ಪದ್ಯ ೧: ಅರ್ಜುನನು ಎಷ್ಟು ವರ್ಷಗಳ ಕಾಲ ಸ್ವರ್ಗದಲ್ಲಿದ್ದನು?

ಅರಸ ಕೇಳೈ ಪಾರ್ಥನಿದ್ದನು
ವರುಷವೈದರೊಳಿಂದ್ರಭವನದ
ಸಿರಿಯಸಮ್ಮೇಳದ ಸಗಾಢದ ಸೌಮನಸ್ಯದಲಿ
ನರನಹದನೇನೋ ಧನಂಜಯ
ನಿರವದೆಲ್ಲಿ ಕಿರೀಟಿ ನಮ್ಮನು
ಮರೆದು ಕಳೆದನಲಾಯೆನುತ ಯಮಸೂನು ಚಿಂತಿಸಿದ (ಅರಣ್ಯ ಪರ್ವ, ೧೦ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಸ್ವರ್ಗದ ಅಪಾರ ಸಂಪತ್ತು, ತಂದೆಯ ಗಾಢವಾದ ಪ್ರೀತಿ ವಾತ್ಸಲ್ಯಗಳನ್ನು ಅನುಭವಿಸುತ್ತಾ ಅರ್ಜುನನು ಐದು ವರ್ಷಗಳ ಕಾಲ ಅಮರಾವತಿಯಲ್ಲಿದ್ದನು. ಇತ್ತ ಭೂಮಿಯಲ್ಲಿ ಧರ್ಮರಾಯನು ಚಿಂತೆಗೊಳಗಾಗಿ, ಅರ್ಜುನನ ವಿಷಯವೇನೂ ತಿಳಿಯದಾಗಿದೆ, ಅವನು ಈಗ ಎಲ್ಲಿರುವನೋ, ನಮ್ಮನ್ನೇನಾದರು ಮರೆತುಬಿಟ್ಟನೋ ಏನೋ ಎಂದು ಚಿಂತಿಸಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ವರುಷ: ಸಂವತ್ಸರ; ಭವನ: ಆಲಯ; ಸಿರಿ: ಐಶ್ವರ್ಯ; ಸಮ್ಮೇಳ: ಸಖ್ಯ, ಸಹವಾಸ; ಸಗಾಢ: ಆಡಂಬರ, ವೈಭವ; ಸೌಮನಸ್ಯ: ಒಳ್ಳೆಯ ಮನಸ್ಸಿನಿಂದ ಕೂಡಿರುವಿಕೆ, ಸಂತೋಷ; ನರ: ಅರ್ಜುನ; ಇರವು: ಇರುವಿಕೆ, ವಾಸ; ಕಿರೀಟಿ: ಅರ್ಜುನ; ಮರೆ: ನೆನಪಿನಿಂದ ದೂರಮಾಡು; ಕಳೆ: ತೊರೆ; ಸೂನು: ಮಗ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಅರಸ +ಕೇಳೈ +ಪಾರ್ಥನಿದ್ದನು
ವರುಷವ್+ಐದರೊಳ್+ಇಂದ್ರ+ಭವನದ
ಸಿರಿಯ+ಸಮ್ಮೇಳದ +ಸಗಾಢದ+ ಸೌಮನಸ್ಯದಲಿ
ನರನಹದನ್+ಏನೋ +ಧನಂಜಯನ್
ಇರವದೆಲ್ಲಿ+ ಕಿರೀಟಿ+ ನಮ್ಮನು
ಮರೆದು +ಕಳೆದನಲಾ+ಎನುತ +ಯಮಸೂನು +ಚಿಂತಿಸಿದ

ಅಚ್ಚರಿ:
(೧) ಸ ಕಾರದ ಸಾಲು ಪದಗಳು – ಸಿರಿಯ ಸಮ್ಮೇಳದ ಸಗಾಢದ ಸೌಮನಸ್ಯದಲಿ

ನಿಮ್ಮ ಟಿಪ್ಪಣಿ ಬರೆಯಿರಿ