ಪದ್ಯ ೨೯: ಅರ್ಜುನನ ತರ್ಕಬದ್ಧ ಉತ್ತರವೇನು?

ಇದು ಮನುಷ್ಯ ಶರೀರ ತದ್ಧ
ರ್ಮದಲಿ ತನ್ನವಸಾನ ಪರಿಯಂ
ತಿದರೊಳವ್ಯಭಿಚಾರದಲಿ ವರ್ತಿಸಿದ ಬಳಿಕಿನಲಿ
ತ್ರಿದಶರಲ್ಲಿಗೆ ಬಂದರಾ ಮಾ
ರ್ಗದಲಿ ನಡೆವುದು ದೇವತಾ ದೇ
ಹದಲಿ ಬಲವತ್ತರವು ದೇಹ ವಿಶೇಷ ವಿಧಿಯೆಂದ (ಅರಣ್ಯ ಪರ್ವ, ೯ ಸಂಧಿ, ೨೯ ಪದ್ಯ)

ತಾತ್ಪರ್ಯ:
ತಾಯಿ, ನನ್ನದು ಮಾನವ ಶರೀರ, ನಾನು ಸಾಯುವವರೆಗೂ ಮನುಷ್ಯ ಧರ್ಮದಂತೆ ಅವ್ಯಭಿಚಾರದಿಂದ ಬದುಕನ್ನು ಸಾಗಿಸಿ, ತದನಂತರ ದೇವಲೋಕಕ್ಕೆ ಬಂದ ಮೇಲೆ ದೇವತೆಗಳಂತೆ ನಡೆಯಬೇಕು, ದೇವತಾ ದೇಹವು ಬಲವತ್ತರವಾದುದು, ಅದಕ್ಕೆ ವಿಧಿ ಬೇರೆ ಎಂದು ಅರ್ಜುನನು ಹೇಳಿದನು.

ಅರ್ಥ:
ಮನುಷ್ಯ: ನರ; ಶರೀರ: ದೇಹ; ಧರ್ಮ: ಧಾರಣೆ ಮಾಡಿದುದು; ಅವಸಾನ: ಅಂತ್ಯ; ಪರಿಯಂತ: ವರೆಗೂ; ವ್ಯಭಿಚಾರ: ಅಪಾಮಾರ್ಗ; ವರ್ತಿಸು: ನಡೆದು, ಸಾಗು; ಬಳಿಕ: ನಂತರ; ತ್ರಿದಶ: ದೇವತೆ;ಬಂದು: ಆಗಮಿಸು; ಮಾರ್ಗ: ದಾರಿ; ನಡೆ: ಸಾಗು; ದೇವತೆ: ಸುರ; ದೇಹ: ತನು; ಬಲ: ಬಲಿಷ್ಟ; ವಿಶೇಷ: ಅಸಾಮಾನ್ಯ, ವಿಶಿಷ್ಟ; ವಿಧಿ: ನಿಯಮ;

ಪದವಿಂಗಡಣೆ:
ಇದು +ಮನುಷ್ಯ +ಶರೀರ +ತದ್ಧ
ರ್ಮದಲಿ+ ತನ್+ಅವಸಾನ +ಪರಿಯಂತ್
ಇದರೊಳ್+ಅವ್ಯಭಿಚಾರದಲಿ+ ವರ್ತಿಸಿದ+ ಬಳಿಕಿನಲಿ
ತ್ರಿದಶರಲ್ಲಿಗೆ +ಬಂದರ್+ಆ+ ಮಾ
ರ್ಗದಲಿ +ನಡೆವುದು +ದೇವತಾ +ದೇ
ಹದಲಿ+ ಬಲವತ್ತರವು+ ದೇಹ +ವಿಶೇಷ +ವಿಧಿಯೆಂದ

ಅಚ್ಚರಿ:
(೧) ಶರೀರ, ದೇಹ; ತ್ರಿದಶ, ದೇವತ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ