ಪದ್ಯ ೨೦: ಊರ್ವಶಿಯು ಯಾವ ಭಾವಗಳಿಗೆ ಒಳಪಟ್ಟಳು?

ನುಡಿಗೆ ಬೆರಗಾದಳು ಮನೋಜನ
ಸಡಗರಕೆ ತಗ್ಗಿದಳು ಪಾರ್ಥನ
ನಡವಳಿಗೆ ಮೆಚ್ಚಿದಳು ಬೆಚ್ಚಿದಳಂಗಜಾಸ್ತ್ರದಲಿ
ಕಡುಗಿದಳು ಖಾತಿಯಲಿ ಲಜ್ಜೆಯ
ಬಿಡೆಯದಲಿ ಭಯಗೊಂಡಳಂಗನೆ
ಮಿಡುಕಿದಳು ವಿವಿಧಾನುಭಾವದ ರಸದ ಭಂಗಿಯಲಿ (ಅರಣ್ಯ ಪರ್ವ, ೯ ಸಂಧಿ, ೨೦ ಪದ್ಯ)

ತಾತ್ಪರ್ಯ:
ಅರ್ಜುನನ ಮಾತನ್ನು ಕೇಳಿ ಊರ್ವಶಿಯು ಬೆರಗಾದಳು, ಮನ್ಮಥನ ತಾಪದಿಂದ ತಗ್ಗಿದಳು, ಅರ್ಜುನನ ನಡವಳಿಕೆಗೆ ಮೆಚ್ಚಿದಳು, ಆದರೆ ಕಾಮಶರದ ಕಾಟಕ್ಕೆ ಬೆಚ್ಚಿದಳು, ಸಿಟ್ಟಿನಿಂದ ಸಿಡಿಮಿಡಿಗೊಂಡು ಕೆರಳಿದಳು, ಲಜ್ಜೆ ದಾಕ್ಷಿಣ್ಯದಿಂದ ಭಯಪಟ್ಟಳು, ಹೀಗೆ ಹಲವು ಭಾವಗಳ ತಾಕಲಾಟಕ್ಕೆ ಊರ್ವಶಿಯು ಒಳಗಾದಳು.

ಅರ್ಥ:
ನುಡಿ: ಮಾತು; ಬೆರಗು: ಆಶ್ಚರ್ಯ; ಮನೋಜ: ಕಾಮ, ಮನ್ಮಥ; ಸಡಗರ: ಉತ್ಸಾಹ, ಸಂಭ್ರಮ; ತಗ್ಗು: ಕುಗ್ಗು, ಕುಸಿ; ನಡವಳಿಗೆ: ನಡತೆ, ವರ್ತನೆ; ಮೆಚ್ಚು: ಒಲುಮೆ, ಪ್ರೀತಿ; ಬೆಚ್ಚು: ಭಯ, ಹೆದರಿಕೆ; ಅಂಗಜ: ಮನ್ಮಥ, ಕಾಮ; ಅಸ್ತ್ರ: ಆಯುಧ; ಕಡುಗು: ಶಕ್ತಿಗುಂದು; ಖಾತಿ: ಕೋಪ, ಕ್ರೋಧ; ಲಜ್ಜೆ: ನಾಚಿಕೆ; ಬಿಡೆಯ: ದಾಕ್ಷಿಣ್ಯ; ಭಯ: ಹೆದರಿಕೆ; ಅಂಗನೆ: ಹೆಂಗಸು; ಮಿಡುಕು: ಅಲುಗಾಟ, ಚಲನೆ; ವಿವಿಧ: ಹಲವಾರು; ಅನುಭಾವ: ಅತೀಂದ್ರಿಯವಾದ ಅನುಭವ, ಸಾಕ್ಷಾತ್ಕಾರ; ರಸ: ಸಾರ; ಭಂಗಿ: ಬೆಡಗು, ಒಯ್ಯಾರ;

ಪದವಿಂಗಡಣೆ:
ನುಡಿಗೆ +ಬೆರಗಾದಳು +ಮನೋಜನ
ಸಡಗರಕೆ +ತಗ್ಗಿದಳು +ಪಾರ್ಥನ
ನಡವಳಿಗೆ +ಮೆಚ್ಚಿದಳು +ಬೆಚ್ಚಿದಳ್+ಅಂಗಜ+ಅಸ್ತ್ರದಲಿ
ಕಡುಗಿದಳು+ ಖಾತಿಯಲಿ +ಲಜ್ಜೆಯ
ಬಿಡೆಯದಲಿ +ಭಯಗೊಂಡಳ್+ಅಂಗನೆ
ಮಿಡುಕಿದಳು +ವಿವಿಧ+ಅನುಭಾವದ +ರಸದ +ಭಂಗಿಯಲಿ

ಅಚ್ಚರಿ:
(೧) ಬೆರಗು, ಮೆಚ್ಚು, ಬೆಚ್ಚು, ಭಯ, ಮಿಡುಕು, ತಗ್ಗು – ಭಾವಗಳನ್ನು ವಿವರಿಸುವ ಪದ

ಪದ್ಯ ೧೯: ಅರ್ಜುನನು ಊರ್ವಶಿಯನ್ನು ಹೇಗೆ ನೋಡಿದನು?

ಏನು ಬಿಜಯಂಗೈದಿರಿತ್ತಲು
ಮಾನನಿಧಿ ಕುಳ್ಳಿರಿ ಸುರೇಂದ್ರನ
ಮಾನಿನಿಯರಭಿವಂದನೀಯರು ನಾವ್ ಕೃತಾರ್ಥರಲ
ಏನುಬೆಸಸೆನಗೇನು ಹದ ನಿಮ
ಗಾನು ಮಗನುಪಚಾರವೇಕೆ ಮ
ನೋನುರಾಗದಲರುಹಿಯೆಂದನು ಪಾರ್ಥನೂರ್ವಶಿಗೆ (ಅರಣ್ಯ ಪರ್ವ, ೯ ಸಂಧಿ, ೧೯ ಪದ್ಯ)

ತಾತ್ಪರ್ಯ:
ಊರ್ವಶಿಯನ್ನು ಕಂಡ ಅರ್ಜುನನು ಆಕೆಯ ಬಳಿ ಬಂದು, ಏನು ನೀವು ಇತ್ತ ದಯಮಾಡಿಸಿದಿರಿ, ಮಹಾಮಾನನಿಧಿಯಾದವರು ನೀವು, ದಯೆಯಿಟ್ಟು ಆಸೀನರಾಗಿರಿ, ನೀವು ಇಂದ್ರನ ಮಹಿಳೆ, ನಮಸ್ಕಾರಕ್ಕೆ ಯೋಗ್ಯರಾದವರು, ನಿಮ್ಮ ಅಪ್ಪಣೆಯನ್ನು ನೀಡಿರಿ, ಏನು ಹೇಳಲು ಬಂದಿರಿ, ನಾನು ನಿಮಗೆ ಮಗ, ಉಪಚಾರದ ಮಾತುಗಳನ್ನು ಬಳಸದೆ ಸಂತೋಷದಿಂದ ಹೇಳಿರಿ ಎಂದು ಅರ್ಜುನನು ಹೇಳಿದನು.

ಅರ್ಥ:
ಬಿಜಯಂಗೈ: ದಯಮಾಡಿಸಿದಿರಿ, ಬಂದಿರಿ; ಮಾನ: ಗೌರವ, ಮರ್ಯಾದೆ; ನಿಧಿ: ನಿಕ್ಷೇಪ, ಸಮುದ್ರ; ಮಾನನಿಧಿ: ಶ್ರೇಷ್ಠವಾದವ; ಕುಳ್ಳಿರಿ: ಆಸೀನರಾಗಿರಿ; ಸುರೇಂದ್ರ: ಇಂದ್ರ; ಸುರ: ದೇವತೆ; ಇಂದ್ರ: ಒಡೆಯ; ಮಾನಿನಿ: ಹೆಣ್ಣು; ಅಭಿವಂದನೆ: ಗೌರವದಿಂದ ಮಾಡುವ ನಮಸ್ಕಾರ; ಕೃತಾರ್ಥ: ಧನ್ಯ; ಬೆಸಸು: ಆಜ್ಞಾಪಿಸು; ಹದ: ರೀತಿ, ಸರಿಯಾದ ಸ್ಥಿತಿ; ಮಗ: ಸುತ; ಉಪಚಾರ: ಸತ್ಕಾರ; ಮನ: ಮನಸ್ಸು; ಅನುರಾಗ: ಪ್ರೀತಿ; ಅರುಹು: ತಿಳಿಸು, ಹೇಳು;

ಪದವಿಂಗಡಣೆ:
ಏನು +ಬಿಜಯಂಗೈದಿರ್+ಇತ್ತಲು
ಮಾನನಿಧಿ+ ಕುಳ್ಳಿರಿ +ಸುರೇಂದ್ರನ
ಮಾನಿನಿಯರ್+ಅಭಿವಂದನೀಯರು +ನಾವ್+ ಕೃತಾರ್ಥರಲ
ಏನು+ಬೆಸಸ್+ಎನಗೇನು +ಹದ +ನಿಮಗ್
ಆನು+ ಮಗನ್+ಉಪಚಾರವೇಕೆ+ ಮ
ನೋನುರಾಗದಲ್+ಅರುಹಿ+ಎಂದನು +ಪಾರ್ಥನ್+ಊರ್ವಶಿಗೆ

ಅಚ್ಚರಿ:
(೧) ಮಾನನಿಧಿ, ಮಾನಿನಿ – ಪದಗಳ ಬಳಕೆ

ಪದ್ಯ ೧೮: ಅರ್ಜುನನು ಏನು ಯೋಚಿಸಿ ಮಂಚದಿಂದ ಕೆಳಗಿಳಿದ?

ಹಾ ಮಹಾದೇವಿ ಯಿವಳಾ ಸು
ತ್ರಾಮನೋಲಗದೊಳಗೆ ನರ್ತನ
ರಾಮಣೀಯಕ ರಚನೆಯಲಿ ರಂಜಿಸಿದಳಾ ಸಭೆಯ
ಈ ಮಹಿಳೆಯಭಿವಂದನೀಯೆ ನಿ
ರಾಮಯದ ಶಶಿವಂಶ ಜನನಿ ಸ
ನಾಮೆಯಲ್ಲಾ ಶಿವಯೆನುತ ಮಣಿಮಂಚದಿಂದಿಳಿದ (ಅರಣ್ಯ ಪರ್ವ, ೯ ಸಂಧಿ, ೧೮ ಪದ್ಯ)

ತಾತ್ಪರ್ಯ:
ಓಹೋ! ಈ ದೇವಿಯು ಇಂದ್ರನ ಸಭೆಯಲ್ಲಿ ರಮಣೀಯವಾಗಿ ನೃತ್ಯವನ್ನು ಮಾಡಿ ರಂಜಿಸಿದಳಲ್ಲವೇ! ಇವಳು ಚಂದ್ರವಂಶಕ್ಕೆ ತಾಯಿಯಲ್ಲವೇ! ಇವಳು ಅಭಿವಂದನೆಗೆ ಯೋಗ್ಯಳು, ಶಿವ ಶಿವಾ ಇಲ್ಲಿವೆ ಬಂದಿದ್ದಾಳೆ ಎಂದು ಯೋಚಿಸುತ್ತಾ ಅರ್ಜುನನು ಮಣಿಮಂಚದಿಂದ ಕೆಳಗಿಳಿದನು.

ಅರ್ಥ:
ಸುತ್ರಾಮ: ಇಂದ್ರ; ಓಲಗ: ದರ್ಬಾರು; ನರ್ತನ: ನೃತ್ಯ; ರಾಮಣೀಯಕ: ಚೆಲುವು; ರಚನೆ: ನಿರ್ಮಿಸು; ರಂಜಿಸು: ಶೋಭಿಸು; ಸಭೆ: ದರ್ಬಾರು; ಮಹಿಳೆ: ಸ್ತ್ರೀ; ಅಭಿವಂದನೆ: ಗೌರವದಿಂದ ಮಾಡುವ ನಮಸ್ಕಾರ; ನಿರಾಮಯ: ನೆಮ್ಮದಿ, ಸಂತೋಷ; ಶಶಿ: ಚಂದ್ರ; ವಂಶ: ಕುಲ; ಜನನಿ: ತಾಯಿ; ಸನಾಮ: ಶ್ರೇಷ್ಠವಾದ ಹೆಸರು; ಮಣಿ: ರತ್ನ; ಮಂಚ: ಪಲ್ಲಂಗ; ಇಳಿ: ಕೆಳಕ್ಕೆ ಬಾ;

ಪದವಿಂಗಡಣೆ:
ಹಾ +ಮಹಾದೇವಿ +ಇವಳಾ +ಸು
ತ್ರಾಮನ್+ಓಲಗದೊಳಗೆ +ನರ್ತನ
ರಾಮಣೀಯಕ+ ರಚನೆಯಲಿ+ ರಂಜಿಸಿದಳ್+ಆ +ಸಭೆಯ
ಈ+ ಮಹಿಳೆ+ಅಭಿವಂದನೀಯೆ +ನಿ
ರಾಮಯದ +ಶಶಿವಂಶ +ಜನನಿ +ಸ
ನಾಮೆಯಲ್ಲಾ+ ಶಿವ+ಎನುತ +ಮಣಿ+ಮಂಚದಿಂದ್+ಇಳಿದ

ಅಚ್ಚರಿ:
(೧) ರ ಕಾರದ ತ್ರಿವಳಿ ಪದ – ರಾಮಣೀಯಕ ರಚನೆಯಲಿ ರಂಜಿಸಿದಳಾ
(೨) ಊರ್ವಶಿಯನ್ನು ಹೊಗಳುವ ಪರಿ – ಈ ಮಹಿಳೆಯಭಿವಂದನೀಯೆ ನಿರಾಮಯದ ಶಶಿವಂಶ ಜನನಿ ಸನಾಮೆಯಲ್ಲಾ

ಪದ್ಯ ೧೭: ಅರ್ಜುನನು ಯಾರನ್ನು ಕಂಡನು?

ಹರಮಹಾದೇವೀಯಘಾಟದ
ಪರಿಮಳವಿದೆತ್ತಣದೆನುತ ಮೈ
ಮುರಿದು ಕಂಡನಪೂರ್ವ ಪರಿಮಳ ಸಾರದಲಿ ಪಾರ್ಥ
ಕಿರಣಲಹರಿಯ ದಿವ್ಯ ರತ್ನಾ
ಭರಣ ರುಚಿರತರ ಪ್ರಭಾ ಪಂ
ಜರದೊಳಗೆ ಹೊಳೆಹೊಳೆವ ಮದನಾಲಸೆಯನೂರ್ವಶಿಯ (ಅರಣ್ಯ ಪರ್ವ, ೯ ಸಂಧಿ, ೧೭ ಪದ್ಯ)

ತಾತ್ಪರ್ಯ:
ಶಿವ ಶಿವಾ, ಇಂತಹ ಅಪೂರ್ವ ಪರಿಮಳವು ಎಲ್ಲಿಂದ ಹರಡುತ್ತಿದೆ ಎಂದು ಮಲಗಿದ್ದ ಅರ್ಜುನನು
ಮೈಮುರಿದು ತಿರುಗಿದನು. ಪರಿಮಳಸಾರವನ್ನು ಬೀರುತ್ತಾ ದಿವ್ಯರತ್ನಾಭರಣಗಳ ಕಿರಣಗಳ ಪ್ರಭಾ ಪಂಜರದ ನಡುವೆ ನಿಂತ ಕಾಮನಿಂದ ಪೀಡಿತಳಾದ ಊರ್ವಶಿಯನ್ನು ಕಂಡನು.

ಅರ್ಥ:
ಹರ: ಶಿವ; ಮಹಾದೇವ: ಶಂಕರ; ಅಘಾಟ: ಅದ್ಭುತ, ಅತಿಶಯ; ಪರಿಮಳ: ಸುಗಂಧ; ಮೈ: ತನು; ಮುರಿ: ಸೀಳು; ಮೈಮುರಿ: ದೇಹವನ್ನು ಅಲ್ಲಾಡಿಸು; ಕಂಡು: ನೋಡು; ಅಪೂರ್ವ: ಹಿಂದೆಂದೂ ಕಾಣದ, ಆಶ್ಚರ್ಯ; ಸಾರ: ರಸ; ಕಿರಣ: ಕಾಂತಿ; ಲಹರಿ: ಅಲೆ, ರಭಸ, ಆವೇಗ; ದಿವ್ಯ: ಶ್ರೇಷ್ಠ; ರತ್ನಾಭರಣ: ಒಡವೆ; ರುಚಿರ: ಸೌಂದರ್ಯ, ಚೆಲುವು; ಪ್ರಭೆ: ಕಾಂತಿ; ಪಂಜರ: ಗೂಡು; ಹೊಳೆ: ಪ್ರಕಾಶಿಸು; ಮದನಾಲಸೆ: ಮನ್ಮಥಪೀಡಿತಳು;

ಪದವಿಂಗಡಣೆ:
ಹರ+ಮಹಾದೇವ್+ಈ+ಅಘಾಟದ್
ಪರಿಮಳವಿದ್+ಎತ್ತಣದ್+ಎನುತ+ ಮೈ
ಮುರಿದು +ಕಂಡನ್+ಅಪೂರ್ವ +ಪರಿಮಳ +ಸಾರದಲಿ +ಪಾರ್ಥ
ಕಿರಣ+ಲಹರಿಯ +ದಿವ್ಯ +ರತ್ನಾ
ಭರಣ+ ರುಚಿರತರ +ಪ್ರಭಾ +ಪಂ
ಜರದೊಳಗೆ +ಹೊಳೆಹೊಳೆವ +ಮದನಾಲಸೆಯನ್+ಊರ್ವಶಿಯ

ಅಚ್ಚರಿ:
(೧) ಊರ್ವಶಿಯು ಸೌಂದರ್ಯದ ಪಂಜರದಲ್ಲಿ ಬಂಧಿಯಾಗಿದ್ದಳು, ಅತೀವ ಸುಂದರಿ ಎಂದು ಹೇಳುವ ಪರಿ – ರುಚಿರತರ ಪ್ರಭಾ ಪಂಜರದೊಳಗೆ ಹೊಳೆಹೊಳೆವ ಮದನಾಲಸೆಯನೂರ್ವಶಿಯ

ಪದ್ಯ ೧೬: ಪಾರ್ಥನು ಹೇಗೆ ಮೋಹಗೊಂಡನು?

ಎಳೆಯ ಬೆಳದಿಂಗಳವೊಲೀಕೆಯ
ತಳತಳಿಪ ಮುಖ ಚಂದ್ರಮನ ತಂ
ಬೆಳಗು ಸುಳಿದುದು ಸಾರತರ ಪರಿಮಳದ ಪೂರದಲಿ
ತಿಳಿದುದೀತನ ನಿದ್ರೆ ಕರಣಾ
ವಳಿಯ ಪರಮಪ್ರೀತಿ ರಸದಲಿ
ಮುಳುಗಿ ಸುಖಭಾರದಲಿ ಭುಲ್ಲವಿಸಿದನು ಕಲಿಪಾರ್ಥ (ಅರಣ್ಯ ಪರ್ವ, ೯ ಸಂಧಿ, ೧೬ ಪದ್ಯ)

ತಾತ್ಪರ್ಯ:
ಎಳೆಯ ಬೆಳದಿಂಗಳ ಕಾಂತಿಯಂತೆ ದೇಹ ಪರಿಮಳದೊಡನೆ ಊರ್ವಶಿಯ ಮುಖಚಂದ್ರನ ಕಾಂತಿಯು ಎಲ್ಲೆಡೆ ಹಬ್ಬಿತು, ಒಡನೆ ಅರ್ಜುನನ ನಿದ್ರೆ ತಿಳಿದು, ಇಂದ್ರಿಯಗಳಿಗುಂಟಾದ ಸಂತೋಷ ಸುಖದಲ್ಲಿ ಮುಳುಗಿ, ಸುಖದ ಭಾರದಿಂದ ಮೋಹಗೊಂಡನು.

ಅರ್ಥ:
ಎಳೆ: ಚಿಕ್ಕ; ಬೆಳದಿಂಗಳು: ಪೂರ್ಣಿಮೆ; ತಳತಳಿಪ: ಹೊಳೆವ; ಮುಖ: ಆನನ; ಚಂದ್ರ: ಇಂದು; ತಂಬೆಳಗು: ತಂಪಾದ ಕಾಂತಿ; ಸುಳಿ: ಕಾಣಿಸಿಕೊಳ್ಳು; ಸಾರ: ರಸ; ಪರಿಮಳ: ಸುಗಂಧ; ಪೂರ: ಪೂರ್ತಿಯಾಗಿ, ಬಹಳವಾಗಿ; ತಿಳಿ: ಅರಿ; ನಿದ್ರೆ: ಶಯನ; ಕರಣ:
ಜ್ಞಾನೇಂದ್ರಿಯ, ಕಿವಿ, ಮನಸ್ಸು; ಆವಳಿ: ಗುಂಪು, ಸಾಲು; ಪರಮ: ಶ್ರೇಷ್ಠ; ಪ್ರೀತಿ: ಒಲವು; ರಸ: ಸಾರ; ಮುಳುಗು: ತೋಯು; ಸುಖ: ಸಂತಸ್; ಭಾರ: ಹೊರೆ; ಭುಲ್ಲವಿಸು: ಅತಿಶಯಿಸು; ಕಲಿ: ಶೂರ;

ಪದವಿಂಗಡಣೆ:
ಎಳೆಯ+ ಬೆಳದಿಂಗಳವೊಲ್+ಈಕೆಯ
ತಳತಳಿಪ +ಮುಖ +ಚಂದ್ರಮನ +ತಂ
ಬೆಳಗು+ ಸುಳಿದುದು +ಸಾರತರ+ ಪರಿಮಳದ +ಪೂರದಲಿ
ತಿಳಿದುದ್+ಈತನ +ನಿದ್ರೆ +ಕರಣಾ
ವಳಿಯ +ಪರಮ+ಪ್ರೀತಿ +ರಸದಲಿ
ಮುಳುಗಿ +ಸುಖಭಾರದಲಿ+ ಭುಲ್ಲವಿಸಿದನು +ಕಲಿಪಾರ್ಥ

ಅಚ್ಚರಿ:
(೧) ಉಪಮಾನದ ಪ್ರಯೋಗ – ಎಳೆಯ ಬೆಳದಿಂಗಳವೊಲೀಕೆಯ ತಳತಳಿಪ ಮುಖ ಚಂದ್ರಮನ ತಂಬೆಳಗು ಸುಳಿದುದು ಸಾರತರ ಪರಿಮಳದ ಪೂರದಲಿ
(೨) ಅತೀವ ಸುಖ ಎಂದು ಹೇಳಲು – ಸುಖಭಾರದಲಿ ಭುಲ್ಲವಿಸಿದನು ಕಲಿಪಾರ್ಥ