ಪದ್ಯ ೮: ಯುಧಿಷ್ಠಿರನನ್ನು ಯಾರು ಸಮಾಧಾನ ಪಡಿಸಿದರು?

ಆತನಾಪತ್ತದು ಮಹೀಪತಿ
ನೀ ತಳೋದರಿ ಸಹಿತ ನಿನ್ನೀ
ಭ್ರಾತೃಜನ ಸಹಿತೀ ಮಹಾಮುನಿ ಮುಖ್ಯಜನ ಸಹಿತ
ಕಾತರಿಸುತಿಹೆ ನಿನ್ನವೊಲು ವಿ
ಖ್ಯಾತರಾರೈ ಪುಣ್ಯತರರೆಂ
ದಾ ತಪೋನಿಧಿ ಸಂತವಿಟ್ಟನು ಧರ್ಮನಂದನನ (ಅರಣ್ಯ ಪರ್ವ, ೧೦ ಸಂಧಿ, ೮ ಪದ್ಯ)

ತಾತ್ಪರ್ಯ:
ನಳನಿಗೆ ಅಂತಹ ಆಪತ್ತು ಬಂತು, ಧರ್ಮನಂದನ, ನೀನಾದರೋ ನಿನ್ನ ಪತ್ನಿ ಸಹೋದರಉ ಮತ್ತು ಮಹರ್ಷಿಗಳೊಡನೆ ಇದ್ದರೂ ಕಾತರಿಸುತ್ತಿರುವೆ, ರಾಜ, ನಿನ್ನಂತಹ ಪ್ರಖ್ಯಾತರು ಯಾರಿದ್ದಾರೆ ಎಂದು ಬೃಹದಶ್ವನು ಯುಧಿಷ್ಠಿರನನ್ನು ಸಮಾಧಾನ ಪಡಿಸಿದನು.

ಅರ್ಥ:
ಆಪತ್ತು: ತೊಂದರೆ; ಮಹೀಪತಿ: ರಾಜ; ತಳೋದರಿ: ಹೆಂಡತಿ; ಸಹಿತ: ಜೊತೆ; ಭ್ರಾತೃ: ಸಹೋದರ; ಮಹಾಮುನಿ: ಶ್ರೇಷ್ಠನಾದ ಋಷಿ; ಮುಖ್ಯ: ಪ್ರಮುಖ; ಕಾತರ: ಕಳವಳ, ಉತ್ಸುಕತೆ; ವಿಖ್ಯಾತ: ಪ್ರಸಿದ್ಧ; ಪುಣ್ಯ: ಸದಾಚಾರ; ತಪೋನಿಧಿ: ಋಷಿ; ಸಂತವಿಡು: ಸಂತೋಷಿಸು; ನಂದನ: ಮಗ;

ಪದವಿಂಗಡಣೆ:
ಆತನ್+ಆಪತ್ತದು +ಮಹೀಪತಿ
ನೀ +ತಳೋದರಿ +ಸಹಿತ+ ನಿನ್ನೀ
ಭ್ರಾತೃಜನ +ಸಹಿತ್+ಈ +ಮಹಾಮುನಿ +ಮುಖ್ಯಜನ +ಸಹಿತ
ಕಾತರಿಸುತಿಹೆ +ನಿನ್ನವೊಲು +ವಿ
ಖ್ಯಾತರಾರೈ+ ಪುಣ್ಯತರರ್+ಎಂದ್
ಆ+ ತಪೋನಿಧಿ+ ಸಂತವಿಟ್ಟನು +ಧರ್ಮನಂದನನ

ಅಚ್ಚರಿ:
(೧) ಮಹಾಮುನಿ, ತಪೋನಿಧಿ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ