗಡ: ಉಗ್ರ, ಭೀಕರ; ಮುನಿ: ಋಷಿ; ಮರ್ದಿಸು: ಸಾಯಿಸು; ಗಿರಿ: ಬೆಟ್ಟ; ಹಬ್ಬುಗೆ: ಹರಡು, ವ್ಯಾಪಿಸು; ವರ್ಣಿಸು: ಬಣ್ಣಿಸು; ಇಳುಹು: ಕೆಳಕ್ಕೆ ತರು;

ಪದವಿಂಗಡಣೆ:
ಸಗರಸುತ +ಚರಿತವನು +ಕಪಿಲನ
ದೃಗು+ಶಿಖಿಯಲ್+ಉರಿದುದನು +ಬಳಿಕ್
ಅವರಿಗೆ +ಭಗೀರಥನ್+ಇಳುಹಿದ್+ಅಮರನದೀ+ ಕಥಾಂತರವ
ವಿಗಡಮುನಿ +ಇಲ್ವಲನ+ ವಾತಾ
ಪಿಗಳ +ಮರ್ದಿಸಿ +ವಿಂಧ್ಯಗಿರಿ+ ಹ
ಬ್ಬುಗೆಯ+ ನಿಲಿಸಿದ್+ಅಗಸ್ತ್ಯ +ಚರಿತವ +ಮುನಿಪ +ವರ್ಣಿಸಿದ

ಅಚ್ಚರಿ:
(೧) ಸಗರನ ಮಕ್ಕಳನ್ನು ಕೊಂದನು ಎಂದು ಹೇಳುವ ಪರಿ – ಸಗರಸುತ ಚರಿತವನು ಕಪಿಲನ
ದೃಗುಶಿಖಿಯಲುರಿದುದನು

ನಿಮ್ಮ ಟಿಪ್ಪಣಿ ಬರೆಯಿರಿ