ಪದ್ಯ ೩೦: ಅರ್ಜುನನನ್ನು ಊರ್ವಶಿಯು ಹೇಗೆ ಹಂಗಿಸಿದಳು?

ಅಹುದಹುದಲೇ ಶ್ರೌತ ಪಥದಲಿ
ಬಹಿರಿ ನೀವೇ ಸ್ಮಾರ್ತ ವಿಧಿ ಸ
ನ್ನಿಹಿತರೆಂಬುದನರಿಯದೇ ಮೂಜಗದ ಜನವೆಲ್ಲ
ಮಹಿಳೆಯೊಬ್ಬಳೊಳೈವರೊಡಗೂ
ಡಿಹರು ನೀವೇನಲ್ಲಲೇ ನಿ
ಸ್ಪೃಹರು ನೀವ್ ನಮ್ಮಲ್ಲಿ ಹರಹರಯೆಂದಳಿಂದುಮುಖಿ (ಅರಣ್ಯ ಪರ್ವ, ೯ ಸಂಧಿ, ೩೦ ಪದ್ಯ)

ತಾತ್ಪರ್ಯ:
ಊರ್ವಶಿಯು ಅರ್ಜುನನ ತರ್ಕವನ್ನು ಕೇಳಿ ಕೋಪಗೊಂಡು, ಹೌದಲ್ಲವೇ, ನೀವು ವೇದವಿಹಿತ ಮಾರ್ಗದವರು, ಅಲ್ಲದೆ ಸ್ಮೃತಿಯಲ್ಲಿ ವಿಧಿಸಿದಂತೆ ನಡೆಯುವವರೆಂಬುದನ್ನು ಮೂರು ಲೋಕದ ಜನಗಳೆಲ್ಲರೂ ಅರಿತಿಲ್ಲವೇ, ಐವರು ಒಬ್ಬ ಹೆಂಗಸನ್ನು ಮದುವೆಯಾಗಿರುವರಂತೆ, ಅವರು ನೀವಲ್ಲ ತಾನೆ, ನಮ್ಮನ್ನು ಮಾತ್ರ ಸ್ವಲ್ಪವೂ ಬಯಸದಿರುವವರು ನೀವಲ್ಲವೇ ಶಿವ ಶಿವಾ ಎಂದು ಊರ್ವಶಿ ಅರ್ಜುನನನ್ನು ಹಂಗಿಸಿದಳು.

ಅರ್ಥ:
ಅಹುದು: ಹೌದು; ಶ್ರೌತ: ವೇದಗಳಿಗೆ ಸಂಬಂಧಿಸಿದ; ಪಥ: ಮಾರ್ಗ; ಬಹಿರಿ: ಬಂದಿರಿ; ಸ್ಮಾರ್ತ:ಸ್ಮೃತಿಗ್ರಂಥಗಳಲ್ಲಿ ವಿಧಿ ಸಿದ ಆಚರಣೆ; ವಿಧಿ: ನಿಯಮ; ಸನ್ನಿಹಿತ: ಹತ್ತಿರ, ಸಮೀಪ; ಅರಿ: ತಿಳಿ; ಮೂಜಗ: ತ್ರಿಲೋಕ; ಜನ: ಮನುಷ್ಯ; ಮಹಿಳೆ: ನಾರಿ; ಒಡಗೂಡು: ಸೇರು; ನಿಸ್ಪೃಹ: ಆಸೆ ಇಲ್ಲದವ; ಹರ: ಶಿವ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಅಹುದ್+ಅಹುದಲೇ +ಶ್ರೌತ +ಪಥದಲಿ
ಬಹಿರಿ +ನೀವೇ +ಸ್ಮಾರ್ತ +ವಿಧಿ +ಸ
ನ್ನಿಹಿತರ್+ಎಂಬುದನ್+ಅರಿಯದೇ +ಮೂಜಗದ+ ಜನವೆಲ್ಲ
ಮಹಿಳೆ+ಒಬ್ಬಳೊಳ್+ಐವರ್+ಒಡಗೂ
ಡಿಹರು +ನೀವೇನಲ್ಲಲೇ +ನಿ
ಸ್ಪೃಹರು +ನೀವ್ +ನಮ್ಮಲ್ಲಿ+ ಹರಹರ+ಎಂದಳ್+ಇಂದುಮುಖಿ

ಅಚ್ಚರಿ:
(೧) ಅರ್ಜುನನನ್ನು ಹಂಗಿಸುವ ಪರಿ – ಮಹಿಳೆಯೊಬ್ಬಳೊಳೈವರೊಡಗೂಡಿಹರು ನೀವೇನಲ್ಲಲೇ

ನಿಮ್ಮ ಟಿಪ್ಪಣಿ ಬರೆಯಿರಿ