ಪದ್ಯ ೪೬: ಅರ್ಜುನನು ಏಕೆ ಜೀವಿಸುವುದಿಲ್ಲವೆಂದ?

ಎಲೆ ವಿಧಾತ್ರಕೃತಾಪರಾಧ
ಸ್ಥಳಕೆ ದಂಡ ಪ್ರಾಪ್ತಿಯಲ್ಲದೆ
ವಿಲಸಿತದ ವೇದಾರ್ಥದಲಿ ಮನ್ವಾದಿ ಮಾರ್ಗದಲಿ
ಚಲಿಸಿದಾಚರಿಸಿದೊಡೆ ಧರ್ಮ
ಸ್ಥಳದೊಳೇನು ನಿಮಿತ್ತವಕಟಾ
ಗಳಿತ ಪೌರುಷನಾಗಿ ಬದುಕುವನಲ್ಲ ತಾನೆಂದ (ಅರಣ್ಯ ಪರ್ವ, ೯ ಸಂಧಿ, ೪೬ ಪದ್ಯ)

ತಾತ್ಪರ್ಯ:
ಹೇ ವಿಧಿಯೆ, ಬ್ರಹ್ಮನೇ, ನಾನು ಮಾಡಿಅ ಅಪರಾಧಕ್ಕೆ ಶಿಕ್ಷೆಯಾಗಬೇಕು, ಅದು ಬಿಟ್ಟು ಶ್ರೇಷ್ಠವಾದ ವೇದ ಮಾರ್ಗ, ಮನುವೇ ಮೊದಲಾದವರು ನಡೆದ ವಿಧಿಸಿದ ಮಾರ್ಗಕ್ಕೆ ಅನುಸಾರವಾಗಿ ಧರ್ಮದಿಂದ ನಡೆದರೆ ಯಾವ ಕಾರಣಕ್ಕಾಗಿ ನನಗೆ ಈ ಶಾಪ? ಪೌರುಷಹೀನನಾಗಿ ನಾನು ಬದುಕುವುದಿಲ್ಲ ಎಂದು ಅರ್ಜುನನು ಚಿಂತಿಸಿದನು.

ಅರ್ಥ:
ವಿಧಾತ್ರ: ಬ್ರಹ್ಮ; ಕೃತ: ಮಾಡಿದ; ಅಪರಾಧ: ತಪ್ಪು; ಸ್ಥಳ: ಜಾಗ, ನೆಲೆ; ದಂಡ: ಶಿಕ್ಷೆ, ದಂಡನೆ; ಪ್ರಾಪ್ತಿ: ದೊರಕುವುದು; ವಿಲಸಿತ: ಅರಳಿದ, ಶುದ್ಧ, ಪ್ರಫುಲ್ಲಿತ; ವೇದ: ಜ್ಞಾನ; ಮಾರ್ಗ: ದಾರಿ; ಚಲಿಸು: ನಡೆ; ಆಚರಿಸು: ನಡೆದುಕೊಳ್ಳು; ಧರ್ಮ: ಧಾರಣೆ ಮಾಡಿದುದು; ನಿಮಿತ್ತ: ಕಾರಣ; ಅಕಟಾ: ಅಯ್ಯೋ; ಅಗಳಿತ: ತೊರೆದ; ಪೌರುಷ: ಪುರುಷತ್ವ; ಬದುಕು: ಜೀವಿಸು;

ಪದವಿಂಗಡಣೆ:
ಎಲೆ+ ವಿಧಾತ್ರ+ಕೃತ+ಅಪರಾಧ
ಸ್ಥಳಕೆ +ದಂಡ +ಪ್ರಾಪ್ತಿ+ಅಲ್ಲದೆ
ವಿಲಸಿತದ +ವೇದಾರ್ಥದಲಿ +ಮನ್ವಾದಿ +ಮಾರ್ಗದಲಿ
ಚಲಿಸಿದ್+ಆಚರಿಸಿದೊಡೆ +ಧರ್ಮ
ಸ್ಥಳದೊಳ್+ಏನು +ನಿಮಿತ್ತವ್+ಅಕಟ
ಅಗಳಿತ +ಪೌರುಷನಾಗಿ +ಬದುಕುವನಲ್ಲ+ ತಾನೆಂದ

ಅಚ್ಚರಿ:
(೧) ಅರ್ಜುನನ ನೋವು – ಅಕಟಾಗಳಿತ ಪೌರುಷನಾಗಿ ಬದುಕುವನಲ್ಲ ತಾನೆಂದ

ನಿಮ್ಮ ಟಿಪ್ಪಣಿ ಬರೆಯಿರಿ