ಪದ್ಯ ೨೦: ಊರ್ವಶಿಯು ಯಾವ ಭಾವಗಳಿಗೆ ಒಳಪಟ್ಟಳು?

ನುಡಿಗೆ ಬೆರಗಾದಳು ಮನೋಜನ
ಸಡಗರಕೆ ತಗ್ಗಿದಳು ಪಾರ್ಥನ
ನಡವಳಿಗೆ ಮೆಚ್ಚಿದಳು ಬೆಚ್ಚಿದಳಂಗಜಾಸ್ತ್ರದಲಿ
ಕಡುಗಿದಳು ಖಾತಿಯಲಿ ಲಜ್ಜೆಯ
ಬಿಡೆಯದಲಿ ಭಯಗೊಂಡಳಂಗನೆ
ಮಿಡುಕಿದಳು ವಿವಿಧಾನುಭಾವದ ರಸದ ಭಂಗಿಯಲಿ (ಅರಣ್ಯ ಪರ್ವ, ೯ ಸಂಧಿ, ೨೦ ಪದ್ಯ)

ತಾತ್ಪರ್ಯ:
ಅರ್ಜುನನ ಮಾತನ್ನು ಕೇಳಿ ಊರ್ವಶಿಯು ಬೆರಗಾದಳು, ಮನ್ಮಥನ ತಾಪದಿಂದ ತಗ್ಗಿದಳು, ಅರ್ಜುನನ ನಡವಳಿಕೆಗೆ ಮೆಚ್ಚಿದಳು, ಆದರೆ ಕಾಮಶರದ ಕಾಟಕ್ಕೆ ಬೆಚ್ಚಿದಳು, ಸಿಟ್ಟಿನಿಂದ ಸಿಡಿಮಿಡಿಗೊಂಡು ಕೆರಳಿದಳು, ಲಜ್ಜೆ ದಾಕ್ಷಿಣ್ಯದಿಂದ ಭಯಪಟ್ಟಳು, ಹೀಗೆ ಹಲವು ಭಾವಗಳ ತಾಕಲಾಟಕ್ಕೆ ಊರ್ವಶಿಯು ಒಳಗಾದಳು.

ಅರ್ಥ:
ನುಡಿ: ಮಾತು; ಬೆರಗು: ಆಶ್ಚರ್ಯ; ಮನೋಜ: ಕಾಮ, ಮನ್ಮಥ; ಸಡಗರ: ಉತ್ಸಾಹ, ಸಂಭ್ರಮ; ತಗ್ಗು: ಕುಗ್ಗು, ಕುಸಿ; ನಡವಳಿಗೆ: ನಡತೆ, ವರ್ತನೆ; ಮೆಚ್ಚು: ಒಲುಮೆ, ಪ್ರೀತಿ; ಬೆಚ್ಚು: ಭಯ, ಹೆದರಿಕೆ; ಅಂಗಜ: ಮನ್ಮಥ, ಕಾಮ; ಅಸ್ತ್ರ: ಆಯುಧ; ಕಡುಗು: ಶಕ್ತಿಗುಂದು; ಖಾತಿ: ಕೋಪ, ಕ್ರೋಧ; ಲಜ್ಜೆ: ನಾಚಿಕೆ; ಬಿಡೆಯ: ದಾಕ್ಷಿಣ್ಯ; ಭಯ: ಹೆದರಿಕೆ; ಅಂಗನೆ: ಹೆಂಗಸು; ಮಿಡುಕು: ಅಲುಗಾಟ, ಚಲನೆ; ವಿವಿಧ: ಹಲವಾರು; ಅನುಭಾವ: ಅತೀಂದ್ರಿಯವಾದ ಅನುಭವ, ಸಾಕ್ಷಾತ್ಕಾರ; ರಸ: ಸಾರ; ಭಂಗಿ: ಬೆಡಗು, ಒಯ್ಯಾರ;

ಪದವಿಂಗಡಣೆ:
ನುಡಿಗೆ +ಬೆರಗಾದಳು +ಮನೋಜನ
ಸಡಗರಕೆ +ತಗ್ಗಿದಳು +ಪಾರ್ಥನ
ನಡವಳಿಗೆ +ಮೆಚ್ಚಿದಳು +ಬೆಚ್ಚಿದಳ್+ಅಂಗಜ+ಅಸ್ತ್ರದಲಿ
ಕಡುಗಿದಳು+ ಖಾತಿಯಲಿ +ಲಜ್ಜೆಯ
ಬಿಡೆಯದಲಿ +ಭಯಗೊಂಡಳ್+ಅಂಗನೆ
ಮಿಡುಕಿದಳು +ವಿವಿಧ+ಅನುಭಾವದ +ರಸದ +ಭಂಗಿಯಲಿ

ಅಚ್ಚರಿ:
(೧) ಬೆರಗು, ಮೆಚ್ಚು, ಬೆಚ್ಚು, ಭಯ, ಮಿಡುಕು, ತಗ್ಗು – ಭಾವಗಳನ್ನು ವಿವರಿಸುವ ಪದ

ನಿಮ್ಮ ಟಿಪ್ಪಣಿ ಬರೆಯಿರಿ