ಪದ್ಯ ೪೦: ಊರ್ವಶಿಯು ಅರ್ಜುನನ್ನು ಏಕೆ ಶಪಿಸಿದಳು?

ಒಲಿದು ಬಂದವರಾವು ಸೊಬಗಿನೊ
ಳೊಲಿಸಿ ಮರುಗಿಪ ಮಿಂಡ ನೀನತಿ
ಸುಲಭರಾವ್ ದುರ್ಲಭನು ನೀ ದೇವೇಂದ್ರ ಕಟಕದಲಿ
ಎಲೆ ನಪುಂಸಕ ಗಂಡು ವೇಷದ
ಸುಳಿವು ನಿನಗೇಕೆನುತ ಸತಿ ಕಳ
ವಳಿಸಿ ಕರವೆತ್ತಿದಳು ಹಿಡಿ ಹಿಡಿ ಶಾಪವಿದೆಯೆನುತ (ಅರಣ್ಯ ಪರ್ವ, ೯ ಸಂಧಿ, ೪೦ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ನಾವು ನಿನಗೆ ಒಲಿದು ಬಂದಿರುವವಳು, ಸೌಂದರ್ಯದಿಂದ ಆಕರ್ಷಿಸಿ ನಮ್ಮನ್ನು ಮರುಗಿಸುವ ಶೂರ ನೀನು, ಇಂದ್ರನ ಪರಿವಾರದಲ್ಲಿ ಬಹಳ ಶ್ರೇಷ್ಠಳಾದವಳು ನಾನು ಸುಲಭದಲ್ಲಿ ಸಿಗುವವಳೇ? ನೀನು ದುರ್ಲಭನಲ್ಲವೇ? ಎಲೈ ನಪುಂಸಕ, ಈ ಗಂಡು ವೇಷ ನಿನಗೇಕೆ? ಇದೋ ನಿನಗೆ ಶಾಪಕೊಡುತ್ತೇನೆ ಹಿಡಿ ಎಂದು ಊರ್ವಶಿಯು ತನ್ನ ಹಸ್ತವನ್ನೆತ್ತಿದಳು.

ಅರ್ಥ:
ಒಲಿದು: ಪ್ರೀತಿಸಿ; ಬಂದು: ಆಗಮಿಸು; ಸೊಬಗು: ಅಂದ; ಮರುಗು: ಕರುಣೆತೋರು; ಮಿಂಡ: ವೀರ, ಶೂರ; ಸುಲಭ: ನಿರಾಯಾಸ; ದುರ್ಲಭ: ಪಡೆಯಲಸಾಧ್ಯ; ದೇವೇಂದ್ರ: ಇಂದ್ರ; ಕಟಕ: ಗುಂಪು; ನಪುಂಸಕ: ಕೊಜ್ಜೆ, ಷಂಡ, ಖೋಜಾ; ಗಂಡು: ಪುರುಷ; ವೇಷ: ತೋರಿಕೆಯ ರೂಪ, ಸೋಗು; ಸುಳಿವು: ಗುರುತು, ಕುರುಹು; ಸತಿ: ಹೆಣ್ಣು; ಕಳವಳ: ಗೊಂದಲ, ಭ್ರಾಂತಿ; ಕರ: ಹಸ್ತ; ಎತ್ತು: ಮೇಲಕ್ಕೆ ಮಾಡು; ಹಿಡಿ: ಗ್ರಹಿಸು; ಶಾಪ: ನಿಷ್ಠುರದ ನುಡಿ;

ಪದವಿಂಗಡಣೆ:
ಒಲಿದು+ ಬಂದವರ್+ಆವು +ಸೊಬಗಿನೊಳ್
ಒಲಿಸಿ +ಮರುಗಿಪ +ಮಿಂಡ +ನೀನ್+ಅತಿ
ಸುಲಭರಾವ್+ ದುರ್ಲಭನು+ ನೀ +ದೇವೇಂದ್ರ+ ಕಟಕದಲಿ
ಎಲೆ +ನಪುಂಸಕ+ ಗಂಡು +ವೇಷದ
ಸುಳಿವು+ ನಿನಗೇಕ್+ಎನುತ +ಸತಿ +ಕಳ
ವಳಿಸಿ +ಕರವೆತ್ತಿದಳು +ಹಿಡಿ+ ಹಿಡಿ+ ಶಾಪವಿದೆ+ಎನುತ

ಅಚ್ಚರಿ:
(೧) ಸುಲಭ, ದುರ್ಲಭ – ವಿರುದ್ಧ ಪದ/ಪ್ರಾಸ ಪದ
(೨) ಅರ್ಜುನನನ್ನು ಬಯ್ಯುವ ಪರಿ – ಎಲೆ ನಪುಂಸಕ ಗಂಡು ವೇಷದ ಸುಳಿವು ನಿನಗೇಕೆ

ನಿಮ್ಮ ಟಿಪ್ಪಣಿ ಬರೆಯಿರಿ