ಪದ್ಯ ೧೧: ಇಂದ್ರನು ವೃತನನ್ನು ಹೇಗೆ ಕೊಂದನು?

ಆ ಮುನಿಯ ಕಂಕಾಳದಲಿ ಸು
ತ್ರಾಮಕೊಂದನು ವೃತ್ರನನು ಬಳಿ
ಕಾ ಮಹಾದಾನವರು ರಕ್ಕಸಕೋಟಿಜಲಧಿಯಲಿ
ಭೀಮಬಲರಡಗಿದರು ಬಂದೀ
ಭೂಮಿಯಲ್ಲಿ ವಸಿಷ್ಠನಾಶ್ರಮ
ದಾ ಮುನೀಂದ್ರರ ತಿಂದರಂದು ಸಹಸ್ರ ಸಂಖ್ಯೆಯಲಿ (ಅರಣ್ಯ ಪರ್ವ, ೧೦ ಸಂಧಿ, ೧೧ ಪದ್ಯ)

ತಾತ್ಪರ್ಯ:
ದಧೀಚಿಯ ಎಲುಬಿನಿಂದ ವಜ್ರಾಯುಧವನ್ನು ರೈಸಿ ಇಂದ್ರನು ವೃತನನ್ನು ಸಂಹರಿಸಿದನು. ಆಗ ಅನಂತ ಸಂಖ್ಯೆಯ ರಾಕ್ಷಸರು ಸಮುದ್ರದಲ್ಲಿ ಅಡಗಿಕೊಂಡು ಹೊರಕ್ಕೆ ಬಂದ ಮೇಲೆ ಅವರು ಭೂಮಿಯಲ್ಲಿ ವಸಿಷ್ಠರ ಆಶ್ರಮದ ಸಾವಿರಾರು ಮುನಿಗಳನ್ನು ತಿಂದರು.

ಅರ್ಥ:
ಮುನಿ: ಋಷಿ; ಕಂಕಾಳ: ಅಸ್ತಿಪಂಜರ; ಸುತ್ರಾಮ: ಇಂದ್ರ; ಕೊಲ್ಲು: ಸಾಯಿಸು; ಬಳಿಕ: ನಂತರ; ದಾನವ: ರಾಕ್ಷಸ; ರಕ್ಕಸ: ನೆತ್ತರು; ಜಲಧಿ: ಸಾಗರ; ಭೀಮ: ಭಯಂಕರವಾದ; ಬಲ: ಶಕ್ತಿ; ಅಡಗು: ಅವಿತುಕೊಳ್ಳು; ಭೂಮಿ: ಧರಣಿ; ಆಶ್ರಮ: ಕುಟೀರ; ಮುನೀಂದ್ರ: ಋಷಿವರ್ಯ; ತಿಂದು: ಭಕ್ಷಿಸು; ಸಹಸ್ರ: ಸಾವಿರ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ಆ+ ಮುನಿಯ +ಕಂಕಾಳದಲಿ +ಸು
ತ್ರಾಮ+ಕೊಂದನು +ವೃತ್ರನನು +ಬಳಿ
ಕಾ +ಮಹಾ+ದಾನವರು+ ರಕ್ಕಸ+ಕೋಟಿ+ಜಲಧಿಯಲಿ
ಭೀಮ+ಬಲರ್+ಅಡಗಿದರು+ ಬಂದೀ
ಭೂಮಿಯಲ್ಲಿ +ವಸಿಷ್ಠನ್+ಆಶ್ರಮದ್
ಆ+ ಮುನೀಂದ್ರರ +ತಿಂದರ್+ಅಂದು +ಸಹಸ್ರ+ ಸಂಖ್ಯೆಯಲಿ

ಅಚ್ಚರಿ:
(೧) ರಾಕ್ಷಸರು ಅಡಗಿಕೊಂಡ ಪರಿ – ಮಹಾದಾನವರು ರಕ್ಕಸಕೋಟಿಜಲಧಿಯಲಿ
ಭೀಮಬಲರಡಗಿದರು

ನಿಮ್ಮ ಟಿಪ್ಪಣಿ ಬರೆಯಿರಿ