ಪದ್ಯ ೬: ಬೃಹದಶ್ವನು ಯಾರ ಕಥೆಯನ್ನು ಹೇಳಲು ಪ್ರಾರಂಭಿಸಿದನು?

ಆತನೀತನ ಸಂತವಿಟ್ಟು
ದ್ಯೂತದಲಿ ನಳಚಕ್ರವರ್ತಿ ಮ
ಹೀತಳವ ಸೋತನು ಕಣಾ ಕಲಿಯಿಂದ ಪುಷ್ಕರಗೆ
ಭೂತಳವ ಬಿಸುಟಡವಿಗೈದಿದ
ನಾತ ನಿಜವಧು ಸಹಿತ ವನದಲಿ
ಕಾತರಿಸಿ ನಿಜಸತಿಯ ಬಿಸುಟನು ಹಾಯ್ದನಡವಿಯಲಿ (ಅರಣ್ಯ ಪರ್ವ, ೧೦ ಸಂಧಿ, ೬ ಪದ್ಯ)

ತಾತ್ಪರ್ಯ:
ಬೃಹದಶ್ವನು ಧರ್ಮಜನನ್ನು ಸಂತೈಸಿ ಅವನಿಗೆ ನಳನ ಕಥೆಯನ್ನು ಹೇಳಿದನು. ನಳ ಚಕ್ರವರ್ತಿಯು ಕಲಿಯ ದೆಸೆಯಿಂದ ಪುಷ್ಕರನಿಗೆ ರಾಜ್ಯವನ್ನು ಸೋತು, ಪತ್ನಿಯಾದ ದಮಯಂತಿಯೊಂದಿಗೆ ಕಾಡಿಗೆ ಹೋಗಿ, ಕಾಡಿನಲ್ಲಿ ಅವಳೊಬ್ಬಳನ್ನೇ ತ್ಯಜಿಸಿದನು.

ಅರ್ಥ:
ಸಂತವಿಡು: ಸಂತೈಸು; ದ್ಯೂತ: ಪಗಡೆಯಾಟ; ಚಕ್ರವರ್ತಿ: ರಾಜ; ಮಹೀತಳ: ಭೂಮಿ; ಸೋತು: ಪರಾಭವ; ಭೂತಳ: ಭೂಮಿ; ಬಿಸುಟು: ತ್ಯಜಿಸು, ಹೊರಹಾಕು; ಅಡವಿ: ಅರಣ್ಯ; ವಧು: ಹೆಂಡತಿ, ಹೆಣ್ಣು; ಸಹಿತ; ಜೊತೆ; ವನ: ಕಾಡು; ಕಾತರ: ಕಳವಳ; ಸತಿ: ಹೆಂಡತಿ; ಬಿಸುಟು: ಹೊರಹಾಕು; ಹಾಯ್ದು: ಮೇಲೆಬಿದ್ದು; ಅಡವಿ: ಕಾಡು;

ಪದವಿಂಗಡಣೆ:
ಆತನ್+ಈತನ +ಸಂತವಿಟ್ಟು
ದ್ಯೂತದಲಿ +ನಳ+ಚಕ್ರವರ್ತಿ +ಮ
ಹೀತಳವ +ಸೋತನು +ಕಣಾ +ಕಲಿಯಿಂದ +ಪುಷ್ಕರಗೆ
ಭೂತಳವ +ಬಿಸುಟ್+ಅಡವಿಗೈದಿದನ್
ಆತ +ನಿಜವಧು +ಸಹಿತ +ವನದಲಿ
ಕಾತರಿಸಿ +ನಿಜಸತಿಯ +ಬಿಸುಟನು +ಹಾಯ್ದನ್+ಅಡವಿಯಲಿ

ಅಚ್ಚರಿ:
(೧) ವಧು, ಸತಿ; ಅಡವಿ, ವನ; ಮಹೀತಳ, ಭೂತಳ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ