ಪದ್ಯ ೩೯: ಊರ್ವಶಿಯು ಅರ್ಜುನನನ್ನು ಹೇಗೆ ಬಯ್ದಳು?

ಎಲವೊ ಭಂಡರ ಭಾವ ಖೂಳರ
ನಿಳಯ ಖಳರಧಿದೈವ ವಂಚಕ
ತಿಲಕ ಗಾವಿಲರೊಡೆಯ ಬಂಧುವೆ ದುಷ್ಟನಾಯಕರ
ಎಲೆ ಮರುಳೆ ತಾನಾವಳೆಂಬುದ
ತಿಳಿಯಲಾ ನೀನಾವನೆಂಬುದ
ನಿಳೆಯರಿಯದೇ ಭಂಡ ಫಡ ಹೋಗೆಂದಳಿಂದುಮುಖಿ (ಅರಣ್ಯ ಪರ್ವ, ೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ಎಲವೋ ಅರ್ಜುನ, ನಾಚಿಕೆಗೆಟ್ಟವರ ಭಾವ, ದುಷ್ಟರಿಗೆ ಪೋಷಕ, ನೀಚರ ಅಧಿದೈವ, ಮೋಸಗಾರರಲ್ಲಿ ಶ್ರೇಷ್ಠನಾದವ, ದುಷ್ಟನಾಯಕರ ಬಂಧು, ಎಲೋ ಹುಚ್ಚಾ, ನಾನಾರೆಂದು ನಿನಗೆ ತಿಳಿಯಲಿಲ್ಲವಲ್ಲಾ, ನೀನು ಯಾರೆಂಬುದು ಲೋಕಕ್ಕೇ ಗೊತ್ತಿಲ್ಲವೇ? ಭಂಡ ಹೋಗು ಎಂದು ಅರ್ಜುನನನ್ನು ಊರ್ವಶಿ ಬಯ್ದಳು.

ಅರ್ಥ:
ಭಂಡ: ನಾಚಿಕೆ, ಲಜ್ಜೆ; ಭಾವ: ಅಂತರ್ಗತ ಅರ್ಥ, ಮನಸ್ಸು; ಖೂಳ: ದುಷ್ಟ; ನಿಳಯ: ಆಶ್ರಯ; ಖಳ: ದುಷ್ಟ, ದುರುಳ; ಅಧಿದೈವ: ಮುಖ್ಯವಾದ ದೇವತೆ; ವಂಚಕ: ಮೋಸಗಾರ; ತಿಲಕ: ಶ್ರೇಷ್ಠ; ಗಾವಿಲ: ದಡ್ಡ, ಹೆಡ್ಡ; ಒಡೆಯ: ಪ್ರಭು; ಬಂಧು: ಸಂಬಂಧಿಕ; ದುಷ್ಟ: ನೀಚ, ಕೆಟ್ಟವನು; ನಾಯಕ: ಒಡೆಯ; ಮರುಳ: ಮೂಢ; ತಿಳಿ: ಗ್ರಹಿಸು; ಇಳೆ: ಭೂಮಿ; ಅರಿ: ತಿಳಿ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ಊರ್ವಶಿ);

ಪದವಿಂಗಡಣೆ:
ಎಲವೊ +ಭಂಡರ +ಭಾವ +ಖೂಳರ
ನಿಳಯ +ಖಳರ್+ಅಧಿದೈವ +ವಂಚಕ
ತಿಲಕ+ ಗಾವಿಲರ್+ಒಡೆಯ +ಬಂಧುವೆ +ದುಷ್ಟನಾಯಕರ
ಎಲೆ+ ಮರುಳೆ +ತಾನ್+ಆವಳೆಂಬುದ
ತಿಳಿಯಲಾ +ನೀನ್+ಆವನೆಂಬುದನ್
ಇಳೆ+ಅರಿಯದೇ +ಭಂಡ +ಫಡ+ ಹೋಗೆಂದಳ್+ಇಂದುಮುಖಿ

ಅಚ್ಚರಿ:
(೧) ಅರ್ಜುನನನ್ನು ಬಯ್ಯುವ ಪರಿ – ಭಂಡರ ಭಾವ, ಖೂಳರ ನಿಲಯ, ಖಳರಧಿದೈವ, ವಂಚಕತಿಲಕ, ಗಾವಿಲರೊಡೆಯ,ಬಂಧುವೆ ದುಷ್ಟನಾಯಕರ, ಮರುಳೆ

ನಿಮ್ಮ ಟಿಪ್ಪಣಿ ಬರೆಯಿರಿ