ಪದ್ಯ ೯: ಊರ್ವಶಿಯು ಸುಲಭದಲ್ಲಿ ದೊರಕುವವಳೇ?

ಧರಣಿಪತಿ ಕೇಳವರ ತೊತ್ತಿರ
ಹೊರಗೆಲಸದವದಿರ ಪಸಾಯಿತೆ
ಯರಿಗೆ ಪಡಿಗವ ನೀಡಸಲ್ಲರು ಸೋಮಯಾಜಿಗಳು
ವರುಣಸೂನು ಜಯಂತ ನಳಕೂ
ಬರರು ಸಮಯವನೊಮ್ಮೆ ಕಾಣದೆ
ವರುಷವೋಲೈಸುವರು ಸೌಧದ ದಾರವಟ್ಟದಲಿ (ಅರಣ್ಯ ಪರ್ವ, ೯ ಸಂಧಿ, ಪದ್ಯ ೯)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಊರ್ವಶಿಯು ಎಷ್ಟು ದುರ್ಲಭಳೆಂದು, ಅವಳಿರಲಿ, ಅವಳ ಮನೆಯ ಆಳುಗಳ ಸೇವಕಿಯರಿಗಿರಲಿ, ಆ ಸೇವಕಿಯರ ಆಪ್ತ ಸ್ನೇಹಿತೆಯರಿಗೆ ತಾಂಬೂಲವನ್ನುಗುಳಲು ಪೀಕದಾನಿ ಹಿಡಿಯುವುದಕ್ಕೂ ಸೋಮಯಾಗ ಮಾದಿ ಸ್ವರ್ಗಕ್ಕೆ ಬಂದವರಿಗೆ ಸಾಧ್ಯವಿಲ್ಲ. ವರುಣನ ಮಗ, ಜಯಂತ, ನಳಕೂಬರರು ಅವಳನ್ನು ಕಾಣಲು, ಅವಳ ಮನೆಯ ಹೆಬ್ಬಾಗಿಲಲ್ಲಿ ಒಂದು ವರ್ಷ ಕಾಯಬೇಕಾಯಿತು.

ಅರ್ಥ:
ಧರಣಿಪತಿ: ರಾಜ; ಧರಣಿ: ಭೂಮಿ;ತೊತ್ತು: ದಾಸಿ, ಸೇವಕಿ; ಹೊರ: ಆಚೆ; ಕೆಲಸ: ಕಾರ್ಯ; ಪಸಾಯ: ಉಡುಗೊರೆ; ಪಡಿಗ: ತೊಳೆದ ನೀರನ್ನು ಗ್ರಹಿಸುವ ಪಾತ್ರೆ; ನೀಡು: ತೆಗೆದುಕೋ; ಸಲ್ಲ:ಸರಿಯಲ್ಲ, ಯೋಗ್ಯವಲ್ಲದು; ಯಾಜಿ:ಯಾಗವನ್ನು ಮಾಡಿಸುವವನು, ಯಜ್ಞ; ವರುಣ: ನೀರಿನ ಅಧಿದೇವತೆಯೂ ಪಶ್ಚಿಮ ದಿಕ್ಪಾಲಕನೂ ಆಗಿರುವ ಒಬ್ಬ ದೇವತೆ; ಸೂನು: ಮಗ; ಸಮಯ: ಕಾಲ; ವರುಷ: ಸಂವತ್ಸರ; ಓಲೈಸು: ಉಪಚರಿಸು; ಸೌಧ: ಮನೆ; ದಾರವಟ್ಟ: ಹೆಬ್ಬಾಗಿಲು;

ಪದವಿಂಗಡಣೆ:
ಧರಣಿಪತಿ+ ಕೇಳ್+ಅವರ +ತೊತ್ತಿರ
ಹೊರ+ಕೆಲಸದವದಿರ+ ಪಸಾಯಿತೆ
ಯರಿಗೆ +ಪಡಿಗವ +ನೀಡಸಲ್ಲರು+ ಸೋಮಯಾಜಿಗಳು
ವರುಣಸೂನು +ಜಯಂತ +ನಳಕೂ
ಬರರು+ ಸಮಯವನ್+ಒಮ್ಮೆ +ಕಾಣದೆ
ವರುಷವ್+ಓಲೈಸುವರು+ ಸೌಧದ+ ದಾರವಟ್ಟದಲಿ

ಅಚ್ಚರಿ:
(೧) ಹೆಬ್ಬಾಗಿಲೆನ್ನಲು ದಾರವಟ್ಟ ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ