ಪದ್ಯ ೨೧: ಊರ್ವಶಿಯು ಬ್ರಹ್ಮನನ್ನು ಜರೆದುದೇಕೆ?

ಏಕೆ ನುಡಿದನೊ ಚಿತ್ರಸೇನನ
ದೇಕೆ ನಾ ಕೈಗೊಂಡೆನೆತ್ತಣ
ಕಾಕು ಮೂಳಗೆ ಕೋಳುವೋದೆನೊ ಕಾಮನೆಂಬುವಗೆ
ಲೋಕವರ್ತಕನಲ್ಲದಿವನನ
ದೇಕೆ ವಿಧಿ ನಿರ್ಮಿಸಿದನೋ ನಾ
ನೇಕೆ ನರನೇಕೆನುತ ಸುಯ್ದಳು ಬೈದು ಕಮಲಜನ (ಅರಣ್ಯ ಪರ್ವ, ೯ ಸಂಧಿ, ೨೧ ಪದ್ಯ)

ತಾತ್ಪರ್ಯ:
ಚಿತ್ರಸೇನನು ಏಕಾದರೂ ನನಗೆ ಈ ಕೆಲಸವನ್ನು ಹೇಳಿದನೋ, ನಾನೇಕೆ ಇದಕ್ಕೆ ಒಪ್ಪಿಕೊಂಡೆನೋ, ಅರಿವಿಲ್ಲದ ನೀಚನಾದ ಕಾಮನೆನ್ನುವವನಿಗೆ ನಾನೇಕೆ ವಶಳಾದೆನೋ, ಲೋಕದಲ್ಲಿ ಎಲ್ಲರಂತೆ ವರ್ತಿಸದಿರುವ ಇವನನ್ನು ಬ್ರಹ್ಮನು ಏಕೆ ಹುಟ್ಟಿಸಿದನೋ, ನಾನೇಕೆ ಅರ್ಜುನನೇಕೆ ಎಂದು ಊರ್ವಶಿಯು ವಿಧಿಯನ್ನು ಬೈದು ನಿಟ್ಟುಸಿರಿಟ್ಟಳು.

ಅರ್ಥ:
ನುಡಿ: ಮಾತು; ಕೈಗೊಳ್ಳು: ಸ್ವೀಕರಿಸು; ಕಾಕು: ವ್ಯಂಗ್ಯ; ಮೂಳ: ತಿಳಿಗೇಡಿ, ಮೂಢ; ಕೋಳು:ಹೊಡೆತ, ಕೈಸೆರೆ; ಕಾಮ: ಮನ್ಮಥ; ಲೋಕ: ಜಗತ್ತು; ವರ್ತಕ: ವ್ಯಾಪಾರಿ; ವಿಧಿ: ಆಜ್ಞೆ, ಆದೇಶ, ನಿಯಮ; ನಿರ್ಮಿಸು: ರಚಿಸು; ನರ: ಅರ್ಜುನ; ಸುಯ್ದು: ನಿಟ್ಟುಸಿರು; ಬೈದು: ಜರೆ; ಕಮಲಜ: ಬ್ರಹ್ಮ;

ಪದವಿಂಗಡಣೆ:
ಏಕೆ +ನುಡಿದನೊ +ಚಿತ್ರಸೇನನದ್
ಏಕೆ +ನಾ +ಕೈಗೊಂಡೆನ್+ಎತ್ತಣ
ಕಾಕು +ಮೂಳಗೆ +ಕೋಳುವೋದೆನೊ+ ಕಾಮನೆಂಬುವಗೆ
ಲೋಕ+ವರ್ತಕನಲ್ಲದ್+ಇವನನ್
ಅದೇಕೆ +ವಿಧಿ +ನಿರ್ಮಿಸಿದನೋ +ನಾ
ನೇಕೆ +ನರನೇಕ್+ಎನುತ +ಸುಯ್ದಳು +ಬೈದು +ಕಮಲಜನ

ಅಚ್ಚರಿ:
(೧) ಏಕೆ, ನಾನೇಕೆ, ಅದೇಕೆ – ಪ್ರಶ್ನೆಗಳನ್ನು ಸೂಚಿಸುವ ಪದಗಳ ಬಳಕೆ
(೨) ಅರ್ಜುನನನ್ನು ಜರೆಯುವ ಪರಿ – ಲೋಕವರ್ತಕನಲ್ಲದಿವನನದೇಕೆ ವಿಧಿ ನಿರ್ಮಿಸಿದನೋ

ನಿಮ್ಮ ಟಿಪ್ಪಣಿ ಬರೆಯಿರಿ