ಎಂದು ಪಾರ್ಥನ ಸಂತವಿಟ್ಟು ಪು
ರಂದರನು ತನ್ನರಮನೆಗೆ ನಡೆ ತಂ
ದನರ್ಜುನ ಸಹಿತ ವಿವಿಧ ವಿನೋದ ವಿಭವದಲಿ
ಅಂದು ಶಿಖಿ ಪವನಾದಿಗಳು ನಲ
ವಿಂದ ಕೊಟ್ಟರು ಶರವನಮರೀ
ವೃಂದ ಸೂಸಿತು ಸೇಸೆಯನು ಜಯರವದ ರಭಸದಲಿ (ಅರಣ್ಯ ಪರ್ವ, ೯ ಸಂಧಿ, ೫೪ ಪದ್ಯ)
ತಾತ್ಪರ್ಯ:
ಇಂದ್ರನು ಹೀಗೆ ಹಲವಾರು ರೀತಿಯಲ್ಲಿ ವಿಷಯವನ್ನು ತಿಳಿಸಿ, ಸಮಾಧಾನಗೊಳಿಸಿ ಅರ್ಜುನನೊಡನೆ ಇಂದ್ರನು ತನ್ನರಮನೆಗೆ ಬಂದನು, ವಿವಿಧ ವೈಭವಯುಕ್ತವಾಗಿ ವಿನೋದದಿಂದ ಮಾತುಗಳನ್ನಾಡಿ ವಿಹರಿಸಿದನು. ಅಗ್ನಿ, ವಾಯು ಮೊದಲಾದ ದೇವತೆಗಳು ಅರ್ಜುನನಿಗೆ ಸಂತೋಷದಿಂದ ಬಾಣಗಳನ್ನು ನೀಡಿದರು, ದೇವತಾಸ್ತ್ರೀಯರು ಸೀಸೆಯನ್ನಿಟ್ಟು ಜಯಕಾರವನ್ನು ಮೊಳಗಿದರು.
ಅರ್ಥ:
ಸಂತ: ಸೌಖ್ಯ, ಕ್ಷೇಮ; ಪುರಂದರ: ಇಂದ್ರ; ಅರಮನೆ: ರಾಜರ ಆಲಯ; ನಡೆ: ಚಲಿಸು; ಸಹಿತ: ಜೊತೆ; ವಿವಿಧ: ಹಲವಾರು; ವಿನೋದ: ವಿಹಾರ, ಸಂತೋಷ; ವಿಭವ: ಸಿರಿ, ಸಂಪತ್ತು; ಶಿಖಿ: ಅಗ್ನಿ; ಪವನ: ವಾಯು; ಆದಿ: ಮುಂತಾದ; ನಲವು: ಸಂತೋಷ; ಕೊಡು: ನೀಡು; ಶರ: ಬಾಣ; ಅಮರ: ದೇವತೆ; ವೃಂದ: ಗುಂಪು; ಸೂಸು: ಕೊಡು, ನೀಡು; ಸೇಸೆ: ಮಂಗಳಾಕ್ಷತೆ, ಮಂತ್ರಾಕ್ಷತೆ; ಜಯ: ಉಘೇ; ರವ: ಶಬ್ದ; ರಭಸ: ವೇಗ;
ಪದವಿಂಗಡಣೆ:
ಎಂದು +ಪಾರ್ಥನ +ಸಂತವಿಟ್ಟು +ಪು
ರಂದರನು +ತನ್ನರಮನೆಗೆ +ನಡೆ +ತಂ
ದನ್+ಅರ್ಜುನ +ಸಹಿತ +ವಿವಿಧ +ವಿನೋದ +ವಿಭವದಲಿ
ಅಂದು +ಶಿಖಿ +ಪವನಾದಿಗಳು +ನಲ
ವಿಂದ+ ಕೊಟ್ಟರು +ಶರವನ್+ಅಮರೀ
ವೃಂದ +ಸೂಸಿತು+ ಸೇಸೆಯನು +ಜಯರವದ+ ರಭಸದಲಿ
ಅಚ್ಚರಿ:
(೧) ಅಪ್ಸರೆಯರು ಎಂದು ಹೇಳಲು – ಅಮರೀವೃಂದ ಪದದ ಬಳಕೆ
(೨) ವಿ ಕಾರದ ತ್ರಿವಳಿ ಪದ – ವಿವಿಧ ವಿನೋದ ವಿಭವದಲಿ