ಪದ್ಯ ೯: ಧರ್ಮಜನಿಗೆ ಯಾವ ವಿದ್ಯೆಯನ್ನು ಬೋಧಿಸಲಾಯಿತು?

ನಳ ಮಹೀಪತಿ ಯಕ್ಷ ಹೃದಯವ
ತಿಳಿದು ಋತುಪರ್ಣನಲಿ ಕಾಲವ
ಕಳೆದು ಗೆಲಿದನು ಪುಷ್ಕರನ ವಿದ್ಯಾತಿ ಮಹಿಮೆಯಲಿ
ಗೆಲಿದು ಕೌರವ ಶಕುನಿಗಳು ನಿ
ನ್ನಿಳೆಯಕೊಂಡರು ಮರಳಿ ಜೂಜಿಂ
ಗಳುಕಬೇಡೆಂದಕ್ಷಹೃದಯವ ಮುನಿಪ ಕರುಣಿಸಿದ (ಅರಣ್ಯ ಪರ್ವ, ೧೦ ಸಂಧಿ, ೯ ಪದ್ಯ)

ತಾತ್ಪರ್ಯ:
ನಳನು ಋತುಪರ್ಣನಿಂದ ಅಕ್ಷಹೃದಯವನ್ನು ಕಲಿತನು, ಕಾಲವು ಕಳೆದ ಮೇಲೆ ಪುಷ್ಕರನನ್ನು ಅಕ್ಷಹೃದಯದ ಮಹಿಮೆಯಿಂದ ಗೆದ್ದನು. ಶಕುನಿ ಕೌರವರು ನಿನ್ನನ್ನು ಪಗಡೆಯಲ್ಲಿ ಸೋಲಿಸಿ ನಿನ್ನ ರಾಜ್ಯವನ್ನು ಗೆದ್ದುಕೊಂಡರು. ಮತ್ತೊಮ್ಮೆ ನಿನ್ನನ್ನು ಜೂಜಿಗೆ ಕರೆದರೂ ನೀನು ಹೆದರಬೇಡ ಎಂದು ಧರ್ಮಜನಿಗೆ ಅಕ್ಷಹೃದಯವನ್ನು ಬೋಧಿಸಿದನು.

ಅರ್ಥ:
ಮಹೀಪತಿ: ರಾಜ; ಹೃದಯ: ವಕ್ಷಸ್ಥಳ; ಅಕ್ಷ: ಪಗಡೆಯ ಜೂಜು; ಅಕ್ಷಹೃದಯ: ಪಗಡೆಯ ಆಟದ ಗುಟ್ಟು; ತಿಳಿ: ಅರ್ಥೈಸು; ಕಾಲ: ಸಮಯ; ಕಳೆ: ತೊರೆ, ಹೋಗಲಾಡಿಸು; ಗೆಲಿ: ಜಯಗಳಿಸು; ವಿದ್ಯ: ಜ್ಞಾನ; ಮಹಿಮೆ: ಶ್ರೇಷ್ಠತೆ, ಔನ್ನತ್ಯ; ಇಳೆ: ಭೂಮಿ; ಮರಳಿ: ಮತ್ತೆ; ಜೂಜು: ದ್ಯೂತ; ಅಳುಕು: ಹೆದರು; ಮುನಿಪ: ಋಷಿ; ಕರುಣಿಸು: ದಯಪಾಲಿಸು;

ಪದವಿಂಗಡಣೆ:
ನಳ +ಮಹೀಪತಿ+ ಅಕ್ಷಹೃದಯವ
ತಿಳಿದು +ಋತುಪರ್ಣನಲಿ +ಕಾಲವ
ಕಳೆದು +ಗೆಲಿದನು +ಪುಷ್ಕರನ +ವಿದ್ಯಾತಿ +ಮಹಿಮೆಯಲಿ
ಗೆಲಿದು+ ಕೌರವ+ ಶಕುನಿಗಳು+ ನಿನ್
ಇಳೆಯ+ಕೊಂಡರು +ಮರಳಿ +ಜೂಜಿಂಗ್
ಅಳುಕ+ಬೇಡೆಂದ್+ಅಕ್ಷಹೃದಯವ +ಮುನಿಪ +ಕರುಣಿಸಿದ

ಅಚ್ಚರಿ:
(೧) ಅಕ್ಷಹೃದಯ ವಿದ್ಯೆಯ ಮಹಿಮೆ ಬಗ್ಗೆ ತಿಳಿಸುವ ಪದ್ಯ

ನಿಮ್ಮ ಟಿಪ್ಪಣಿ ಬರೆಯಿರಿ