ಪದ್ಯ ೨: ಊರ್ವಶಿಯು ಹೇಗೆ ಸಿಂಗಾರಗೊಂಡಳು?

ವನಜಲೋಚನೆ ಮಾಡಿದಳು ಮ
ಜ್ಜನವನಮಳ ದುಕೂಲ ಪರಿ ಮಂ
ಡನದಲೆಸೆದಳು ವಿವಿಧ ರತ್ನಾಭರಣ ಶೋಭೆಯಲಿ
ತನತನಗೆ ಭರಣಿಗಳ ಲನುಲೇ
ಪನವ ತಂದರು ವಿಳಸದಧಿವಾ
ಸನೆಯ ಕುಸುಮದ ಮೊಗ್ಗೆಯಲಿ ರಚಿಸಿದರು ಸಿರಿಮುಡಿಯ (ಅರಣ್ಯ ಪರ್ವ, ೯ ಸಂಧಿ, ೨ ಪದ್ಯ)

ತಾತ್ಪರ್ಯ:
ಕಮಲಲೋಚನೆಯಾದ ಊರ್ವಶಿಯು ಸ್ನಾನ ಮಾಡಿ, ಉತ್ತಮವಾದ ರೇಷ್ಮೆ ವಸ್ತ್ರವನ್ನು ತೊಟ್ಟು, ರತ್ನಾಭರಣಗಳನ್ನು ಧರಿಸಿದಳು. ಸಖಿಯರು ಭರಣಿಗಳಲ್ಲಿ ಅನುಲೇಪಗಳನ್ನು ತಂದುಕೊಟ್ಟು, ಸುಗಂಧ ಪೂರಿತವಾದ ಹೂವಿನ ಮೊಗ್ಗುಗಳಿಂದ ಅವಳ ಮುಡಿಯನ್ನು ಅಲಂಕರಿಸಿದಳು.

ಅರ್ಥ:
ವನಜ: ಕಮಲ; ಲೋಚನೆ: ಕಣ್ಣು; ಮಜ್ಜನ: ಸ್ನಾನ; ದುಕೂಲ: ರೇಷ್ಮೆ ಬಟ್ಟೆ; ಪರಿ: ರೀತಿ; ಮಂಡನ:ಸಿಂಗರಿಸುವುದು, ಅಲಂಕರಿಸುವುದು; ಎಸೆ: ತೋರು; ವಿವಿಧ: ಹಲವಾರು; ರತ್ನ: ಬೆಲೆಬಾಳುವ ಮಣಿ; ಆಭರಣ: ಒಡವೆ; ಶೋಭೆ: ಚೆಲುವು, ಕಾಂತಿ, ಹೊಳಪು; ಭರಣಿ: ಒಡವೆ, ವಸ್ತುಗಳನ್ನು ಇಡುವ ಮುಚ್ಚಳವಿರುವ ಸಂಪುಟ, ಡಬ್ಬಿ ಅನುಲೇಪ: ತೊಡೆತ, ಬಳಿಯುವಿಕೆ; ವಾಸನೆ: ಸುಗಂಧ; ಕುಸುಮ: ಹೂವು; ಮೊಗ್ಗೆ: ಪೂರ್ತಿಯಾಗಿ ಅರಳದೆ ಇರುವ ಹೂವು, ಮುಗುಳು; ರಚಿಸು: ನಿರ್ಮಿಸು; ಸಿರಿ: ಶ್ರೇಷ್ಠ; ಮುಡಿ: ತಲೆ, ಶಿರ;

ಪದವಿಂಗಡಣೆ:
ವನಜಲೋಚನೆ+ ಮಾಡಿದಳು +ಮ
ಜ್ಜನವನ್+ಅಮಳ +ದುಕೂಲ +ಪರಿ+ ಮಂ
ಡನದಲ್+ಎಸೆದಳು +ವಿವಿಧ +ರತ್ನಾಭರಣ +ಶೋಭೆಯಲಿ
ತನತನಗೆ+ ಭರಣಿಗಳಲ್ +ಅನುಲೇ
ಪನವ +ತಂದರು +ವಿಳಸದ್+ಅಧಿ+ವಾ
ಸನೆಯ +ಕುಸುಮದ +ಮೊಗ್ಗೆಯಲಿ +ರಚಿಸಿದರು+ ಸಿರಿ+ಮುಡಿಯ

ಅಚ್ಚರಿ:
(೧) ಶೃಂಗರಿಸುವ ಪರಿ – ವಿಳಸದಧಿವಾಸನೆಯ ಕುಸುಮದ ಮೊಗ್ಗೆಯಲಿ ರಚಿಸಿದರು ಸಿರಿಮುಡಿಯ

ನಿಮ್ಮ ಟಿಪ್ಪಣಿ ಬರೆಯಿರಿ