ಪದ್ಯ ೫೪: ಅರ್ಜುನನಿಗೆ ಯಾವ ಬಾಣಗಳು ದೊರೆತವು?

ಎಂದು ಪಾರ್ಥನ ಸಂತವಿಟ್ಟು ಪು
ರಂದರನು ತನ್ನರಮನೆಗೆ ನಡೆ ತಂ
ದನರ್ಜುನ ಸಹಿತ ವಿವಿಧ ವಿನೋದ ವಿಭವದಲಿ
ಅಂದು ಶಿಖಿ ಪವನಾದಿಗಳು ನಲ
ವಿಂದ ಕೊಟ್ಟರು ಶರವನಮರೀ
ವೃಂದ ಸೂಸಿತು ಸೇಸೆಯನು ಜಯರವದ ರಭಸದಲಿ (ಅರಣ್ಯ ಪರ್ವ, ೯ ಸಂಧಿ, ೫೪ ಪದ್ಯ)

ತಾತ್ಪರ್ಯ:
ಇಂದ್ರನು ಹೀಗೆ ಹಲವಾರು ರೀತಿಯಲ್ಲಿ ವಿಷಯವನ್ನು ತಿಳಿಸಿ, ಸಮಾಧಾನಗೊಳಿಸಿ ಅರ್ಜುನನೊಡನೆ ಇಂದ್ರನು ತನ್ನರಮನೆಗೆ ಬಂದನು, ವಿವಿಧ ವೈಭವಯುಕ್ತವಾಗಿ ವಿನೋದದಿಂದ ಮಾತುಗಳನ್ನಾಡಿ ವಿಹರಿಸಿದನು. ಅಗ್ನಿ, ವಾಯು ಮೊದಲಾದ ದೇವತೆಗಳು ಅರ್ಜುನನಿಗೆ ಸಂತೋಷದಿಂದ ಬಾಣಗಳನ್ನು ನೀಡಿದರು, ದೇವತಾಸ್ತ್ರೀಯರು ಸೀಸೆಯನ್ನಿಟ್ಟು ಜಯಕಾರವನ್ನು ಮೊಳಗಿದರು.

ಅರ್ಥ:
ಸಂತ: ಸೌಖ್ಯ, ಕ್ಷೇಮ; ಪುರಂದರ: ಇಂದ್ರ; ಅರಮನೆ: ರಾಜರ ಆಲಯ; ನಡೆ: ಚಲಿಸು; ಸಹಿತ: ಜೊತೆ; ವಿವಿಧ: ಹಲವಾರು; ವಿನೋದ: ವಿಹಾರ, ಸಂತೋಷ; ವಿಭವ: ಸಿರಿ, ಸಂಪತ್ತು; ಶಿಖಿ: ಅಗ್ನಿ; ಪವನ: ವಾಯು; ಆದಿ: ಮುಂತಾದ; ನಲವು: ಸಂತೋಷ; ಕೊಡು: ನೀಡು; ಶರ: ಬಾಣ; ಅಮರ: ದೇವತೆ; ವೃಂದ: ಗುಂಪು; ಸೂಸು: ಕೊಡು, ನೀಡು; ಸೇಸೆ: ಮಂಗಳಾಕ್ಷತೆ, ಮಂತ್ರಾಕ್ಷತೆ; ಜಯ: ಉಘೇ; ರವ: ಶಬ್ದ; ರಭಸ: ವೇಗ;

ಪದವಿಂಗಡಣೆ:
ಎಂದು +ಪಾರ್ಥನ +ಸಂತವಿಟ್ಟು +ಪು
ರಂದರನು +ತನ್ನರಮನೆಗೆ +ನಡೆ +ತಂ
ದನ್+ಅರ್ಜುನ +ಸಹಿತ +ವಿವಿಧ +ವಿನೋದ +ವಿಭವದಲಿ
ಅಂದು +ಶಿಖಿ +ಪವನಾದಿಗಳು +ನಲ
ವಿಂದ+ ಕೊಟ್ಟರು +ಶರವನ್+ಅಮರೀ
ವೃಂದ +ಸೂಸಿತು+ ಸೇಸೆಯನು +ಜಯರವದ+ ರಭಸದಲಿ

ಅಚ್ಚರಿ:
(೧) ಅಪ್ಸರೆಯರು ಎಂದು ಹೇಳಲು – ಅಮರೀವೃಂದ ಪದದ ಬಳಕೆ
(೨) ವಿ ಕಾರದ ತ್ರಿವಳಿ ಪದ – ವಿವಿಧ ವಿನೋದ ವಿಭವದಲಿ

ನಿಮ್ಮ ಟಿಪ್ಪಣಿ ಬರೆಯಿರಿ